ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Wednesday, December 30, 2009

ಮಾನಸ ಸರೋವರ ಯಾತ್ರೆ-೨೩

 
 
ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮಚಿಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ...ಇಂದು ಜೀವನದ ಧನ್ಯತೆ ಏನೆಂದು ಅರಿವಾಗುತ್ತಿದೆ..ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ ನಾಚಿಕೆ ದಿನೇ ದಿನೇ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ೨೨ ದಿನಗಳ ಅಲೆದಾಟ ಅವಿಸ್ಮರಣೀಯ....ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಅನೇಕ ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿರುತ್ತಾನೆ. ಮಗು ನಡೆಯೋದಕ್ಕೆ ಶುರು ಮಾಡ್ಬೇಕು ಅಂತಂದ್ರೆ, ತಾನೇ ಬೋರಲು ಬಿದ್ದೋ, ಅಂಬೆಗಾಲಿಟ್ಟೋ, ಮುಂದೆ ಎದ್ದು ನಿಂತು, ನಂತರ ಒಂದೊಂದೇ ಹೆಜ್ಜೆ ಇಟ್ಟು, ಎದ್ದು-ಬಿದ್ದು, ಗೋಡೆ ಹಿಡಿದು, ಇಲ್ಲಾ ಅಪ್ಪ ಅಮ್ಮನ ಕೈಬೆರಳನ್ನು ಹಿಡಿದೋ ನೆಡೆದು ಮುಂದೊಂದು ದಿನ ತನ್ನ ಕಾಲ ಮೇಲೆ ತಾನೇ ನೆಡೆಯುವಂತಾಗುತ್ತಾನೆ/ಳೆ. ಹಾಗೆಯೇ ಸೃಜನಶೀಲತೆ(ಕ್ರಿಯೇಟಿವಿಟಿ) ಕೂಡ. ಎಲ್ಲರಲ್ಲೂ ಒಂದಲ್ಲಾ ಒಂದು ತೆರನಾದ ಸೃಜನಶೀಲತೆ ಹುಟ್ಟಿನಿಂದಲೋ, ಬೆಳೆಯುತ್ತಾ ಹೋದಂತೆ ಮೈಗೂಡಿಸಿಕೊಂಡಂತೆಯೂ ಇರುತ್ತದೆ. ತನ್ನ ಸಾಮರ್ಥ್ಯವನ್ನು ಅರಿತು, ತಾನೇನು ಹೊಸತನ್ನು ಮಾಡಬಲ್ಲೆನು ಎಂದು ಗುರುತಿಸಿಕೊಳ್ಳುವವರೆಗೂ, ಆತ್ಮವಿಶ್ವಾಸದಿಂದ ಮುನ್ನೆಡೆದು ಏನನ್ನಾದರೂ ಮಾಡಿ ಸಾಧಿಸುವವರೆಗೂ ಮನುಷ್ಯನಿಗೆ ಅದರ ಅರಿವು ಇರುವುದೇ ಇಲ್ಲ....ಪ್ರಕೃತಿ ಮಾತೆಯೆಂಬ ಶಾಲೆಯಲ್ಲಿ ನಾವು ನಿರಂತರವೂ ವಿದ್ಯಾರ್ಥಿಗಳೇ..ಅನಂತವಾದ ಈ ಸೃಷ್ಟಿಯಲ್ಲಿ ಕೇವಲ ಕೆಲವೊಂದು ವಿಸ್ಮಯವನ್ನು ಪ್ರಕೃತಿಯಿಂದ ವಿಜ್ಞಾನ ಲೋಕಕ್ಕೆ ಸಂಬಂಧ ಪಡಿಸಿದಾಗ ನಮ್ಮ ಈ ಜಗತ್ತು ಎಂಥಹ ಅದ್ಭುತ !!!!!!!!!!ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?ನಾವು ಆ ಸೂರ್ಯೋದಯದಲ್ಲಿ ದಾರ್ಚಿನ್ ನಿಂದ ಸುಮಾರು ೫ ಕಿಲೋ ಮೀಟರುಗಳಷ್ಟು ದೂರದ "ಅಷ್ಟಪಾದ " ಎನ್ನುವ ಒಂದು ಔಷಧೀ ಸಸ್ಯತೋಟಕ್ಕೆ ಚಾರಣ ಮಾಡಲು ಮುಂದಾದೆವು.ಅದು ಕೈಲಾಸ ಪರ್ವತದ ದಕ್ಷಿಣ ಭಾಗ..ಸುಮಾರು ಎರಡು ಗುಡ್ಡ ಹತ್ತಿದರೆ ಆ ಸ್ಥಳ ಸಿಗುತ್ತದೆ ಎಂದು ಪಾಂಡೆ ಹೇಳಿದರು. ಹಾಗೆ ಪಾಂಡೆಯವರ ಜೊತೆಗೆ ಹೆಜ್ಜೆ ಹಾಕಿದೆವು.ದಾರಿಯಲ್ಲಿ ನಮ್ಮಷ್ಟಕ್ಕೆ ಖುಷಿಯಿಂದ ತಮಾಷೆ ಮಾತುಗಳನ್ನಾಡುತ್ತಾ, ಕೈಲಾಸ ಪರ್ವತವನ್ನು ಹತ್ತಿರ,ಇನ್ನೂ ಹತ್ತಿರ,ಎಂದು ಹೇಳುತ್ತಾ ಆ ಔಷಧೀ ವನ ತಲುಪಿದ್ದು ತಿಳಿಯಲೇ ಇಲ್ಲ.ಆ ಪ್ರದೇಶಕ್ಕೆ ಕಾಲಿಟ್ಟೊಡನೆ ಆ ಪ್ರದೇಶವು ಸುಗಂಧಭರಿತವಾಗಿ ನಮ್ಮನ್ನು ಸ್ವಾಗತಿಸಿತು.ಎಲ್ಲರೂ ಆ ವನಗಳ ಮಧ್ಯೆ ಕುಳಿತೆವು.ಸುಮಾರು ೫೦ ಕಿ.ಮೀ.