ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Wednesday, December 30, 2009

ಮಾನಸ ಸರೋವರ ಯಾತ್ರೆ-೨೩

 
 
ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮಚಿಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ...ಇಂದು ಜೀವನದ ಧನ್ಯತೆ ಏನೆಂದು ಅರಿವಾಗುತ್ತಿದೆ..ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ ನಾಚಿಕೆ ದಿನೇ ದಿನೇ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ೨೨ ದಿನಗಳ ಅಲೆದಾಟ ಅವಿಸ್ಮರಣೀಯ....ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಅನೇಕ ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿರುತ್ತಾನೆ. ಮಗು ನಡೆಯೋದಕ್ಕೆ ಶುರು ಮಾಡ್ಬೇಕು ಅಂತಂದ್ರೆ, ತಾನೇ ಬೋರಲು ಬಿದ್ದೋ, ಅಂಬೆಗಾಲಿಟ್ಟೋ, ಮುಂದೆ ಎದ್ದು ನಿಂತು, ನಂತರ ಒಂದೊಂದೇ ಹೆಜ್ಜೆ ಇಟ್ಟು, ಎದ್ದು-ಬಿದ್ದು, ಗೋಡೆ ಹಿಡಿದು, ಇಲ್ಲಾ ಅಪ್ಪ ಅಮ್ಮನ ಕೈಬೆರಳನ್ನು ಹಿಡಿದೋ ನೆಡೆದು ಮುಂದೊಂದು ದಿನ ತನ್ನ ಕಾಲ ಮೇಲೆ ತಾನೇ ನೆಡೆಯುವಂತಾಗುತ್ತಾನೆ/ಳೆ. ಹಾಗೆಯೇ ಸೃಜನಶೀಲತೆ(ಕ್ರಿಯೇಟಿವಿಟಿ) ಕೂಡ. ಎಲ್ಲರಲ್ಲೂ ಒಂದಲ್ಲಾ ಒಂದು ತೆರನಾದ ಸೃಜನಶೀಲತೆ ಹುಟ್ಟಿನಿಂದಲೋ, ಬೆಳೆಯುತ್ತಾ ಹೋದಂತೆ ಮೈಗೂಡಿಸಿಕೊಂಡಂತೆಯೂ ಇರುತ್ತದೆ. ತನ್ನ ಸಾಮರ್ಥ್ಯವನ್ನು ಅರಿತು, ತಾನೇನು ಹೊಸತನ್ನು ಮಾಡಬಲ್ಲೆನು ಎಂದು ಗುರುತಿಸಿಕೊಳ್ಳುವವರೆಗೂ, ಆತ್ಮವಿಶ್ವಾಸದಿಂದ ಮುನ್ನೆಡೆದು ಏನನ್ನಾದರೂ ಮಾಡಿ ಸಾಧಿಸುವವರೆಗೂ ಮನುಷ್ಯನಿಗೆ ಅದರ ಅರಿವು ಇರುವುದೇ ಇಲ್ಲ....ಪ್ರಕೃತಿ ಮಾತೆಯೆಂಬ ಶಾಲೆಯಲ್ಲಿ ನಾವು ನಿರಂತರವೂ ವಿದ್ಯಾರ್ಥಿಗಳೇ..