ಪ್ರಕೃತಿ ಮಾತೆಯ ಒಡಲ ಸಿರಿ ನೇಪಾಳದಲ್ಲಿ ಒಂದು ದಿನ ಕಳೆದ ನಾನು ಮಾನಸ ಸರೋವರಕ್ಕೆ ಹೊರಡಲು ಸಿದ್ಧನಾದೆ. ಹಾಗೆ ೨೭-೦೬-೨೦೦೯ ರಂದು ಬೆಳಿಗ್ಗೆ 6 ಘಂಟೆಗೆ ಚುಮು ಚುಮು ಛಳಿಗೆ ನೇಪಾಳದಿಂದ ಹೊರಟೆವು.ನಮ್ಮನ್ನು ಕರೆದುಕೊಂಡು ಹೋಗಲು ಚೆಟ್ಟಿಯಾರ್ ಅವರು ಸಾಮ್ರಾಟ್ ಟ್ರಾವೆಲ್ಸ್ ಗೆ ಜವಾಬ್ದಾರಿ ನೀಡಿದ್ದರು. ದಿನೇಶ್ ಪಾಂಡೆ ಎಂಬವರು ನಮಗೆ ಗೈಡ್ ಆಗಿ ಇದ್ದರು.ಸುಮಾರು ೪೦ ಜನರ ನಮ್ಮ ತಂಡ ೨ ಬಸ್ಸಿನಲ್ಲಿ ಹೊರಟೆವು.ಬಸ್ಸಿನಲ್ಲಿ ನಮ್ಮದೇ ಆದ ೧೦ ಜನರ ಕರ್ನಾಟಕದ ತಂಡ ಬಸ್ಸಿನ ಹಿಂಬದಿ ಆಸನದಲ್ಲಿ ಕೂತು ನಮ್ಮ ಊರು ಮತ್ತು ಈ ಪ್ರಕೃತಿಯ ಹೋಲಿಕೆಯನ್ನು ಚರ್ಚೆ ಮಾಡುತ್ತಿದ್ದೆವು.ನಮ್ಮ ಊರಿನಲ್ಲಿ ಅಡಿಕೆ ಕೃಷಿ ಇದ್ದಂತೆ ಇಲ್ಲಿ ಜೋಳದ ಕೃಷಿ ಉತ್ತಮವಾಗಿ ಬೆಳೆಯುತ್ತದೆ.ಒಂದು ಬದಿಯಲ್ಲಿ ಕೆಲವು ಜನ ನಿದ್ರೆ ತೂಗುತ್ತಿದ್ದರೆ ಇನ್ನೊಂದು ಬದಿಯ ಕಿಟಕಿಯಲ್ಲಿ ನಾನು ನನ್ನ ಕ್ಯಾಮರಾದಲ್ಲಿ ಇಲ್ಲಿನ ಪ್ರಕೃತಿಯ ಸುಂದರ ತಾಣವನ್ನು ಚಿತ್ರೀಕರಿಸುತ್ತಿದ್ದೆ.ಹೀಗೆ ಮುಂದೆ ಹೋಗುತ್ತಿದ್ದಾಗ ಗಂಡಕೀ ನದಿಯ ತಟ ಎದುರಾಯಿತು.ಊರಿನಿದ ಹೋಗುವಾಗ ನನ್ನ ಕೆಲವು ಹಿರಿಯರು ಈ ನದಿಯಲ್ಲಿ ಶಾಲಿಗ್ರಾಮ ದೊರೆಯುತ್ತದೆ ಎಂದು ಹೇಳಿದ್ದರು.ಹಾಗೆ ಪಾಂದೆಯವರಲ್ಲಿ ನಾನು ಈ ವಿಷಯ ಕೇಳಿದಾಗ ಅದನ್ನು ತೆಗೆದುಕೊಳ್ಳಲು ಅನುಮತಿಯಿಲ್ಲ ಎಂದು ಹೇಳಿದರು.ಇದು ಹರಿಯುವ ಮೂಲ ಸ್ಥಳದಲ್ಲಿ ಜಲಪಾತ ಇದೆ. ಭೋರ್ಗರೆಯುವ ಈ ಜಲಪಾತ ಸುಮಾರು ೨೦೦ ಮೀಟರ್ ಎತ್ತರದಿಂದ ಧುಮುಕುತ್ತಿತ್ತು.