ಗಳಷ್ಟು ವಿಸ್ತೀರ್ಣವಿದೆ ಆ ಪ್ರದೇಶ. ಪುಷ್ಪಗಳಿಂದ ಅಲಂಕೃತವಾದ ಅಲ್ಲಿನ ಸಸ್ಯಗಳು ಎಲ್ಲವೂ ಒಂದು ಅಡಿಗಿಂತ ಹೆಚ್ಚು ಎತ್ತರವಿರಲಿಲ್ಲ.ಆ ಹಸಿರಿನ ಮೇಲೆ ಮೈ ಚಾಚಿ ,ಮೌನವಾಗಿ ಕುಳಿತಾಗ ಕೈಲಾಸ ಪರ್ವತವು ಸೂರ್ಯನ ಶಾಖದಿಂದ ವಿವಿಧ ರೂಪವನ್ನು ಪ್ರದರ್ಶಿಸುವುದು ತುಂಬಾ ವಿಸ್ಮಯವಾಗಿ ಕಂಡಿತು.ಅಲ್ಲಿಯೇ ಕುಳಿತು ಒಂದು ಘಂಟೆಯಷ್ಟು ಕಾಲ ಧ್ಯಾನ ಮಾಡಿದೆ.ತುಂಬಾ ಸಂತೃಪ್ತಿ ಭಾವನೆ ದೊರೆಯಿತು..ಅಂತಹ ಭಾವನೆಯನ್ನು ಕರುಣಿಸಿದ ಹಿಮಾಲಯಗಳ ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.ನನ್ನ ಜೊತೆಗೆ ಬಂದಿದ್ದ ಕೆಲವು ಮಹಿಳಾ ಚಾರಣಿಗರು ಹೂವುಗಳನ್ನು ಹಾಗೂ ಅದರ ಬೀಜಗಳನ್ನು ಸಂಗ್ರಹಿಸಿದರು..ನನಗೆ ಅವುಗಳನ್ನು ಕೊಯ್ಯಲು ಮನಸ್ಸಾಗಲಿಲ್ಲ.ಅವುಗಳನ್ನು ಸ್ಪರ್ಶಿಸುತ್ತಾ ಅವುಗಳೊಡನೆ ಮಾತನಾಡಿದಂತೆ ಸಂತೋಷವನ್ನು ಅನುಭವಿಸಿದೆ.ಸ್ವಲ್ಪ ಹೊತ್ತಿನ ಆನಂದಕ್ಕಾಗಿ ಅವುಗಳನ್ನು ಕೀಳುವುದು ಅಸಮಂಜಸವೆಂದೂ, ಅನಗತ್ಯವೆಂದೂ ಕಂಡಿತು.ಅವುಗಳ ಮೂಲಕ ವಿಶ್ವಶಕ್ತಿ ಹೇರಳವಾಗಿ ದೊರೆಯಬಹುದು ಅಲ್ವೇ? ನಾನು ಒಂಟಿಯಾಗಿ ಅಲ್ಲಿ  ತಿರುಗುತ್ತಿದ್ದೆ..ಆಗ ನಮ್ಮ ಶೇರ್ಪಾ ನನ್ನನ್ನು ಕರೆದು ಇಲ್ಲಿ ಬನ್ನಿ ಎಂದನು.ಅಲ್ಲಿ ಒಂದು ಗಿದದಲ್ಲಿರುವ ಹೂವನ್ನು ಅದರ ವಾಸನೆ ನೋಡುವಂತೆ ಹೇಳಿದನು.ಹಾಗೆಯೇ ಮಾಡಿದೆ.ಆ ನಂತರ ಶ್ವಾಸ ಎಳೆಯುವಂತೆ ಹೇಳಿದನು.ಬಹಳ ದೀರ್ಘವಾಗಿ ಉಚ್ವ್ಹಾಸ ನಡೆಯಿತು.ಅದಕ್ಕೆ ಮುಂಚೆ ಯಾವಾಗಲೂ ಅಂತಹ ಅನುಭವ ಆಗಿರಲಿಲ್ಲ.ಹಾಗೆ ಎರಡು ಮೂರು ಬಾರಿ ಮಾಡಿದಾಗ ಹೊಟ್ಟೆ ಒಳಗೆ ಏನೋ ಖಾಲಿ ಆದಂತೆ ಆಯಿತು.ಹೊಸ ಶಕ್ತಿ ಧಾರೆಯೊಂದು ನನ್ನಲ್ಲಿ ಪ್ರವೇಶಿಸಿದಂತೆ ಅನಿಸಿತು.ಆಗ ನಮ್ಮ ಶೇರ್ಪಾ ಈ ಔಷಧೀ ವನದ ಬಗ್ಗೆ ಹೇಳಿದರು.ಇಲ್ಲಿ ಈಗ ನಿಮಗೆ ತೋರಿಸಿದಂತಹ ಇನ್ನೂ ಅನೇಕ ಅದ್ಭುತ ಔಷಧೀ ಸಸ್ಯಗಳಿವೆ.ಇದರ ಮಾಹಿತಿ ತಿಳಿದು ಉಪಯೋಗಿಸಿದರೆ ದೇಹ ಶುದ್ಧಿ,ಚಿತ್ತ ಶುದ್ದಿ ಸಹಜವಾಗಿ ಲಭಿಸುತ್ತದೆ. ವಿದೇಶದಿಂದ ಅನೇಕ ಸಸ್ಯ ಶಾಸ್ತ್ರಜ್ಞರು,ಔಷಧೀಯ ಸಸ್ಯಗಳಿಗಾಗಿಯೂ ,ಇಲ್ಲಿನ ವಿಶಿಷ್ಟ ಹೂಗಳಿಗಾಗಿಯೂ,ಎಲೆಗಳಿಗೆ ಲಕ್ಷಾಂತರ ರೂ.ಖರ್ಚು ಮಾಡಿಕೊಂಡು ಇಲ್ಲಿಗೆ ಬರುತ್ತಾರೆ..ಇಂತಹ ಅದ್ಭುತ ಪ್ರಕೃತಿ ತಾಣಕ್ಕೆ ನಮಿಸಿ ಅಲ್ಲಿಂದ ನಮ್ಮ ರೂಮಿಗೆ ಹೊರಡಲು ತಯಾರಾದೆವು.ಸಮಯ ಮಧ್ಯಾಹ್ನ ೩.೦೦ ಘಂಟೆ.ನಮ್ಮಲ್ಲಿದ್ದ ಬಿಸ್ಕೆಟ್ ಗಳನ್ನೂ ತಿಂದು ನೀರು ಕುಡಿದೆವು.ಎಲ್ಲರಿಗೂ ಬಹಳ ಹಸಿವಾನದಂತೆ ಕಾಣುತ್ತಿತ್ತು.ಎಲ್ಲರ ಕೈಯಲ್ಲಿದ್ದ ಬಿಸ್ಕೆಟ್ ಗಳು ಖಾಲಿಯಾಗಿದ್ದವು.ಎಲ್ಲರ ಮುಖದಲ್ಲಿ ಹಸಿವು ನೀಗಿದ ತೃಪ್ತಿಯಿತ್ತು. ಕೆಲವು ಫೋಟೋಗಳನ್ನು ತೆಗೆದೆವು..ಅಲ್ಲಿನ ಪ್ರಕೃತಿಗೆ ವಿದಾಯ ಹೇಳಿ ಹೊರಡಲು ತಯಾರಾದೆವು.ನನಗೆ ಒಂದು ಕ್ಷಣ ಹೀಗನ್ನಿಸಿತು."ನಾನು ಹಿಂತಿರುಗಿ ಹೋಗದೆ ಈ ಪ್ರದೇಶಗಲ್ಲಿ ಉಳಿದುಬಿಟ್ಟರೆ ಏನಾಗುತ್ತೆ?"ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಂಡೆ.