ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Tuesday, July 21, 2009

ಮಾನಸ ಸರೋವರ ಯಾತ್ರೆ- ೧















ಜೀವನದಲ್ಲಿ ದೇವ ಋಣ, ಪಿತೃ ಋಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನನ್ನ ಹಿರಿಯರು ಹೇಳುತ್ತಿದ್ದರು.ಹಾಗಾಗಿ ಈ ಎರಡೂ ಋಣಗಳನ್ನು ಏಕ ಕಾಲಕ್ಕೆ ಸಲ್ಲಿಸುವ ಭಾಗ್ಯ ನನಗೆ ಒದಗಿ ಬಂತು.ಅದು ೨೩-೦೬-೨೦೦೯ ರಂದು.ಅಳಗಪ್ಪನ್ ಚೆಟ್ಟಿಯಾರ್ ಟಿವಿಎಸ್ ಕಂಪನಿಯ ಚೆನ್ನೈ ವಿಭಾಗದ ಮುಖ್ಯಸ್ಥ,ಇವರ ಆಮಂತ್ರಣದ ಮೇರೆಗೆ ಕೈಲಾಸ ದಲ್ಲಿ ರುದ್ರ ಹವನಕ್ಕೆ ನಾನು ಹೊರಟೆ.ಇದರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನಾನು ಜೂನ್ ೨೩ರನ್ದು weastcoast ರೈಲಿನಲ್ಲಿ ಚೆನ್ನೈಗೆ ಹೊರಟೆ.ಮರುದಿನ ಸಂಜೆ ೪ ಘಂಟೆಗೆ ಚೆನ್ನೈ ತಲುಪಿದೆ.ಆ ದಿವಸ ರಾತ್ರಿ ಚೆನ್ನೈನಲ್ಲಿ ರಾಜ ರಾಜೇಶ್ವರಿ ವಸತಿ ಗೃಹದಲ್ಲಿ ನಮಗೆ ಏರ್ಪಾಡು ಮಾಡಿದ್ದರು.ನಾವು ಒಟ್ಟು ೩೦ ಜನ ಕರ್ನಾಟಕ ಮತ್ತು ತಮಿಳುನಾಡಿನ ವರು ಆ ದಿವಸ ಅಲ್ಲಿ ಸೇರಿ ಪ್ರಯಾಣದ ಬಗ್ಗೆ ಮಾಹಿತಿ ಪಡೆದೆವು .. ಯಾತ್ರೆಯ ಸರ್ವ ವಿಘ್ನ ನಿವಾರಣೆಗೊಸ್ಕರ ಗಣಪತಿ ಪೂಜೆ ಮಾಡಿದೆವು.ಪ್ರಯಾಣ ತಯಾರಿ ಎಲ್ಲ ನಡೆಸಿ ರಾತ್ರಿ ೧೦.೩೦ಕ್ಕೆ ಊಟ ಮಾಡಿ ಮಲಗಿದೆವು.
                ನನ್ನ ಕೈಲಾಸ ಮಾನಸ ಸರೋವರ ಯಾತ್ರೆಯ ಸ್ಥೂಲ ಪರಿಚಯವನ್ನು ತಿಳಿಸುತ್ತೇನೆ.ನನ್ನ ಅನುಭವವನ್ನು ಇನ್ನು ಮುಂದಿನ ಸಂಚಿಕೆಗಳಲ್ಲಿ ವೀಕ್ಷಿಸಿ.