ಈ ಧುಮುಕುವ ಸ್ಥಳದಲ್ಲಿ ಶಾಲಿಗ್ರಾಮವಿದೆಯನ್ತೆ. ನಮ್ಮನ್ನು ಯಾಕೆ ಈ ಸ್ಥಳಕ್ಕೆ ಹೋಗಲು ಅನುಮತಿ ಕೊಟ್ಟಿಲ್ಲ ಎಂದು ಪಾಂದೆಯವರಲ್ಲಿ ಕೇಳಿದೆ. ಆಗ ಈ ಹಿಂದೆ ಬಂದ ಕೆಟ್ಟ ಚಾರಣಿಗರ ಪುರಾಣವನ್ನೇ ಚಾಚೂ ತಪ್ಪದೆ ಹೇಳಿದರು. ಇಲ್ಲಿನ ಪ್ರಕೃತಿಮಾತೆಯ ಉಳಿವಿಗಾಗಿ ನಾವೆಲ್ಲ ಅಳಿಲ ಸೇವೆ ಮಾಡೋಣ ಎಂದು ನನ್ನನ್ನು ಸಮಧಾನಿಸಿದರು. ನಾನು ಒಲ್ಲದ ಮನಸ್ಸಿನಿಂದ ಪಾಂಡೆಯವರ ಒತ್ತಾಯಕ್ಕೆ ಮಣಿದು ಪ್ರಕೃತಿ ಮಾತೆಯ ಸವಿಯನ್ನು ಆಸ್ವಾದಿಸುತ್ತಾ ಮುಂದೆ ಬಸ್ಸಿಗೆ ಏರಿ ಪ್ರಯಾಣ ಮುಂದುವರಿಸಿದೆ.ಅಲ್ಲಿಂದ ಮುಂದೆ ಒಂದು ಕಡೆ ವಿಶಾಲವಾದ ಬಯಲಿನಲ್ಲಿ ನಮ್ಮ ಟ್ರಾವೆಲ್ಸ್ ನವರು ಅಡಿಗೆ ಮಾಡಿ ಪ್ರಕೃತಿ ಮಾತೆಯನ್ನು ಆಸ್ವಾದಿಸುತ್ತಾ ನಾವೆಲ್ಲ ಜೋಳದ ರೊಟ್ಟಿ ದಾಲ್ ಸವಿದೆವು.ಅಲ್ಲಿಯೇ ಸ್ವಲ್ಪ ನಿದ್ರಾ ದೇವಿಗೆ ಶರಣಾಗುವ ಹೊತ್ತಿಗೆ ಪಾಂಡೆಯವರ ಕರೆ ಬಂತು.ಇನ್ನೂ ಪ್ರಯಾಣ ೨೦೦ ಕಿಮೀ ಇದೆ.ಬೇಗ ತಯಾರಾಗಿ ಎಂದು.ನಾವು ಮುಂದಕ್ಕೆ ಪ್ರಯಾಣ ಬೆಳೆಸಿದೆವು.ದಾರಿ ಮಧ್ಯದಲ್ಲಿ ಚೀನಾ ಗಡಿಯಲ್ಲಿ ತುಂಬಾ ರೀತಿಯಲ್ಲಿ ದೈಹಿಕ ಪರೀಕ್ಷೆ ಇದೆ.ಆದರಿಂದ ತಾವೆಲ್ಲ ನಿಧಾನವಾಗಿ ಸಹಕರಿಸ ಬೇಕೆಂದು ಪಾಂಡೆಯವರು ನಮ್ಮಲ್ಲಿ ಬಿನ್ನವಿಸಿಕೊಂಡರು. ನಾವು ನಮ್ಮ ಪಾಸ್ಪೋರ್ಟ್ ಇತ್ಯಾದಿ ದಾಖಲೆ ಗಳನ್ನು ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಂಡೆವು. ಈ ಮಧ್ಯದಲ್ಲಿ ಬಸ್ಸು ಏರುಪೇರಾದ ರಸ್ತೆ {ಘಾಟ್} ಗಳಲ್ಲಿ ನಮ್ಮನ್ನು ಕರೆದು ಕೊಂಡು ಹೋಗುತ್ತಾ ಇತ್ತು .ಘಾಟ್ ಗಳಲ್ಲಿ ಒಂದೊಂದೇ ತಿರುವು ಏರುತ್ತಾ ಹೋದಂತೆ ನಮಗೆ ಕೆಳಗೆ ನೋಡಿದಾಗ ಮೈ ಜುಂ ಆಯಿತು .