ಈ ಪ್ರಶ್ನೆ ನನ್ನನ್ನು ಬೆನ್ನಟ್ಟಿ ಕಾಡತೊಡಗಿತು.ಎಲ್ಲರೂ ಮುಂದೆ ನಡೆಯುತ್ತಿದ್ದರು.ಅವರಿಂದ ಅರ್ಧ ಕಿ.ಮೀ ಗಳಷ್ಟು ದೂರ ನಾನು ನಡೆಯುತ್ತಲಿದ್ದೆ.ಮತ್ತೆ ನಾನು ಒಂಟಿಯಾದೆ..ನನಗೆ ಹಾಗೆ ನಡೆಯುವುದೇ ಆನಂದವಾಗಿತ್ತು.ಆ ನಡಿಗೆಯಲ್ಲಿ ನನ್ನ ಜೀವನದ ಪರಿಶೀಲನೆ ,ಆತ್ಮ ಅವಗಾಹನೆಯಾಯಿತೋ ಎಂದನಿಸಿತು.,ಮತ್ತೆ ನಾನು ನನ್ನೂರಿಗೆ ಮರಳಬೇಕೆ? ಅಥವಾ ಹೋಗದಿದ್ದರೆ ನನ್ನ ಹೆತ್ತವರಿಗೆ ನಾನು ಕಾಣೆಯಾದ ವಿಷಯ ಹೇಗೆ ತಿಳಿಸುವುದು?ಎಂದೆಲ್ಲ ಗೊಂದಲವಾಯಿತು.ನಡೆಯುತ್ತಿರುವಂತೆ ನಾನು ಹೀಗೆ ಯೋಚನೆ ಮಾಡುತ್ತಿದ್ದೆ.ಹಿಮಾಲಯಗಳಲ್ಲಿ ವಿರಕ್ತಿ,ವೈರಾಗ್ಯ,ಬೇಗ ಸಿದ್ಧಿಸುತ್ತವೆ ಎಂಬ ಮಾತು ಕಥೆಗಳಲ್ಲಿ ಓದಿದ ನೆನಪು ನಿಜವೆನಿಸಿತು.ಯಾಕೆ ನನ್ನಲ್ಲಿ ಈ ಬದಲಾವಣೆ ಬಂತು? ನಮ್ಮ ತಂಡ ಕಣ್ಣಿಗೆ ಕಾಣದಷ್ಟು ದೂರ ಆಯಿತು.ಒಂದೆಡೆ ಭಯ, ಆತಂಕ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಕುಳಿತೆ.ಸಮಯ ಸಂಜೆ ೫.೩೦ ಆಗಿತ್ತು.ಒಂದೆಡೆ ಚಳಿ ಗಾಳಿ.ಮತ್ತೊಂದೆಡೆ ನನ್ನ ಬಗ್ಗೆ ನನಗೆ ಸ್ಥಿಮಿತವಿಲ್ಲ..ಸಂಜೆ ಆಹ್ಲಾದಕರವಾಗಿತ್ತು.ಗಿಡಗಳ ಪೊದರುಗಳಲ್ಲಿ ಪಕ್ಷಿಗಳು ರಹಸ್ಯಗಳೇನನ್ನೋ ಹೇಳಿ ಕೊಡುವಂತಿತ್ತು...ಗಿಡಗಳು  ಗಾಳಿ ಬೀಸುವಾಗ ಅವುಗಳು ಅಲ್ಲಡುತ್ತಿರುವಾಗ ನಿನ್ನ ಮಾತನ್ನು ನಾವೂ ಕೇಳಿಸಿ ಕೊಳ್ಳುತ್ತಿದ್ದೇವೆ ಎನ್ನುತ್ತಾ ತಲೆದೂಗುತ್ತಿರುವಂತೆ ಅಲ್ಲಾಡುತ್ತಿದ್ದವು. ನಡೆಯುತ್ತಿದ್ದ ಕಾಲುಗಳೊಂದಿಗೆಸಂಬಂಧವೇ ಇಲ್ಲದಂತೆ ಮನಸ್ಸು ತನ್ನ ಕೆಲಸದಲ್ಲಿ ತೊಡಗಿತ್ತು. ಹೋಗದೆ ನನ್ನನ್ನು ಕುರಿತಾದ ಸಮಾಚಾರವನ್ನು ನನ್ನ ಮನೆಯವರಿಗೆ ತಿಳಿಸುವುದು ಹೇಗೆ?ಎಂಬ ಅನೇಕ ರೀತಿಯಲ್ಲಿ ಮನಸ್ಸು ಗೊಂದಲವಾಯಿತು.ಯಾವ ಪದ್ಧತಿಯಲ್ಲಿ ಕಳುಹಿಸಿದರೆ ,ಅವರಿಗೆ ನನ್ನ ಬಗ್ಗೆ ಯೋಚನೆ ಇಲ್ಲದೆ ನನ್ನನ್ನು ಮರೆತು ಹೋಗುತ್ತಾರೆ.?ಎಂಬ ಪ್ರಶ್ನೆಗೆ ಉತ್ತರ ಸಿಗದಾಗ ಇಲ್ಲಿಂದ ಹೊರಡುವುದೇ ಉತ್ತಮ ಎಂದು ಕಂಡಿತು.ಈ ಯೋಚನೆ ಬಹಳ ಚೆನ್ನಾಗಿ ಇದ್ದಂತೆ ಅನಿಸಿತು.ಹಾಗೆಯೇ ಮಾಡುತ್ತೇನೆ ಎಂದು ಸಂತೋಷವಾಗಿ ದೃಢವಾಗಿ ನಿಶ್ಚೈಸಿದೆ.ನನ್ನ ಸಂತೋಷ ನಡಿಗೆಯ ವೇಗವನ್ನು ಹೆಚ್ಚಿಸಿತು.ಬೆನ್ನ ಮೇಲಿದ್ದ ಬ್ಯಾಗಿನ ಭಾರ ಹಗುರವಾದಂತಹ ಫೀಲಿಂಗ್. ನನ್ನ ಸಹ ಚಾರಣಿಗರು ದಾರ್ಚಿನ್ ನಲ್ಲಿರುವ ರೂಮಿಗೆ ತಲುಪಿ ಅರ್ಧ ಘಂಟೆಯಲ್ಲಿ ನಾನೂ ತಲುಪಿದೆ. ಹಾಗಾಗಿ ಯಾರಿಗೂ ಸಂಶಯ ಬಂದಿರಲಿಲ್ಲ.ರಾತ್ರಿ ೮.೩೦ ಆಯಿತು.ಊಟ ಮುಗಿಸಿದೆವು.ಮಲಗಿದಾಗ ನಾನು ಮತ್ತೊಮ್ಮೆ ಈ ದಿವಸದ ಅನುಭವಗಲ್ಲು ಮೆಲುಕು ಹಾಕಿದೆ. ನನಗೆ ಸಂತೋಷದ ಅಥವಾ ನೆಮ್ಮದಿಯ ವಿಷಯ ಅಂದರೆ ಇಂದಿನಿಂದ ನನ್ನ ಬಳಿ ತ್ರಿಪ್ತಿಕರ ಉತ್ತರ ಇದೆ.ಈ ಉತ್ತರ ಕಂಡುಕೊಳ್ಳಲು ಪಟ್ಟ ಶ್ರಮವನ್ನು ನೆನೆಸಿಕೊಂಡಾಗ ನಿದ್ರಾ ದೇವತೆ ಪ್ರೇಮದಿಂದ ನನ್ನನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಳು...

Friday, December 11, 2009

ಮಾನಸ ಸರೋವರ ಯಾತ್ರೆ -22












ಆ  ದಿನ ಬೆಳಿಗ್ಗೆ ಎದ್ದಾಗ ಸುಮಾರು ಆರುವರೆ ಗಂಟೆಯಾಗಿತ್ತು. ನಮ್ಮ ಡೇರೆಯಲ್ಲಿ   ಗೊರಕೆ ಹೊಡೆದು ಎದ್ದ ನನಗೆ ಹೊರಗಿನ ಚಳಿಯ ಊಹೆ ಇರಲಿಲ್ಲ. ರಾತ್ರಿ ಮಲಗಿದ್ದ ಡ್ರೆಸ್ಸ್ ಹಾಗೆ ಇತ್ತು. ಎರಡು ಟೀ ಶರ್ಟ್, ಮೇಲೊಂದು ಸ್ವೆಟರ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲು ಚೀಲ, ಕೈಗೆ ಕವಚ, ಇದೆಲ್ಲದರ ಮೇಲೆ ಬೆಚ್ಚಗಿರುವ ಸ್ಲೀಪಿಂಗ್ ಬ್ಯಾಗ್ ಜಿಪ್ ಎಳೆದುಕೊಂಡು ಕೇವಲ ಸ್ವಲ್ಪ ಮುಖ ಹೊರಗೆ ಕಾಣುವ ಹಾಗೆ ಮಲಗಿದ್ದ ಎಲ್ಲರಿಗೂ ನಿದ್ದೆ ಎನ್ನುವುದು ಮರದ ದಿಮ್ಮೆಯಂತೆ ಆಗಿತ್ತು. ಆರುವರೆಗೆ ಎದ್ದ ನಾವು,ಡೇರೆಯ  ಬಾಗಿಲು ತೆಗೆದರೆ ಸುಯ್ಯನೆ ಬಂತು ತಣ್ಣನೆಯ ಗಾಳಿ. ಹೊರೆಗೆ ಏನೂ ಕಾಣಿಸುತ್ತಿರಲಿಲ್ಲ, ಬಾಗಿಲ ಮೂಲಕ ಬಂದ ಗಾಳಿ ನಮ್ಮನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಈ ರೀತಿಯ ಪರಿಸ್ಥಿತಿಯಲ್ಲಿ, ನಡೆಯುವುದು  ಅಸಾಧ್ಯವಾದ ಮಾತು. ನಮ್ಮ ನೈಸರ್ಗಿಕ ಕರೆಗಳನ್ನು ಮುಗಿಸಿಕೊಂಡು ಬಂದು, ಹಲ್ಲು ಉಜ್ಜಿ, ಮುಖ ತೊಳೆದುಕೊಂಡು ಬಂದು ಮತ್ತೆ ಬೆಚ್ಚಗಿನ ನಮ್ಮ ಉಡುಪುಗಳನ್ನು ಧರಿಸಿಕೊಂಡೆವು. ಸುಮಾರು ಏಳುಗಂಟೆ ನಲವತ್ತೈದು ನಿಮಿಷಕ್ಕೆ ಎಲ್ಲರೂ ಒಂದೆಡೆ  ತಲುಪಿ, , ಬ್ರೆಡ್-ಜಾಮ್ ಮತ್ತು  ಹೊಟ್ಟೆಗೆ ಇಳಿಸಿದೆವು. ನಮ್ಮ ದೊಡ್ಡ ಲಗೇಜನ್ನು ನಮ್ಮ ನಮ್ಮ ಯಾಕ್ ಗಳ ಬೆನ್ನಿಗೆ ಕಟ್ಟಲು  ರವಾನಿಸಿ ಅಗತ್ಯವಿದ್ದ ಕಡಿಮೆ ವಸ್ತುಗಳನ್ನು ನಾವು ಹೊತ್ತುಕೊಂಡು, ನಮ್ಮ ನೆರವಿಗೆ ಬೇಕಾದ ಕೋಲುಗಳನ್ನು ಹಿಡಿದು ಹೊರಟಾಗ ಸಮಯ ಒಂಬತ್ತು ಗಂಟೆ. ಆ ನಿಧಾನವಾಗಿ ನಮ್ಮ ನಡಿಗೆ ಶುರುವಾಯಿತು, ಹಿಂದಿನ ದಿನ ನಿತ್ಯ ಮಂಜಿನ ಪರ್ವತಗಳನ್ನು  ದಾಟಿ ಬಂದ ನಮಗೆ ಅಷ್ಟೊಂದು ದಟ್ಟವಾದ ಮಂಜು  ಕಾಣಿಸುತ್ತಿರಲಿಲ್ಲ. ನಡೆಯುತ್ತಾ ನಡೆಯುತ್ತಾ ಮಂಜು  ಕಡಿಮೆಯಾದಂತೆ ಕಾಣಿಸಿತು. ಸುಮಾರು ಒಂದು ಗಂಟೆಯ ಚಾರಣದ  ನಂತರ ಬಿಸಿಲು ಕಾಣಿಸತೊಡಗಿತು. ಹಾಗೆ ಬಿಸಿಲು ಜಾಸ್ತಿಯಾಯಿತು. ಮೈಮೇಲೆ ತೊಟ್ಟಿದ್ದ ಅಧಿಕ ಬಟ್ಟೆಗಳು ಒಂದೊಂದಾಗೆ ಕಳಚಿ ಬ್ಯಾಗನ್ನು ಸೇರತೊಡಗಿದವು. ಕೇವಲ ಎರಡು ಗಂಟೆಗಳಲ್ಲಿ ಹತ್ತು ಡಿಗ್ರಿಯಿಂದ ಸುಮಾರು ಮುವತ್ತು ಡಿಗ್ರಿ ತಾಪಮಾನಕ್ಕೆ ತಲುಪಿದ್ದೆವು. ಇಲ್ಲಿಂದ ಶುರುವಾಯಿತು ತಾಪತ್ರಯ. ಕೆಲವರಿಗೆ ಈ ತಾಪಮಾನದ ಬದಲಾವಣೆ ಸಹಿಸಲು ಆಗಲಿಲ್ಲ. ನಮ್ಮ ಗುಂಪಿನಲ್ಲಿ ಬಹಳ ಚುರುಕಿದ್ದ ಕೇಶವಣ್ಣ  ನಡೆಯಲಾಗದೆ ತನ್ನ ವೇಗವನ್ನು ಕಡಿಮೆ ಮಾಡಿದರು . ಎಲ್ಲರಿಗಿಂತ ಮುಂದಿರುತ್ತಿದ್ದವರು , ನಿಧಾನವಾಗಿ ಕೊನೆಯ ಸ್ಥಾನಕ್ಕೆ ಬಂದರು .ಆಗ ಅವರ ಅವಸ್ಥೆಯನ್ನು ಗಮನಿಸಿ ಶೇರ್ಪಾ ಅವರನ್ನು ಹೆಗಲ ಮೇಲೆ ಹಾಕಿಕೊಂಡು ವೇಗವಾಗಿ ನಡೆದರು..  ಅವರ  ಜೊತೆಗೆ ನಾನೂ ನಡೆದೆ. . ನನಗೆ ಇಂತಹ ಪರಿಸ್ಥಿತಿ ಬರಬಾರದು ಎಂದು ದೇವರಲ್ಲಿ ಮೊರೆ ಇಟ್ಟೆ..  ಮಧ್ಯಾಹ್ನ ೧೨.೩೦ ಕ್ಕೆ  ಚಾರಣಿಗರು   ದೂರದಲ್ಲಿ ಕಾಣುತ್ತಿದ್ದ ಒಂದು ವಿಶಾಲವಾದ ಬಯಲಿನಲ್ಲಿ  ಕುಳಿತು ತಮ್ಮ ತಮ್ಮ ಊಟದ ಪ್ಯಾಕೆಟ್‌ಅನ್ನು ಬಿಚ್ಚಿ ತಿನ್ನುತ್ತಿದ್ದರು. ನಾವು ಅಲ್ಲಿಗೆ ಹೋಗುವುದರೊಳಗೆ ಎಲ್ಲರೂ ಅವರವರ ಊಟವನ್ನು ಮುಗಿಸಿ ವಿಶ್ರಮಿಸುತ್ತಿದರು. ಸುಮಾರು ನಾಲ್ಕು ಗಂಟೆಯ ಪ್ರಯಾಣದ ನಂತರ ನಮಗೆ ಸಿಕ್ಕ ವಿಶ್ರಾಂತಿ ಅದಾಗಿತ್ತು. ನಾವೆಲ್ಲಾ ಬ್ರೆಡ್, ಕೇಕ್, ಹಣ್ಣಿದ್ದ ನಮ್ಮ ಊಟವನ್ನು ತಿನ್ನುತ್ತಿದ್ದರೆ, ಸುಸ್ತಾಗಿದ್ದ ಆ ಕೇಶವಣ್ಣ  ಹಾಗೆಯೆ ನೆಲದ  ಮೇಲೆ ಮಲಗಿದ್ದರು . ನಮ್ಮೆಲ್ಲರ ಒತ್ತಾಯದ ಮೇರೆಗೆ ಅವರು  ತಿನ್ನಲು ಶುರುಮಾಡಿದರು . ನಿಧಾನವಾಗಿ ಬಂದ ನಾವಷ್ಟೆ ಅಲ್ಲಿ ಉಳಿದುಕೊಂಡೆವು, ಉಳಿದವರು ನಡೆಯಲು ಶುರುಮಾಡಿದರು. ಬಹಳ ಸುಸ್ತಾಗಿದ್ದ ಕೇಶವಣ್ಣ  ನೋಡು ನೋಡುತ್ತಲೆ ತಿಂದಿದ್ದ ಎಲ್ಲವನ್ನು ವಾಂತಿ ಮಾಡಿಕೊಂಡರು . ಎಷ್ಟು ಸುಸ್ತಾಗಿದ್ದರೆಂದರೆ , ವಾಂತಿಮಾಡಿಕೊಳ್ಳುವಾಗ ಬಗ್ಗಲೂ ಅವರ ಲ್ಲಿ ಶಕ್ತಿ ಇರಲಿಲ್ಲ. ನನಗೆ  ಹೊರಡಲು ಹೇಳಿ ಗೈಡ್ ಮತ್ತು ನಮ್ಮ ಇಬ್ಬರು ಸಹ ಚಾರಣಿಗರು  ಅಲ್ಲೆ ಉಳಿದುಕೊಂಡರು. ನಾನು  ಅವರ  ಬಗ್ಗೆ ಯೋಚನೆ ಮಾಡುತ್ತಾ ನಿಧಾನವಾಗಿ ನಡೆಯುತ್ತಿದ್ದೆವು. ಸಣ್ಣ ಸಣ್ಣ ಗುಡ್ಡಗಳನ್ನು  ಹತ್ತಿ ಇಳಿಯುತ್ತಿದ್ದೆವು.  ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಪ್ರತೀ ೧೦೦ ಮೀಟರಿಗೊಮ್ಮೆ  ನಾವು ಬಂದ ದಾರಿಯನ್ನು ನೋಡುತ್ತಿದ್ದೆವು. ಒಂದು ಕಡೆ ನಿಂತು ನೋಡುತ್ತಿದ್ದಾಗ ನಾಲ್ಕುಜನ ಬರುತ್ತಿರುವುದು ಕಾಣಿಸಿತು. ನಿಧಾನವಾಗಿಯಾದರೂ ಪರವಾಗಿಲ್ಲ, ಬರುತ್ತಿದ್ದಾರಲ್ಲ ಎನ್ನುವ ಸಮಾಧಾನದಿಂದ ನಾವು ಮುಂದುವರೆದೆವು..