ಮಾನಸ ಸರೋವರ ಯಾತ್ರೆ:-


ಎಲ್ಲಿದೆ? ಮಾನಸ ಸರೋವರ ಭಾರತ – ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ. ಮಾನಸ ಸರೋವರ ವಿಶೇಷ. ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ 150 ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು. ಹೇಗೆ ಹೋಗಬೇಕು? ಯಾವಾಗ? ಪ್ರತಿ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ಕೊನೆಯ ವಾರದವರೆಗೆ (ಹಿಮ ಕಡಿಮೆ ಇರುವ ತಿಂಗಳುಗಳನ್ನು ಪರಿಗಣಿಸಿ) ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು. ಇದು ನಾವಿ ಇಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತದ ವಿದೇಶಾಂಗ ಮಂತ್ರಾಲಯ “ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್” (ಐ. ಟಿ. ಬಿ. ಪಿ) ನೇತೃತ್ವದಲ್ಲಿ ಈ ಯಾತ್ರೆಯನ್ನು ನೆರವೇರಿಸುತ್ತದೆ. ಹೋಗಲು ಬಯಸುವವರು ಈ ಐ. ಟಿ. ಬಿ. ಪಿ ಪರೀಕ್ಷೆ ಎದುರಿಸಬೇಕು. ಇದು ಯಾತ್ರಾಕಾಂಕ್ಷಿಗಳ ದೈಹಿಕ, ಮಾನಸಿಕ ದೃಢತೆ ಹಾಗೂ ಸಾಮರ್ಥ್ಯ ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ 40 ದಿನಗಳು. ಇದಕ್ಕಾಗಿ ೪೦ ಸದಸ್ಯರ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದಲ್ಲಿ ಯಾತ್ರಾರ್ಥಿಗಳಲ್ಲದೆ ಭದ್ರತಾ ಸಿಬ್ಬಂದಿ, ನುರಿತ ವೈದ್ಯರೂ ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎಂಬ ವಿವರವನ್ನು ಯಾತ್ರಾರ್ಥಿಗಳಿಗೆ ಕನಿಷ್ಠ ಆರು ತಿಂಗಳು ಮೊದಲೇ ತಿಳಿಸಲಾಗುತ್ತದೆ. ಯಾತ್ರೆಯ ಸಿದ್ಧತೆ. :- ಮಾನಸ ಸರೋವರದ ಯಾತ್ರೆ ಉಳಿದ ತೀರ್ಥಯಾತ್ರೆಗಳಷ್ಟು ಸುಲಭವಾದದ್ದಲ್ಲ. ಇದಕ್ಕೆ ದಿನಕ್ಕೆ ಕನಿಷ್ಠ ೧೦ ಕಿ. ಮೀ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮಂಕಿಕ್ಯಾಪ್, ಸ್ವೆಟರ‍್, ಉಣ್ಣೆಯ ಕೈಕವಚ, ಥರ್ಮಲ್ ಬಟ್ಟೆಗಳು, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಸಣ್ಣ ಕತ್ತರಿ, ಚಾಕು, ಚಾರಣಕ್ಕೆ ಹೊಂದುವಂಥ ಬೂಟುಗಳು, ಹಿಮಪಾತವಾದರೆ ತಡೆಯಬಲ್ಲ ವಾಟರ್ ಪ್ರೂಫ್ ಬೂಟುಗಳು, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ಧೂಳಿನಿಂದ ರಕ್ಷಿಸಬಲ್ಲ ಮುಖವಾಡ ಇವೆಲ್ಲ ಬೇಕೇಬೇಕು. ಅದು ನುರಿತರಿಂದ ಪರಿಶೀಲಿಸಲ್ಪಡುವುದು ಅನಿವಾರ್ಯ. ಇದರ ಜೊತೆಗೆ ಗ್ಲೂಕೋಸ್, ಚಾಕೊಲೇಟ್, ನೀರಿನ ಬಾಟಲಿಗಳು, ಪೋರ‍್ಟಬಲ್ ಆಕ್ಸಿಜೆನ್ ಸಿಲಿಂಡರ‍್ಗಳು, ಆಮ್ಲಜನಕ ಪರಿಮಾಣ ಹಾಗೂ ನಾಡಿ ಮಿಡಿತವನ್ನು ಏಕಕಾಲದಲ್ಲಿ ನೋಡಬಲ್ಲ ಪಲ್ಸ್ ಆಕ್ಸಿಮೀಟರ್ ಅವಶ್ಯವಾಗಿ ಬೇಕು. ಯಾತ್ರೆಯ ವಿಧಾನ. :- ವಿಮಾನ, ರೈಲು, ಬಸ್ ಹೀಗೆ ಯಾವ ಮಾರ್ಗದಿಂದಲಾದರೂ ನೇಪಾಳದ ರಾಜಧಾನಿಯಾದ ಕಠ್ಮಂಡು ತಲುಪಬಹುದು. ಅಲ್ಲಿಂದಲೇ ಯಾತ್ರೆ ಆರಂಭ. ಅಲ್ಲಿಂದ ಅಧಿಕೃತ ಬಸ್ ಮೂಲಕ ಸಾಂಬ ಗಡಿಗೆ ಪ್ರಯಾಣ. ಇದು ಚೀನಾದ ಗಡಿ. ಇಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ನಂತರ ಮಾನಸ ಸರೋವರ ಯಾತ್ರೆಗೆ ಅನುಮತಿ ಇದೆ. ಇಲ್ಲಿಂದ  ನೈಲಂ ಎಂಬ ಸ್ಥಳಕ್ಕೆ ಪ್ರಯಾಣ . ಇದು ಅತಿ ದುರ್ಗಮವಾದ ಹಾದಿ. ಭೂಕುಸಿತ, ಹಿಮಪಾತ ಇಲ್ಲಿ ಸರ್ವೇಸಾಮಾನ್ಯ. ಯಾತ್ರಿಗಳು ಈ ಸವಾಲನ್ನು ಎದುರಿಸಿಕೊಂಡೇ ಸಾಗಬೇಕು. ನಂತರ ಸಗಾ,ಅಲ್ಲಿಂದ ಡಾರ್ಚಿನ್ ಎಂಬ ಪಟ್ಟಣಗಳು ಸಿಗುತ್ತವೆ.  ನಂತರ ಮಾನಸ ಸರೋವರ ಸಿಗುತ್ತದೆ. ಎರಡು ಸಾವಿರ ಅಡಿ ಹತ್ತಿದರೆ ’ಅನ್ನಪೂರ್ಣೇಶ್ವರಿ’ ಪರ್ವತದ ಸಾಲು ಸಿಗುತ್ತದೆ. ಇಲ್ಲಿಂದ ಮುಂದೆ ಚಾರಣಕ್ಕೆ ’ಯಾಕ್’ ಪ್ರಾಣಿಗಳ ಅಥವಾ ಟಿಬೆಟಿಯನ್ ಗೈಡುಗಳ ಸಹಾಯ ಬೇಕೇಬೇಕು. ಸುಮಾರು ನಾಲ್ಕು ಕಿ.