ನಮ್ಮ ಊರಿನಂತೆ ರಸ್ತೆಗಳು ಇಲ್ಲಿ ಅಗಲ ಇಲ್ಲ. ರಸ್ತೆ ಬಿಟ್ಟು ಕೇವಲ ಅರ್ಧ ಅಡಿ ದೂರದಲ್ಲಿ ಕಣ್ಣು ಎತ್ತದಷ್ಟು ಆಳ ನಾವು ನೋಡಿದಾಗ ಎಂಥವರಿಗೂ ಮೈ ಜುಂ ಎನ್ನಬಹುದು.ಹೀಗೆ ಹೋಗುತ್ತಿರುವಾಗ ಒಂದು ತಿರುವು ಬಂದಾಗ ನಮ್ಮ ಬಸ್ಸಿನ ಚಾಲಕ ತುಂಬಾ ವೇಗವಾಗಿ ಬಸ್ಸನ್ನು ಚಲಾಯಿಸಿದನು.ಆಗ ನಾನು ಮತ್ತು ನನ್ನೊಡನೆ ಕಿಟಕಿಯಲ್ಲಿ ಘಾಟಿಯ ಆಳವನ್ನು ನೋಡುತ್ತಿದ್ದ ಕೇಶವಣ್ಣ ಏಕ ಕಾಲಕ್ಕೆ ಹೆದರಿ ಬೊಬ್ಬೆ ಹಾಕಿದೆವು.ನಮ್ಮ ಬೊಬ್ಬೆಗೆ ಮಹಿಳಾ ಪ್ರಯಾಣಿಕರು ನಮ್ಮಿಂದ ದೊಡ್ಡ ಸ್ವರದಲ್ಲಿ ಹೆದರಿ ಬೊಬ್ಬೆ ಹಾಕಿದರು.ಈ ಬೊಬ್ಬೆಯನ್ನು ಕೇಳಿ ಚಾಲಕನು ಒಂದು ಕ್ಷಣ ಬಸ್ ನಿಲ್ಲಿಸಿ ಏನೆಂದು ಕೇಳಿದನು.ಕೋಯೀ ಪ್ರಾಬ್ಲೆಂ ನಹೀ ಎಂದು ಹೇಳಿದಾಗ ಚಾಲಕನು ಅಷ್ಟೇಯ? ಎಂದು ಹೇಳಿದನು.ಈ ಚಾಲನೆಯನ್ನು ನಾವು ಗಮನಿಸಿದಾಗ ಅವನ ಧೈರ್ಯಕ್ಕೆ ಮೆಚ್ಚಿದೆ. .
ಹೀಗೆ ಮುಂದೆ ಹೋಗುತ್ತಿದ್ದಂತೆ ಸಾಂಬಾ ಗಡಿ ಎದುರಾಯಿತು.ಈ ಸಾಂಬ ಎಂಬ ಸ್ಥಳ ಟಿಬೆಟ್ ಮತ್ತು ಚೀನಾ ದೇಶದ ಗಡಿಪ್ರದೆಶವಾಗಿದೆ.ನೇಪಾಳ ದೇಶದ ಗಡಿ ದಾಟಿದ ಕೂಡಲೇ ಕೇವಲ ೧೦ಕಿಮೇ ದೂರ ಮಾತ್ರ ಟಿಬೆಟ್ ದೇಶದಲ್ಲಿ ನಾವು ಪ್ರಯಾಣ ಮಾಡಿದ್ದೆವು.ಈ ಟಿಬೆಟ್ ದೇಶವು ಚೀನಾದ ಹಿಡಿತದಲ್ಲಿದೆ. ಇಲ್ಲಿನ ಮಹಾ ಯುದ್ಧದ ಪ್ರಭಾವ ಜನ ಜೀವನದ ಮೇಲೆ ತುಂಬಾ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದೆ. ನಮ್ಮ ಬ್ಯಾಗನ್ನು ಹೊರಲು ಚಿಕ್ಕ ಮಕ್ಕಳು ಪುಡಿಗಾಸಿಗಾಗಿ ಜಗಳಾಡುತ್ತಿರುವುದನ್ನು ಕಂಡಾಗ ನನಗೆ ಅಯ್ಯೋ ಎನಿಸಿತು. ಅವರ ಬಡತನದ ಸ್ಥಿತಿ ಹೇಗಿತ್ತೆಂದರೆ ಚಾರಣಿಗರು ತಿಂದು ಉಳಿದು ಬಿಸಾಡಿದ ತಿಂಡಿಯ ಪ್ಯಾಕೆಟ್ ಗಾಗಿ ಜಗಳವಾಡುವುದನ್ನು ಕಂಡಾಗ ಎಂಥವರಿಗೂ ಅಯ್ಯೋ ಎನಿಸ ಬಹುದು. ನನಗೆ ಆಗ ಇದ್ದ ಹಸಿವು ತಾನಗಿಯೇ ಅಡಗಿತು. ಆಗ ನಾನು ಬಸ್ನಿಂದ ನನ್ನ ಬ್ಯಾಗನ್ನು ಇಳಿಸಲು ಮುಂದಾದಾಗ ಅಂಕಲ್ ಜೀ ಎಂದು ಒಬ್ಬಳು ಸುಮಾರು ಆರು ವರ್ಷದ ಹುಡುಗಿ ನನ್ನ ಬ್ಯಾಗನ್ನು ಎತ್ತಿ ಕೂಲಿ ಮಾಡಲಾ ಎಂದು ಕೇಳಿದಳು.ಅವಳ ಆ ಸ್ವರದಿಂದ ನಾನು ಒಂದು ಕ್ಷಣ ಮುಖ ನೋಡಿದೆ. ಆಗ ಅವಳು ಖಾನಾ ಎಂದು ಕೇಳಿದಳು.ನಾನು ನಿಜವಾಗಿ ಕರಗಿ ಹೋಗಿದ್ದೆ ನಮ್ಮ ಊರಿನ ಭಿಕ್ಷುಕರಿಂದ ತುಂಬಾ ಭಿನ್ನ ರೀತಿಯಲ್ಲಿ ಕಂಡಿತು.ಇಲ್ಲಿ ೧ ರೂ ಗಿಂತ ಹೆಚ್ಚು ಹಾಕದವ ಹಿಂದೂ ಮುಂದು ಆಲೋಚನೆ ಮಾಡದೆ ನಮ್ಮ ಭಾರತದ ೧೦೦ ರೂ ಗಳ ನೋಟನ್ನು ಅವಳ ಕೈಗೆ ಕೊಟ್ಟು ಅವಳ ಕೆನ್ನೆ ಮುಟ್ಟಿ ತಲೆ ನೇವರಿಸಿದಾಗ ನನಗೆ ಅರಿವಿಲ್ಲದೇ ನನ್ನ ಕಣ್ಣಿಂದ ಎರಡು ಹನಿ ಕಣ್ಣೀರು ಬಂದದನ್ನು ಅವಳು ಗಮನಿಸಿದಳು.ಈ ರೂಪಾಯಿ ಕೊಡುವುದನ್ನು ದೂರದಿಂದ ಅವಳ ತಾಯಿ ಗಮನಿಸುತ್ತಿದ್ದಳು. ಇವಳ ತಾಯಿ ನನ್ನಲ್ಲಿದ್ದ ೫೦ಕೇಜೀ ಬ್ಯಾಗನ್ನು ಹೊರಲು ಓಡಿ ಬಂದಳು. ಆಗ ನಾನು ಪರವಾಗಿಲ್ಲ ಎಂದು ಹೇಳಿ ಬ್ಯಾಗನ್ನು ತಲೆಗೆ ಏರಿಸಿ ಮುಂದೆ ನಡೆಯುತ್ತಿದ್ದಾಗ ಪಾಂಡೆಯವರು ಹೇಳಿದರು.ನಮ್ಮ ಟ್ರಾವೆಲ್ಸ್ ನಿಂದ ಅವಳಿಗೆ ಪಗಾರ ಕೊಡುತ್ತೇವೆ.ಬ್ಯಾಗ್ ಕೊಡಿ ಎಂದರು.ನಾನು ಕೊಟ್ಟ ೧೦೦ ರೂ ಗಳ ನೋಟನ್ನು ಆ ಹುಡುಗಿ ಅವಳ ತಾಯಿಯ ಹತ್ತಿರ ಕೊಟ್ಟಳು.ಧನ್ಯವಾದ ಎಂದು ನನಗೆ ಆ ತಾಯಿ ಎರಡೂ ಕೈ ಮುಗಿದಾಗ ನನಗೆ ಏನು ಹೇಳಬೇಕೆಂದು ತೋಚದೆ ಮೂಕನಾಗಿ ನಿಂತೆ.