 ಇನ್ನು ಸುಮಾರು 10 ಕಿಲೋ ಮೀಟರು ಗಳಷ್ಟು ಪ್ರಯಾಣ ಮಾಡಿದರೆ ನಮ್ಮ ಕೈಲಾಸ ಪರ್ವತದ ಪ್ರದಕ್ಷಿಣೆ ಮುಗಿಯುತ್ತದೆ. ಇಷ್ಟು ಬಂದವರಿಗೆ ಕೂಡಾ ನಮಗೆ ಇನ್ನುಳಿದ 10 ಕಿ.ಮೀ.ಚಾರಣ ಮಾಡುವುದು ತುಂಬಾ ಕಷ್ಟ... ಅಲ್ಲಿ ನಿಂತು ಕೆಲವು ಫೋಟೋ ಗಳನ್ನು ತೆಗೆಯುತ್ತಿದ್ದಾಗಲೇ ಶುರುವಾಯಿತು ಮಳೆ. ಮಳೆಗೆ ತಪ್ಪಿಸಿಕೊಳ್ಳಲು ಅಲ್ಲಿ ಎಲ್ಲೂ ಜಾಗವಿಲ್ಲ. ದೂರ ದೂರದವರೆಗೂ ಮರವಿಲ್ಲ, ಸೂರೆನ್ನುವ ಪದ ಕೂಡ ಹತ್ತಿರ ಸುಳಿಯುತ್ತಿರಲಿಲ್ಲ. ಇದ್ದ ಒಂದೇ ದಾರಿಯೆಂದರೆ  ನಾವು ಹಾಕಿದ ರೈನ್ ಕೋಟನ್ನು ಅಗಲವಾಗಿ ಬಿಡಿಸಿಕೊಂದೆವು..  ಆಕಾಶನೋಡುತ್ತಿದ್ದ ಬೆಟ್ಟ, ಈಗ ಪಾತಾಳ ನೋಡುತ್ತಿದೆ. ಮಳೆಗೆ ಕಲ್ಲುಗಳು ಜಾರುತ್ತಿವೆ ಇಂಥಹ ಪರಿಸ್ಥಿತಿಯಲ್ಲಿ ಜೋರಾಗಿ ಓಡುವುದು ಅಪಾಯವನ್ನು ಎಳೆದುಕೊಂಡಂತೆ. ಮಳೆಯಲ್ಲಿ ನೆನೆದರೆ ಒಂದು ತೊಂದರೆ ಬೇಗ ಓಡಿದರೆ ಇನ್ನೊಂದು ತೊಂದರೆ. ಬೇರೆ ದಾರಿ ಇಲ್ಲದೆ ಹರ ಸಾಹಸಮಾಡಿ ಬ್ಯಾಗಲ್ಲಿದ್ದ ಬ್ರೆಡ್ ಜ್ಯಾಮ್ ತಿಂದೆವು. . ಮಳೆ ಮತ್ತು ಚಳಿಗೆ ಕುಸಿದು ಹೋಗಿದ್ದ ಎಲ್ಲರೂ ನಡುಗುತ್ತಿದ್ದೆವು.  ಸಮಯ ಸಂಜೆ ೫.೦೦ ಘಂಟೆ.ಸುಮಾರು ಒಂದು ಘಂಟೆಯಷ್ಟು ವಿಶ್ರಾಂತಿಯ ಸಮಯ ...  ಚಳಿಗೆ ಎಲ್ಲರೂ ನಲುಗಿ ಹೋಗಿದ್ದರು. ಈ ಜಾಗಕ್ಕೆ ಬಂದ ದಿನ ನಾನು ಮುಖ ತೊಳೆಯಲು ಹೋಗಿ ನೀರು ಮುಟ್ಟಿದ್ದೆ.  ನೀರು ಹಾಕಿಕೊಂಡಾಗ ಅಂಥ ತೊಂದರೆ ಆಗಲಿಲ್ಲ, ಎರಡು ಮೂರು ಸಲು ನೀರು ಹಾಕಿಕೊಂಡೆ, ಮುಖ ಎನ್ನುವುದು ಹಾಗೆ ಮರಗಟ್ಟಿತ್ತು. ಕೈಗಳನ್ನು ಉಜ್ಜಿಕೊಂಡೆ ..  ಜೋರಾಗಿ ಉರಿಯತೊಡಗಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಉರಿಯುತ್ತಿದ್ದ ಕೈ, ಬ್ರೆಡ್ ತಿಂದು ಗ್ಲೌಸ್  ಹಾಕುವ   ತನಕ ಸುಮ್ಮನಾಗಲಿಲ್ಲ. ಇದನ್ನು ಅನುಭವಿಸಿದ್ದ ನಾನು ಮತ್ತೆಂದು ಚಳಿಯಲ್ಲಿ ತಣ್ಣೀರಿನ ಜೊತೆಗೆ ಸರಸವಾಡಲಿಲ್ಲ. ನಮ್ಮ ಪ್ರಯಾಣ ಮುಂದುವರಿಯಿತು. ಸುಮಾರು ೨ ಕಿ.ಮೀ ದೂರದಷ್ಟು ನಡೆದಾಗ ವಿಶಾಲವಾದ ಬಯಲಿನಲ್ಲಿ ನಡೆಯುವ ಭಾಗ್ಯ ನನ್ನ ಕಾಲಿಗೆ ಒದಗಿ ಬಂತು.ಇನ್ನು ಕೇವಲ ೫ ಕಿಮೀ ದೂರ ನಡೆದರೆ ನಮ್ಮ ಚಾರಣ ಮುಗಿಯುತ್ತದೆ ಎಂದು ಪಾಂಡೆ ಹೇಳಿದಾಗ ನಮ್ಮಲ್ಲಿ ಏನೋ ಸ್ವಲ್ಪ ಸಮಾಧಾನ.ನನ್ನ  ಟಾರ್ಚ್ ಲೈಟಿನಲ್ಲಿ ಬ್ಯಾಟರೀ ಖಾಲಿಯಾಗಿ ದಾರಿಯೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.ಒಬ್ಬರನ್ನೊಬ್ಬರು ಹೋದೆವು.   ನಮ್ಮ ನಡಿಗೆ ಬಹಳ ನಿಧಾನವಾಗಿದ್ದರಿಂದ ಅವರು ಬಂದಿದ್ದು ನಮಗೂ ಖುಷಿಯಾಯಿತು .  ದೂರದಲ್ಲಿ ಅಸ್ಪಷ್ಟವಾಗಿ ಸಾಲು ಸಾಲು ಬೆಳಕು ಕಾಣುತ್ತಿದ್ದವು ...ಹತ್ತಿರವಾಗುತ್ತಿದ್ದಂತೆಯೇ ಆ ಬೆಳಕು ಸ್ಪಷ್ಟವಾಯಿತು.ನಮ್ಮ ಕಾರುಗಳು ನಮ್ಮನ್ನು ಕರೆದುಕೊಂಡು ಹೋಗಲು ಕಾದಿದ್ದವು. ಡ್ರೈವರ್ ಗಳು  ನಮ್ಮನ್ನು ಕರೆದುಕೊಂಡು ಹೋಗಲು ಸುಮಾರು ೧.೫೦ ಕಿ.ಮೀ ಗಳಷ್ಟು ಮುಂದೆ ಬಂದರು. ನಮ್ಮ ಡ್ರೈವರ್ ತುತೋಯಿ ನಮ್ಮನ್ನು ಸ್ವಾಗತಿಸಿದ.ಎಲ್ಲರೂ ಸೇರಿ ಫೋಟೋ ತೆಗೆಸಿಕೊಂಡೆವು.ನಮ್ಮ ಡ್ರೈವರ್ ,ಶೇರ್ಪಾ ಹಾಗೂ ನನ್ನ ಜೊತೆ ಚಾರಣ ಮಾಡಿದ  ಉಷಾ,ಕೇಶವಣ್ಣ,ಕಿಶೋರ್ ಎಲ್ಲರೂ ಕಾರಿನತ್ತ  ನಡೆಯುತ್ತಾ ಹೋದೆವು. ಕಾರಿನಲ್ಲಿ   ದಾರ್ಚಿನ್ ನತ್ತ ಪ್ರಯಾಣ ಮಾಡಿದೆವು. ರೂಮಿಗೆ  ಬ೦ದವನೇ  ಕುಳಿತು ಎರಡು ಸ್ಪೂನ್‌ ನೀರು  ಕುಡಿದಿರಬೇಕು...... ತಲೆ ಧಿಮ್ಮೆ೦ದಿತು....... ಮೈ ತು೦ಬಾ ಬೆವರು! ತಲೆ  ಗಿರಗಿರ್ರನೇ ಸುತ್ತತೊಡಗಿತು. ವಾಂತಿ ಆಯಿತು. ಡಾಕ್ಟರ್ ಬಂದು ನನಗೆ ಔಷಧಿ  ಕೊಟ್ಟರು. ದೇಹ ನಿದ್ದೆ ಬಯಸುತ್ತಿದೆ, ಮನಸ್ಸು ಪೂರ್ತಿ ಕೈಲಾಸದಲ್ಲಿ ತೇಲಾಡುತ್ತಿದೆ  . ನಾನು ಊರಿಂದ  ಬಂದು ಇಂದಿಗೆ ೩೦ ದಿನಗಳಾದವು..ಈ ಮೂವತ್ತು  ದಿನಗಳ ಪ್ರತಿ ಘಳಿಗೆಯೂ ಅತ್ಯದ್ಭುತವಾಗಿ ಕಳೆಯಲ್ಪಟ್ಟಿವೆ.ನನ್ನ ಆನಂದಕ್ಕಿಂದು ಪಾರವೇ ಇಲ್ಲದಂತಾಗಿದೆ. ನನ್ನ ಈ ಸಂಭ್ರಮವನ್ನು.ಅಕ್ಷರಕ್ಕಿಳಿಸುವ ಒಂದು ಪುಟ್ಟ ಪ್ರಯತ್ನವಿದು.ಹಾಗೆ ನಿದ್ದೆಗೆ ಜಾರಿದೆ..









