ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Saturday, June 12, 2010

ಮಾನಸ ಸರೋವರ ಯಾತ್ರೆ -೨೬






              ನ್ಯಾಲಂನಿಂದ   ಬೆಳಗ್ಗಿನ ಉಪಾಹಾರ ಮುಗಿಸಿ ನಾವು ನೇಪಾಳಕ್ಕೆ ಹೊರಟೆವು.ದಾರಿಯಲ್ಲಿನ ಕಡಿದಾದ  ಭೀಕರ ರಸ್ತೆಯಲ್ಲಿ ಪ್ರಯಾಣಿಸಿ ಮಧ್ಯಾಹ್ನ ೧೨.೩೦ಕ್ಕೆ ಸಾಂಬಾ ಗಡಿ ತಲುಪಿದೆವು...  ಅಲ್ಲಿ ಲೈಟ್ ಫುಡ್ ಮುಗಿಸಿ ನೇಪಾಳಕ್ಕೆ ಹಿಂತಿರುಗುವ ಸಲುವಾಗಿ ನಮ್ಮ  ಪಾಸ್ಪೋರ್ಟ್ ಗೆ ಹಿಂತಿರುಗುವ ಅನುಮತಿಯನ್ನು ಚೀನಾ ದೇಶದಿಂದ ಪಡೆದು ಟಿಬೆಟ್ ದೇಶದ ಮಾರ್ಗವಾಗಿ ನೇಪಾಳಕ್ಕೆ ಬರುತ್ತಾ ಇದ್ದೆವು..                         