ಅನಂತವಾದ ಈ ಸೃಷ್ಟಿಯಲ್ಲಿ ಕೇವಲ ಕೆಲವೊಂದು ವಿಸ್ಮಯವನ್ನು ಪ್ರಕೃತಿಯಿಂದ ವಿಜ್ಞಾನ ಲೋಕಕ್ಕೆ ಸಂಬಂಧ ಪಡಿಸಿದಾಗ ನಮ್ಮ ಈ ಜಗತ್ತು ಎಂಥಹ ಅದ್ಭುತ !!!!!!!!!!ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?ನಾವು ಆ ಸೂರ್ಯೋದಯದಲ್ಲಿ ದಾರ್ಚಿನ್ ನಿಂದ ಸುಮಾರು ೫ ಕಿಲೋ ಮೀಟರುಗಳಷ್ಟು ದೂರದ "ಅಷ್ಟಪಾದ " ಎನ್ನುವ ಒಂದು ಔಷಧೀ ಸಸ್ಯತೋಟಕ್ಕೆ ಚಾರಣ ಮಾಡಲು ಮುಂದಾದೆವು.ಅದು ಕೈಲಾಸ ಪರ್ವತದ ದಕ್ಷಿಣ ಭಾಗ..ಸುಮಾರು ಎರಡು ಗುಡ್ಡ ಹತ್ತಿದರೆ ಆ ಸ್ಥಳ ಸಿಗುತ್ತದೆ ಎಂದು ಪಾಂಡೆ ಹೇಳಿದರು. ಹಾಗೆ ಪಾಂಡೆಯವರ ಜೊತೆಗೆ ಹೆಜ್ಜೆ ಹಾಕಿದೆವು.ದಾರಿಯಲ್ಲಿ ನಮ್ಮಷ್ಟಕ್ಕೆ ಖುಷಿಯಿಂದ ತಮಾಷೆ ಮಾತುಗಳನ್ನಾಡುತ್ತಾ, ಕೈಲಾಸ ಪರ್ವತವನ್ನು ಹತ್ತಿರ,ಇನ್ನೂ ಹತ್ತಿರ,ಎಂದು ಹೇಳುತ್ತಾ ಆ ಔಷಧೀ ವನ ತಲುಪಿದ್ದು ತಿಳಿಯಲೇ ಇಲ್ಲ.ಆ ಪ್ರದೇಶಕ್ಕೆ ಕಾಲಿಟ್ಟೊಡನೆ ಆ ಪ್ರದೇಶವು ಸುಗಂಧಭರಿತವಾಗಿ ನಮ್ಮನ್ನು ಸ್ವಾಗತಿಸಿತು.ಎಲ್ಲರೂ ಆ ವನಗಳ ಮಧ್ಯೆ ಕುಳಿತೆವು.ಸುಮಾರು ೫೦ ಕಿ.ಮೀ.ಗಳಷ್ಟು ವಿಸ್ತೀರ್ಣವಿದೆ ಆ ಪ್ರದೇಶ. ಪುಷ್ಪಗಳಿಂದ ಅಲಂಕೃತವಾದ ಅಲ್ಲಿನ ಸಸ್ಯಗಳು ಎಲ್ಲವೂ ಒಂದು ಅಡಿಗಿಂತ ಹೆಚ್ಚು ಎತ್ತರವಿರಲಿಲ್ಲ.ಆ ಹಸಿರಿನ ಮೇಲೆ ಮೈ ಚಾಚಿ ,ಮೌನವಾಗಿ ಕುಳಿತಾಗ ಕೈಲಾಸ ಪರ್ವತವು ಸೂರ್ಯನ ಶಾಖದಿಂದ ವಿವಿಧ ರೂಪವನ್ನು ಪ್ರದರ್ಶಿಸುವುದು ತುಂಬಾ ವಿಸ್ಮಯವಾಗಿ ಕಂಡಿತು.ಅಲ್ಲಿಯೇ ಕುಳಿತು ಒಂದು ಘಂಟೆಯಷ್ಟು ಕಾಲ ಧ್ಯಾನ ಮಾಡಿದೆ.ತುಂಬಾ ಸಂತೃಪ್ತಿ ಭಾವನೆ ದೊರೆಯಿತು..ಅಂತಹ ಭಾವನೆಯನ್ನು ಕರುಣಿಸಿದ ಹಿಮಾಲಯಗಳ ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.ನನ್ನ ಜೊತೆಗೆ ಬಂದಿದ್ದ ಕೆಲವು ಮಹಿಳಾ ಚಾರಣಿಗರು ಹೂವುಗಳನ್ನು ಹಾಗೂ ಅದರ ಬೀಜಗಳನ್ನು ಸಂಗ್ರಹಿಸಿದರು..ನನಗೆ ಅವುಗಳನ್ನು ಕೊಯ್ಯಲು ಮನಸ್ಸಾಗಲಿಲ್ಲ.