Sunday, December 6, 2009

ಮಾನಸ ಸರೋವರ ಯಾತ್ರೆ-೨೧

ಎಂಟು ಮಂದಿ ಮಲಗಬಹುದಾದ ಡೇರೆಯೊಳಗೆ ನಾವು ನಾಲ್ವರೇ ಆರಾಮವಾಗಿ ಬಿದ್ದುಕೊಂಡೆವು.
ನನಗಂತೂ ಎಲ್ಲೇ ಮಲಗಿದರೂ, ಎಷ್ಟೇ ಗಲಾಟೆಯಿದ್ದರೂ ನಿದ್ದೆ ಬೀಳುತ್ತದೆ. ಹೀಗಿರುವಾಗ ರಭಸವಾದ ಗಾಳಿ ಬೀಸಿ ರಾತ್ರಿ ಸುಮಾರು ೧೨ ಗಂಟೆಗೆ ಡೇರೆಯ ಹುಕ್-ಗಳು ಹಾರಿಹೋಗಿದ್ದವು. ಉಳಿದ ಮೂವರು ಅದನ್ನು ಸರಿಪಡಿಸಿ ಮಲಗಿದ್ದರು. ನನಗದು ಗೊತ್ತೇ ಆಗಲಿಲ್ಲ. ಆ ಪರಿಯ ಸುಖ ನಿದ್ರೆಯಲ್ಲಿದ್ದೆ ನಾನು. ಆದರೆ ಬೆಳಗ್ಗಿನ ಜಾವ ೩ ಗಂಟೆಗೆ ತಲೆಗೆ ಏನೋ ತಾಗುತ್ತಿರುವಂತೆ ಭಾಸವಾದಾಗ ಎಚ್ಚರವಾಯಿತು. ಗಾಳಿಯ ರಭಸಕ್ಕೆ ಡೇರೆಯ ಅಧಾರಕ್ಕಿರುವ ಸಣ್ಣ ರಾಡುಗಳು ಸಂಪೂರ್ಣವಾಗಿ ಬಗ್ಗಿ ತಲೆಗೆ ತಾಗುತ್ತಿದ್ದವು. ಆದರೂ ಹಾಗೇ ಮಲಗಿಕೊಂಡೆ. ನಮ್ಮ ಶೇರ್ಪಾ  ಮತ್ತೆ ಹೊರನಡೆದು ಎಲ್ಲವನ್ನು ಸರಿಪಡಿಸಿ ಬಂದರು.ಡೇರಾಪುಕ್ ನಲ್ಲಿ  
 ನಾವು ಇದೇ ಡೇರೆಯೊಳಗೆ ೧೦ ಜನರು ಮಲಗಿದ್ದರೆ ಇಲ್ಲಿ ನಾಲ್ಕೇ ಮಂದಿ! ಪ್ರಕೃತಿಯ ಮಡಿಲಲ್ಲಿ  ರಾತ್ರಿಯನ್ನು ಮನಸಾರೆ ಆನಂದಿಸಿದೆವು..
ಮರುದಿನ ಬೆಳಗ್ಗೆ ಗೌರೀ ಕುಂಡದತ್ತ ನಮ್ಮ ಚಾರಣ..







ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು, ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ... ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಹಿಮ ಕರಗಬಹುದು. ಆದರೆ ಇದು ಬೀಳುವುದು ಗೊತ್ತಾಗುವುದಿಲ್ಲ. ನಮ್ಮಷ್ಟಕ್ಕೇ ನಾವು ಮೇಲೆ ಹತ್ತುತ್ತಿರುವಾಗ ಒಮ್ಮೆಲೆ ಅಪ್ಪಳಿಸಿದರೆ ಏನೂ ಮಾಡುವಂತಿಲ್ಲ. ಹಗ್ಗ ಹಿಡಿದು ಧೈರ್ಯದಿಂದ ಇದ್ದರೆ ಹೇಗೋ ಬಚಾವ್ ಆಗಬಹುದು.. ಹಿಮ ಬಿರುಗಾಳಿಗೂ ಅಷ್ಟೇ. ಅದರ ವೇಗಕ್ಕೆ ಆನೆ ಸಿಕ್ಕರೂ ಅದನ್ನು ಎತ್ತಿಕೊಂಡು ಸಾವಿರಾರು ಅಡಿಯ ಕೆಳಗಿನ ನೀರ್ಗಲ್ಲಿನ ಮೇಲೆ ಒಗೆದು ಬಿಡುತ್ತದೆ. ಬದುಕುವ ಮಾತು ಇನ್ನೆಲ್ಲಿಂದ ಬಂತು? ಎಂಥ ಗಟ್ಟಿಗನಿದ್ದರೂ, ಒಂದೇ ಸಮನೆ ಪರ್ವತ ಹತ್ತಿ ಬರುತ್ತೇನೆಂಬ ಹುಮ್ಮಸ್ಸಿದ್ದರೂ ಪ್ರಯೋಜನವಾಗದು.

ಅದಕ್ಕೇ  ನಾವು ನಿಸರ್ಗವನ್ನು ಧಿಕ್ಕರಿಸಲು ಹೋಗುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮ ದೇಹ ಪ್ರಕೃತಿ ಹೊಂದಿಕೊಳ್ಳದಿದ್ದರೆ ಏನೂ ಸಾಧ್ಯವಾಗದು. ಆದ್ದರಿಂದಲೇ ದಿನಗಳ ಲೆಕ್ಕ ಹಾಕುತ್ತಾ ಹತ್ತಲು ಬಾರದು. ಪ್ರಕೃತಿಯೇ ಒಪ್ಪಿಗೆ ನೀಡುವವರೆಗೆ ಕಾಯಬೇಕು... ಕ್ರಾಂಪೋನ್ ಪಾಯಿಂಟ್ ಎಂಬುದೊಂದಿದೆ. ಅಲ್ಲಿಂದ ನಾವು ವಿಶೇಷವಾದ ಪಾದರಕ್ಷೆ (ಕ್ರಾಂಪೋನ್ ಬೂಟ್) ಧರಿಸಬೇಕು. ಬೂಟ್‌ಗೆ ಮೊಳೆಗಳಂಥ ಸಾಧನ ಅಳವಡಿಸಲಾಗಿರುತ್ತದೆ. ಅದರಿಂದ ಹಿಮವನ್ನು ಒದೆಯುತ್ತಾ ಹೆಜ್ಜೆ ಇಡಬೇಕು. ಹಿಮ ಕಂದಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಕ್ರಮ. ಕೆಲವೊಮ್ಮೆ ಭೂಮಿಯ ಶಾಖ ಮತ್ತು ಗಾಳಿಯ ಒತ್ತಡದಿಂದ ಉಂಟಾಗುವ ಬಿರುಕುಗಳು ಕಂದಕಗಳಾಗಿ ಮಾರ್ಪಡುತ್ತವೆ.
ಅದರ ಮೇಲೆ ಸುರಿಯುವ ಮಂಜು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ. 5 ಅಡಿಯಿಂದ 2 ಸಾವಿರದಡಿಯವರೆಗೂ ಆಳವಿರಬಹುದು. ನಾವು ಕ್ರಾಂಪೋನ್ಸ್‌ಗಳಿಂದ ಒದ್ದು ನೋಡದಿದ್ದರೆ ಗೊತ್ತಾಗದೇ ಈ ಕಂದಕಕ್ಕೆ ಬೀಳಬಹುದು. ನಾವು ಒದ್ದಾಗ ಅದರ ಶಬ್ದ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ಟೊಳ್ಳಾದ ಜಾಗವಿದ್ದರೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ. ಹಿಮ ಕಂದಕಕ್ಕೆ ಬಿದ್ದರೆ ಶವ ಸಿಗುವುದೂ ಖಚಿತವಿಲ್ಲ. ಈ ಸೂಕ್ಷ್ಮತೆ ಅರಿವಿರದಿದ್ದರೆ ಕಷ್ಟ.


ಈ ಮಧ್ಯೆ ಆ ಚಳಿಯಲ್ಲಿ ಶೇರ್ಪಾ ದಂಪತಿಗಳು ಅವರ ಎಳೆ ಮಗುವಿನ ಆರೈಕೆ ಮಾಡುವುದು ನೋಡಿದಾಗ ಎಂತವರಿಗೂ ಹೃದಯ ಕರಗಬಹುದು.ಆ ಮಗುವಿಗೆ ಆಗಾಗ ಮೈ ಹುಷಾರಿಲ್ಲದಾಗ ನಮ್ಮ ಶೇರ್ಪಾ ಹೋಗಿ ಉಪಚರಿಸುತ್ತಿದ್ದ.ಆ ಮಗುವಿಗೆ ನಿದ್ರೆ ಹತ್ತಿದ ಮೇಲೆ ಸಂತೃಪ್ತಿ ಭಾವನೆಯೊಂದಿಗೆ ಬಂದು ನಮ್ಮ ತಂಡವನ್ನು ಸೇರುತ್ತಿದ್ದ. ಇಂತಹ ಕಠಿಣ ಚಾರಣದ ಸಮಯದಲ್ಲಿಯೂ ಅವರ ಮಾತೃ ವಾತ್ಸಲ್ಯ ಕಂಡು ನಾನೂ ಒಂದು ಕ್ಷಣ ಮಗುವಾಗಬೇಕು ಎನ್ನಿಸಿತು..
ನಾನು ಗೌರೀ ಕುಂಡಕ್ಕೆ ಬರುವುದಕ್ಕೂ ಈ ದೃಶ್ಯಕ್ಕೂ ಎಲ್ಲಿಯ ಅನುಬಂಧ? ನನ್ನ ನೆನಪು  ಒಂದು ಕ್ಷಣ ತಾಯಿ ಮಡಿಲಿಗೆ ಹೋಯಿತು.ನನ್ನ ಅಮ್ಮನೂ ನನ್ನನ್ನು ಹೀಗೇ ಎತ್ತಿರಬಹುದೇ?ತಾಯಿ ಬಗ್ಗೆ  ವರ್ಣನೆ ಅಪರಿಮಿತ.  ಭಾರತದ ವೈಶಿಷ್ಟ್ಯವೆಂದರೆ ನದಿ, ಬೆಟ್ಟ, ಪರ್ವತ, ನಿಸರ್ಗವನ್ನೂ ಮಾತೆಯೆಂದೇ ಆರಾಧಿಸಲಾಗುತ್ತದೆ. ಮನುಕುಲದ ಅಭ್ಯುದಯಕ್ಕೆ, ವಿಕಾಸಕ್ಕೆ ಕಾರಣೀಭೂತಳಾದ ಈ ತಾಯಿಯನ್ನು ನೆನೆಯಲು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ...