ಮೀ. ನಡೆದರೆ ’ಗುಂಜಿ’ ಸಿಗುತ್ತದೆ. ಇಲ್ಲಿ ಕಿರುಕೈಲಾಸ ಪರ್ವತ ಕಾಣಿಸುವುದು. ಈ ಸ್ಥಳದಲ್ಲಿ ಐ. ಟಿ. ಬಿ. ಪಿ ವೈದ್ಯರ ತಪಾಸಣೆ ಕಡ್ಡಾಯ. ಇದರಲ್ಲಿ ತೇರ್ಗಡೆಯಾದರೆ ಮಾತ್ರ ಮುಂದಿನ ಯಾತ್ರೆ, ಇಲ್ಲದಿದ್ದರೆ ಮಾನಸ ಸರೋವರ ಯಾತ್ರೆ ಇಲ್ಲಿಯೇ ಮೊಟಕುಗೊಳ್ಳುತ್ತದೆ. ಗುಂಜಿಯಿಂದ ’ಕಾಲಾಪಾನಿ’ವರೆಗೆ ೧೦ ಕಿ.ಮೀ. ಹಿಮಪರ್ವತದ ಹಾದಿ. ಮಂಜು ಮುಸುಕಿದ ಪರ್ವತದ ನಡುವಿನ ಈ ಪ್ರಯಾಣಕ್ಕೆ ಆಮ್ಲಜನಕದ ಸಿಲಿಂಡರುಗಳು ಅವಶ್ಯವಾಗಿ ಬೇಕು. ಮಧ್ಯದಲ್ಲಿ ವೈದ್ಯರ ಚಿಕಿತ್ಸೆ ಅವಶ್ಯವಾಗಬಹುದು. ಅದಕ್ಕೆ ವ್ಯವಸ್ಥೆ ಇರುತ್ತದೆ. ಉತ್ತರಾಂಚಲದ ಮಂಡಲ್ ವಿಕಾಸ್ ನಿಗಮ್ ಇಲ್ಲಿ ಅನೇಕ ಚಿಕಿತ್ಸಾ ಶಿಬಿರಗಳನ್ನು, ಆಹಾರ ವ್ಯವಸ್ಥೆ ನಿರ್ವಹಣಾ ತಾಣಗಳನ್ನು ನಿರ್ಮಿಸಿದೆ. ದಾರಿಯಲ್ಲಿನ ಕೆಲವು ಗುಹೆಗಳಿಗೆ ’ವ್ಯಾಸಗುಹೆ’ ಎಂಬ ಹೆಸರಿದೆ. ಪುರಾಣದ ವ್ಯಾಸರು ಇಲ್ಲಿದ್ದರು ಎಂಬ ನಂಬಿಕೆ ಇದೆ. ಇಲ್ಲಿ ಕಾಳಿ ದೇವಾಲಯವೂ ಇದೆ. ಹೀಗೆ ೧೨,೦೦೦ ಅಡಿ ಹತ್ತಿದಾಗ ನಾಭಿದಂಗ್ ಪರ್ವತ ಶ್ರೇಣಿಗೆ ಯಾತ್ರಿಗಳು ತಲುಪುವರು. ಇಲ್ಲಿ ಮಂಜುಗಡ್ಡೆಗಳಿಂದ ಉಂಟಾದ ’ಓಂ’ ಎಂಬ ಸ್ವರೂಪ ಸ್ಪಷ್ಟವಾಗಿ ಕಾಣುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಗಣಪತಿ-ಆಂಜನೇಯ ಮತ್ತು ಸಾಕ್ಷಾತ್ ಪರಶಿವನನ್ನೇ ಮಂಜುಗಡ್ಡೆಯ ಆಕೃತಿ ಮೂಲಕ ದರ್ಶನ ಮಾಡಿದ ಭಕ್ತಾದಿಗಳಿದ್ದಾರೆ. ನಾಭಿದಂಗಿನ ’ಹೋರೆ’ ಎಂಬ ಶಿಬಿರದಲ್ಲಿ ಯಾತ್ರಿಗಳು ತಂಗಬೇಕು. ಮಂದಾರ ಪರ್ವತ ಮತ್ತು ಕೈಲಾಸ ಪರ್ವತದ ನಡುವಿನ ಈ ಜಾಗದಲ್ಲಿ ಮಾನಸ ಸರೋವರದ ದಾರಿ ಸಿಗುತ್ತದೆ. ಮೊದಲು ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದನೆಂದು ನಂಬಲಾದ ’ರಾಕ್ಷಸ ಸರೋವರ’ ಸಿಗುವುದು. ಮಾನಸ ಸರೋವರ ಪ್ರವೇಶ.:- ಇಲ್ಲಿ ಅಧಿಕಾರಿಗಳು ಮಾನಸ ಸರೋವರ ಪ್ರವೇಶಕ್ಕೆ ಪ್ರಾಕೃತಿಕ ಅನುಕೂಲ ಹೇಗಿದೆ ಎಂಬುದನ್ನು ಪರಿಶೀಲಿಸಿ ಯಾತ್ರಿಗಳನ್ನು ಬಿಡುತ್ತಾರೆ. ಕೆಲವೊಮ್ಮೆ ೩-೪ ದಿನಗಳ ಕಾಲ ಯಾತ್ರಿಗಳು ಇಲ್ಲಿ ತಂಗಬೇಕಾಗುತ್ತದೆ. ಇಷ್ಟೆಲ್ಲಾ ಸಾಹಸದ ನಂತರ ಮಾನಸ ಸರೋವರದ ದರ್ಶನ. ಅದರ ದರ್ಶನ ಈ ಎಲ್ಲಾ ಶ್ರಮವನ್ನು ಮರೆಸಬಲ್ಲಷ್ಟು ರಮ್ಯವಾಗಿದೆ. ’ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ. ಇಲ್ಲಿಂದ ಮುಂದೆ ’ತಾಲ್ಜೆನ್’ ಎಂಬ ಜಾಗದಲ್ಲಿ ರಾತ್ರಿ ವಿರಮಿಸಿದ ನಂತರ ’ಕೈಲಾಸ ಪ್ರದಕ್ಷಿಣೆ’ ಆರಂಭವಾಗುತ್ತದೆ. ದಕ್ಷಿಣಾಮೂರ್ತಿ ಇಂದ ಆರಂಭವಾಗುವ ಇದು ಪಶ್ಚಿಮಕ್ಕೆ, ಉತ್ತರಕ್ಕೆ ತಿರುಗಿ ಕೊನೆಗೆ ’ತಾಲ್ಜೆನ್’ ಅಲ್ಲೇ ಕೊನೆಯಾಗುತ್ತದೆ. ಇದರಲ್ಲಿ ೨೦,೦೦೦ ಅಡಿಯವರೆಗೂ ಹತ್ತಬೇಕು. ಗಟ್ಟಿಗರೇ ಇದನ್ನು ಸಾಧಿಸಬಲ್ಲರು. ಜೀವಹಾನಿಯ ಸಂಭವವೂ ಇರುವುದರಿಂದ ದೃಢ ನಿರ್ಧಾರ ಪರಿಶೀಲಿಸಿದ ನಂತರವೇ ಈ ಪರಿಕ್ರಮಕ್ಕೆ ಅವಕಾಶ. ನಂತರ, ಮಾನಸ ಸರೋವರವನ್ನು ಇದೇ ಮಾರ್ಗದಲ್ಲೇ ಇಳಿಯಬೇಕು. ಇಳಿಯುವಾಗ ’ಗೌರಿಕುಂಡ’ದ ದರ್ಶನ ಮಾಡುತ್ತಾರೆ. ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ. ಸಹಾಯ.:- ಭಾರತ ಸರ್ಕಾರದ ವೆದೇಶಾಂಗ ಸಚಿವಾಲಯ, ಕುಮಾನ್ ಮಂಡಲ್ ವಿಕಾಸ್ ನಿಗಮ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯಾತ್ರೆಗೆ ನೆರವಾಗುತ್ತದೆ. ಸಹಾಯ ವೆಚ್ಚ ರೂ. ೪೫,೦೦೦/- ಇಂದ ರೂ. ೫೦,೦೦೦/-. ಇದಲ್ಲದೆ ಕುದುರೆ, ಸೇವಕ, ಯಾಕ್, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಒದಗಿಸುತ್ತದೆ.

1 comment:

  1. ಗುರುಗಳೇ,
    ಓದಿ ಕುಶಿ ಆತು. ಲಾಯಿಕ ಬರೆತ್ತಿ...

    ನಿಂಗಳ,
    ಮಂಗ್ಳೂರ್ ಮಾಣಿ.

    ReplyDelete