                                ಪ್ರಕೃತಿಯ ಮಡಲಲ್ಲಿ ಮನುಷ್ಯ ಎಂದಿದ್ದರೂ ಕುಬ್ಜನೇ. ಇನ್ನೂರು ಮುನ್ನೂರು ಅಡಿ ಎತ್ತರದ ಮರಗಳೂ ಕುಬ್ಜವೆನಿಸುವ ಬೆಟ್ಟಗಳ ಮುಂದೆ ನಾನೆಷ್ಟರವನು ?ನಾವೀಗ  ನೇಪಾಲದ  ಗಂಡಕೀ ನದಿಯ ತಟದಲ್ಲಿ  ಇದ್ದೇವೆ..  ಚಳಿಗಾಲದ ಮಂಜು ಕರಗಿ ನೀರಾಗಿ ಹರಿಯುವ ಈ ಸಮಯದಲ್ಲಿ ಜಲಪಾತಗಳ ರುದ್ರ ರಮಣೀಯತೆ ಕೈ ಬೀಸಿ ಕರೆಯುತ್ತದೆ. ಬೆಟ್ಟಗಳ ನೆತ್ತಿಯ ಮೇಲಿಂದ ಧುಮ್ಮಿಕ್ಕುವ ನೀರ ಧಾರೆಯ ಬಳಿ ಸಾರಿ ನಿಂತರೆ ಮೈಮನಕೆಲ್ಲ ಪನ್ನೀರ ಸಿಂಚನ. ಸಾವಿರಕ್ಕೂ ಮೀರಿ ಅಡಿಗಳ ಹಾರಿ ಕೆಳಗಿಳಿಯುವ ನೀರ ಹನಿ ನೋಡ ನೋಡುತ್ತ ಕಣ್ತುಂಬಿ ಎದೆಗೇ ಇಳಿದು ಬಿಡುತ್ತವೆ. ಜಲಪಾತದ ತುತ್ತ ತುದಿಯಲ್ಲಿ ಧುಮ್ಮಿಕ್ಕುವ ನೀರನ್ನೇ ದಿಟ್ಟಿಸುತ್ತಿದ್ದರೆ ಒಮ್ಮೊಮ್ಮೆ ಅಲ್ಲಿಂದ ನುಗ್ಗುವ ನೀರು ಇನ್ನೇನು ಮೈ ಮೇಲೆ ನುಗ್ಗಿ ನಮ್ಮ ಆಪೋಶನ ತೆಗೆದುಕೊಳ್ಳುವದೇನೋ ಅನಿಸಿ ದಿಗಿಲಾಗುತ್ತದೆ. ಬೀಳುವ ನೀರ ಧಾರೆಯಲ್ಲಿಯ ಚಿಕ್ಕ ಚಿಕ್ಕ ಪಾಕೆಟ್ಟುಗಳು ನಾ ಮುಂದೆ ತಾ ಮುಂದೆ ಎನ್ನುವಂತೆ ಧರೆಗಿಳಿಯುವದನ್ನು ನೋಡುವದೊಂದು ಹಬ್ಬ. ಧರೆಗಿಳಿದ ನೀರು ಕಲ್ಲುಗಳ ಮಧ್ಯೆ ರಭಸದಿಂದ ಹರಿಯುತ್ತದೆ. ಆಳವೇ ಇಲ್ಲದೇ ತನ್ನ ಒಳಗನ್ನೆಲ್ಲ ತೋರಿಸುತ್ತದೆ. ಪಾತ್ರ ಅಗಲವಾದಂತೆ ಶಾಂತವಾಗುತ್ತದೆ, ಗೂಢವಾಗುತ್ತದೆ...  
              ಮಧ್ಯಾಹ್ನ ೩.೩೦ರ ಸಮಯ.ನಾವು ಬಸ್ ನಲ್ಲಿ ನೇಪಾಲದ ಕಾಟ್ಮಂಡು ನಗರಕ್ಕೆ ಬರುತ್ತಿದ್ದೇವೆ..   ಕೆಲವೊಮ್ಮೆ ದಟ್ಟ್ಟ ಕಾಡು , ಕೆಲವೊಮ್ಮೆ ಹುಲ್ಲುಗಾವಲಿನಂತಹ ಬೆಟ್ಟಗಳ ನಡುವೆ ಸಾಗುವ ಕಾಲುದಾರಿಯಲ್ಲಿ ಸಾಗುವಾಗ ಆಗುವ ದಿವ್ಯ ಅನುಭೂತಿಯನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ . ಆಕಾಶಕ್ಕೆ ಚಾಚಿದಂತೆ ಇರುವ ಮರಗಳು , ಅವುಗಳನ್ನಶ್ರಯಿಸಿ ಬೆಳೆದಿರುವ ಪರಾವಲಂಬಿ ಸಸ್ಯಗಳು , ಸುಂದರ ಕಾಡು ಹೂಗಳು , ಪಕ್ಷಿಗಳ ಇಂಚರ , ಇವು  ಎಲ್ಲದರ ಜೊತೆಗೆ ಒಹ್ ...ಕುವೆಂಪು , ಕಾರಂತರ ..ಕಾಡಿನ ವರ್ಣನೆಯ ಸಾಕ್ಷಾತ್ಕಾರವಾಯಿತು ಎಂದನಿಸಿತು.ದಟ್ಟ ಕಾಡು... ಏರು ತಪ್ಪಲುಗಳು...ದಾರಿ ಮಧ್ಯೆ ಅಲ್ಲಲ್ಲಿ  ಹರಿವ ಗಂಡಕಿ ನದಿಯ ಜುಳು ಜುಳು ಝರಿಗಳು... ತಣ್ಣಗೆ ಬೀಸುವ ಗಾಳಿ ಎಲ್ಲವೂ ನಮ್ಮನ್ನು ಒಂದು ರೀತಿಯಲ್ಲಿ ಹುರುಪುಗೊಳಿಸುವುದರ ಜೊತಗೆ ತುಸು ಭಯವೂ ಆವರಿಸಿಕೊಳ್ಳುತ್ತಿತ್ತು...
            ಬಸ್ ನಲ್ಲಿ ಹೋಗುತ್ತಿರುವಾಗ ಪಾಂಡೆ ನೇಪಾಲದ ಬಗ್ಗೆ ವಿವರಣೆ ನೀಡುತ್ತಾ ಹೋದರು...ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಭತ್ತಗೋಧಿಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ ರಸ್ತೆ ಹಾಗೂ ರೈಲುಮಾರ್ಗಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ. ಆಧುನಿಕ ತಂತ್ರಜ್ಞಾನವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು. 
                             ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ ಸರಾಸರಿ ಆಯುರ್ಮಾನ ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.
                               ನಂತರ ಪ್ರಯಾಣದಲ್ಲಿ ಪರಸ್ಪರ ನಾವು ಸ್ವಲ್ಪ ಹರಟೆ ಹೊಡೆದು ಹಾಗೆ ನಿದ್ದೆಯ ಮಂಪರಿಗೆ ಜಾರಿದೆವು....ಸಮಯ ರಾತ್ರಿ ೯.೩೦ .ಕಣ್ತೆರೆದಾಗ ನಮ್ಮ ಬಸ್ ಕಾಟ್ಮಂಡುವಿನ ಸಾಮ್ರಾಟ್ ಹೋಟೆಲ್ ಎದುರು ನಿಂತಿತ್ತು... ಹೋಟೆಲ್ ನಮಗಾಗಿ ಬಿಸಿಯೂಟ ಕಾಯುತ್ತಿತ್ತು.ಅದನ್ನು ಕಂಡ ಕೂಡಲೇ ನಮಗೆ ಹಸಿವು ಇಮ್ಮಡಿಯಾಯ್ತು.ನಮಗೆ ಅಲ್ಲಿನ ಊಟ,ದಾಲ್  ಆಗ ರುಚಿಸದಿದ್ದರೂ ಆಗ ಹಸಿವಿಂದ ಎಲ್ಲವೂ ರುಚಿಯಾಗಿತ್ತು...ಏಕೆಂದರೆ ಅನ್ನ ಕಂಡು ಅಂದಿಗೆ ೨೨ ದಿವಸವಾಗಿತ್ತು..ಎಲ್ಲರೂ ಗಪ್-ಚುಪ್ ಅನ್ನದೇ ಊಟಮಾಡಿದರು..ನಮಗಾಗಿ ಕಾದಿರಿಸಿದ್ದ ರೂಮಿನತ್ತ ಹೆಜ್ಜೆ ಹಾಕಿದೆವು..