13,100 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಒಂದಕ್ಕೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಹಿಮಗೋಡೆ (ಐಸ್‌ವಾಲ್) ದಾಟಬೇಕು. ಬಹಳ ಎಚ್ಚರಿಕೆಯಿಂದ ಈ ಗೋಡೆಯನ್ನು ದಾಟಿ ಆ ಬದಿಗೆ ಹೋದರೆ ನಾರ್ತ್‌ಕೋಲ್. ಇದಕ್ಕೆ 8 ಗಂಟೆ ತಗುಲಿತು. ಜೋರಾದ ಗಾಳಿ ಬೀಸುತ್ತಿತ್ತು. ಒಂದು ಕಡೆ ಟೆಂಟ್ ಕಟ್ಟಿದಾಗ ಗಾಳಿ ನುಂಗಿ ಹಾಕಿತು. ಸ್ವಲ್ಪ ಹೊತ್ತು ಸುಮ್ಮನಾಗಿ ಬೇರೆ ಜಾಗ ಹುಡುಕಿ ಶಿಬಿರ ನಿರ್ಮಿಸಿ ಅಲ್ಲಿಯೇ ಉಳಿದು ಹೋಗೋಣ ಎಂದು ಪಾಂಡೆ ಹೇಳಿದರು.. ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.


ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಸೇಷನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಜಾಗ್ರತೆಯಾಗಿ   ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ. ಆಗ ಕಂಡಿತು ಗೌರೀ ಕುಂಡ... ಅದು ಸ್ಪಟಿಕದಂಥ ಶುಭ್ರ ನೀರು.. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ  ಕೊಳವಿದೆ. ಪಾರ್ವತೀ ದೇವಿಯ ಸ್ನಾನದ ಕೊಳ ಎಂದು ಪುರಾಣದ ಉಲ್ಲೇಖ.ಹಿಂದೂ ಭಕ್ತಾದಿಗಳು ಇಲ್ಲಿ ಪೂಜೆ ಮಾಡುತ್ತಾರೆ. ನಾನು ಈ ನೀರಿನಲ್ಲಿ ಕೈ ಇಡುತ್ತಿದಂತೆಯೇ  ಬೆರಳುಗಳೆಲ್ಲ ಮರಗಟ್ಟಿ ಹೋದವು.ಆದರೂ ಸ್ವಲ್ಪ ನೀರು ತೆಗೆದುಕೊಂಡು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡೆ.ದೂರದಿಂದ ಈ ಕೊಳವನ್ನು ನೋಡಿದಾಗ ಹಸಿರು ಬಣ್ಣದಿಂದ ವಿಚಿತ್ರವಾಗಿ ಕಾಣಿಸುತ್ತದೆ. ಹತ್ತಿರಕ್ಕೆ ಹೋಗಿ ನೋಡಿದರೆ ,ನೀರು ಮಾಮೂಲು ಆಗಿಯೇ ಇರುತ್ತದೆ.ಪಾರ್ವತೀ ದೇವಿ ಶಿವನನ್ನು ವಿವಾಹ ಮಾಡಿಕೊಳ್ಳಬೇಕೆಂದು ಈ ಸರೋವರದಲ್ಲಿ ತಪಸ್ಸು ಮಾಡಿದಳೆಂದೂ, ಪ್ರತೀ ದಿನವೂ ಈ ಕೊಳದಲ್ಲಿ ತನ್ನ ಕೋರಿಕೆಯನ್ನು  ನೆರವೆರಿಸಿಕೊಂಡಳು ಎಂದು ಪಾಂಡೆ ಈ ಗೌರೀ ಕುಂಡದ ಬಗ್ಗೆ ಮಾಹಿತಿ ನೀಡಿದರು..ಮನಸ್ಸಿನಲ್ಲಿ ಪಾರ್ವತೀ ದೇವಿಯನ್ನು ಪ್ರಾರ್ಥನೆ ಮಾಡಿದೆ.ಗೌರೀ ಕುಂಡದಿಂದ ತುಂಬಾ ಎತ್ತರಕ್ಕೆ ಹತ್ತಿ ಸುಮಾರು ೪ ಕಿಲೋಮೀಟರು ಗಳಷ್ಟು ದೂರ ಬಂದೆವು..










ನನ್ನ ಬ್ಯಾಗ್,ಊರುಗೋಲು,ಇವನ್ನೆಲ್ಲ ಎತ್ತಿಕೊಂಡು ನಡೆಯುವಾಗ ಮುಂಚೆ ಇದ್ದದಕ್ಕಿಂತ ಹತ್ತು ಪಟ್ಟು ಭಾರ ಜಾಸ್ತಿಯಾದಂತೆ ಅನಿಸಿತು. ಸಂಜೆ ೬.೦೦  ಘಂಟೆಯಾಯಿತು.ಈ ಜಾಗ ನನಗೆ ಒಂದು ದೇವ ಭೂಮಿ ಎಂದನಿಸಿತು, ನನ್ನ ಊಹೆಯಂತೆ ಕಂಡುದೆಲ್ಲಾ ವಾಸ್ತವವಾಗಿ ನಡೆಯಿತೆನ್ನಲು ಗೌರೀ ಕುಂಡದಿಂದ ೮೦೦ ಅಡಿಯಷ್ಟು ಎತ್ತರಕ್ಕೆ ಹತ್ತಿ ಬಂದಿರುವುದೇ ಆಧಾರ!!!!!!ನನ್ನ ಜನ್ಮ ಧನ್ಯವಾಯಿತು ಎಂಬ ವಿಶ್ವಾಸ ಬಂತು.. ಈ ರೀತಿಯ ಅನುಭವವನ್ನು ಕೊಟ್ಟಿದ್ದು ನನ್ನ ಹಿರಿಯರ ಹಾಗೂ ನನ್ನ ಗುರುಗಳ ಆಶೀರ್ವಾದ ಫಲವೇ?????ಹೀಗೆ ಭಾವನಾ ಲೋಕದಲ್ಲಿ ವಿಹರಿಸುತ್ತಾ ಮುಂದೆ ನಡೆಯುತ್ತಿದ್ದಾಗ   ಹಿಮದ ಗಾಳಿ ನಮ್ಮನ್ನು ನಮ್ಮ ಟೆಂಟ್  ನಲ್ಲಿ ಸ್ವಾಗತ ಮಾಡುತ್ತಿತ್ತು...