ಅಂದರೆ ಅವರಲ್ಲಿರುವ ಕೃತಜ್ಞಾತಾ ಭಾವ ನನ್ನನ್ನು ನಾಚಿಸಿತು. ಹೀಗೆ ಅವಳು ನನ್ನ ಬ್ಯಾಗ್ ಹೊತ್ತುಕೊಂಡು ಸುಮಾರು ೧ ಕಿಮೀ ದೂರದ ಸಾಂಬಾ ಗಡಿಗೆ ಕರೆದು ಕೊಂಡು ಹೋದಳು.ಅಲ್ಲಿ ನನ್ನ ಬ್ಯಾಗನ್ನು ಇಳಿಸಿದಾಗ ನಾನು ಅವಳಿಗೆ ಹಣ ಕೊಡಲು ಮುಂದಾದಾಗ ನನ್ನ ಕೈ ಯನ್ನು ಹಿಡಿದು ನೀವು ಕೊಟ್ಟದ್ದು ಧಾರಳವಾಯಿತು ಎಂದು ಕೈ ಭಾಷೆ ಮಾಡಿದಳು.ಹೋಗಿ ಬನ್ನಿ ಎಂದು ತಾಯಿ ಮಗಳು ಟಾ ಟಾ ಮಾಡಿ ಹೊರಟೇ ಬಿಟ್ಟರು. ನಾನು ಅವರು ಹೋಗುವುದನ್ನೇ ನೋಡುತ್ತಾ ನಿಂತಿರುವಾಗ ಪಾಂಡೆಯವರು ನನ್ನ ಭುಜಕ್ಕೆ ಕೈ ಇತ್ತು ನೀವು ೧೬ನೆ ವ್ಯಕ್ತಿ ಯಾಗಿ ಇಲ್ಲಿರಬೇಕು ಎಂದು ಈ ಕ್ಯೂ ನಲ್ಲಿ ನಿಲ್ಲಿ ಎಂದು ಚೀನಾದ ವೀಸಾಕ್ಕೆ ಅರ್ಜಿ ಫಾರಂ ತುಂಬಿ ನನ್ನ ಕೈ ಯಲ್ಲಿ ಕೊಟ್ಟರು.ನಾನು ಆ ತಾಯಿಗೆ ಕಣ್ಣಿಗೆ ಕಾಣುವಷ್ಟು ದೂರದಿಂದ ಟಾ ಟಾ ಮಾಡಿ ದೈಹಿಕ ಪರೀಕ್ಷೆಗೆ ತಯಾರಾದೆ.ಘಂಟೆ ಸಂಜೆ ೬.00 ನನ್ನ ಸರದಿ ಬಂತು.ದೈಹಿಕ ಪರೀಕ್ಷೆ ಈ ಎನ್ ಟೀ ,ಬೀಪೀ ಎಲ್ಲ ನಡೆಸಿದರು.ಎಲ್ಲ ರೀತಿಯಲ್ಲಿ ಆರೋಗ್ಯ ಸರಿಯಾಗಿದೆ ಎಂದು ಪ್ರವಾಸೀ ವೀಸಾ ,ಪಾಸ್ಪೋರಿಟಿಗೆ ಟೆಬೆಟ್ ಡಿಪಾರ್ಚರ್ ಸೀಲು ಹಾಕಯಾದರೂ ಮತ್ತೆ ಕೆಲವು ಪರೀಕ್ಷೆ ಗಳನ್ನು ನಡೆಸಿ ಸುಮಾರು ರಾತ್ರಿ ೮.೩೦ಕ್ಕೆ ನಮ್ಮನ್ನು ಚೀನಾ ದೇಶದ ಪಟ್ಟಣಕ್ಕೆ ಹೋಗಲು ಅನುಮತಿ ಕೊಟ್ಟರು. ನಾವು ಅಲ್ಲೇ ಒಂದು ವಸತಿ ಗೃಹದಲ್ಲಿ ಊತ್ತ ವಿಶ್ರಾಂತಿ ಪಡೆದೆವು.ರಾತ್ರಿ ಮಲಗುವಾಗ ತಾಯಿ ಮಗಳ ದಯನೀಯ ಸ್ಥಿತಿ ಮತ್ತೆ ನೆನಪಾಯಿತು ..............