ಅವುಗಳನ್ನು ಸ್ಪರ್ಶಿಸುತ್ತಾ ಅವುಗಳೊಡನೆ ಮಾತನಾಡಿದಂತೆ ಸಂತೋಷವನ್ನು ಅನುಭವಿಸಿದೆ.ಸ್ವಲ್ಪ ಹೊತ್ತಿನ ಆನಂದಕ್ಕಾಗಿ ಅವುಗಳನ್ನು ಕೀಳುವುದು ಅಸಮಂಜಸವೆಂದೂ, ಅನಗತ್ಯವೆಂದೂ ಕಂಡಿತು.ಅವುಗಳ ಮೂಲಕ ವಿಶ್ವಶಕ್ತಿ ಹೇರಳವಾಗಿ ದೊರೆಯಬಹುದು ಅಲ್ವೇ? ನಾನು ಒಂಟಿಯಾಗಿ ಅಲ್ಲಿ  ತಿರುಗುತ್ತಿದ್ದೆ..ಆಗ ನಮ್ಮ ಶೇರ್ಪಾ ನನ್ನನ್ನು ಕರೆದು ಇಲ್ಲಿ ಬನ್ನಿ ಎಂದನು.ಅಲ್ಲಿ ಒಂದು ಗಿದದಲ್ಲಿರುವ ಹೂವನ್ನು ಅದರ ವಾಸನೆ ನೋಡುವಂತೆ ಹೇಳಿದನು.ಹಾಗೆಯೇ ಮಾಡಿದೆ.ಆ ನಂತರ ಶ್ವಾಸ ಎಳೆಯುವಂತೆ ಹೇಳಿದನು.ಬಹಳ ದೀರ್ಘವಾಗಿ ಉಚ್ವ್ಹಾಸ ನಡೆಯಿತು.ಅದಕ್ಕೆ ಮುಂಚೆ ಯಾವಾಗಲೂ ಅಂತಹ ಅನುಭವ ಆಗಿರಲಿಲ್ಲ.ಹಾಗೆ ಎರಡು ಮೂರು ಬಾರಿ ಮಾಡಿದಾಗ ಹೊಟ್ಟೆ ಒಳಗೆ ಏನೋ ಖಾಲಿ ಆದಂತೆ ಆಯಿತು.ಹೊಸ ಶಕ್ತಿ ಧಾರೆಯೊಂದು ನನ್ನಲ್ಲಿ ಪ್ರವೇಶಿಸಿದಂತೆ ಅನಿಸಿತು.ಆಗ ನಮ್ಮ ಶೇರ್ಪಾ ಈ ಔಷಧೀ ವನದ ಬಗ್ಗೆ ಹೇಳಿದರು.ಇಲ್ಲಿ ಈಗ ನಿಮಗೆ ತೋರಿಸಿದಂತಹ ಇನ್ನೂ ಅನೇಕ ಅದ್ಭುತ ಔಷಧೀ ಸಸ್ಯಗಳಿವೆ.ಇದರ ಮಾಹಿತಿ ತಿಳಿದು ಉಪಯೋಗಿಸಿದರೆ ದೇಹ ಶುದ್ಧಿ,ಚಿತ್ತ ಶುದ್ದಿ ಸಹಜವಾಗಿ ಲಭಿಸುತ್ತದೆ. ವಿದೇಶದಿಂದ ಅನೇಕ ಸಸ್ಯ ಶಾಸ್ತ್ರಜ್ಞರು,ಔಷಧೀಯ ಸಸ್ಯಗಳಿಗಾಗಿಯೂ ,ಇಲ್ಲಿನ ವಿಶಿಷ್ಟ ಹೂಗಳಿಗಾಗಿಯೂ,ಎಲೆಗಳಿಗೆ ಲಕ್ಷಾಂತರ ರೂ.ಖರ್ಚು ಮಾಡಿಕೊಂಡು ಇಲ್ಲಿಗೆ ಬರುತ್ತಾರೆ..ಇಂತಹ ಅದ್ಭುತ ಪ್ರಕೃತಿ ತಾಣಕ್ಕೆ ನಮಿಸಿ ಅಲ್ಲಿಂದ ನಮ್ಮ ರೂಮಿಗೆ ಹೊರಡಲು ತಯಾರಾದೆವು.ಸಮಯ ಮಧ್ಯಾಹ್ನ ೩.೦೦ ಘಂಟೆ.ನಮ್ಮಲ್ಲಿದ್ದ ಬಿಸ್ಕೆಟ್ ಗಳನ್ನೂ ತಿಂದು ನೀರು ಕುಡಿದೆವು.ಎಲ್ಲರಿಗೂ ಬಹಳ ಹಸಿವಾನದಂತೆ ಕಾಣುತ್ತಿತ್ತು.ಎಲ್ಲರ ಕೈಯಲ್ಲಿದ್ದ ಬಿಸ್ಕೆಟ್ ಗಳು ಖಾಲಿಯಾಗಿದ್ದವು.ಎಲ್ಲರ ಮುಖದಲ್ಲಿ ಹಸಿವು ನೀಗಿದ ತೃಪ್ತಿಯಿತ್ತು. ಕೆಲವು ಫೋಟೋಗಳನ್ನು ತೆಗೆದೆವು..ಅಲ್ಲಿನ ಪ್ರಕೃತಿಗೆ ವಿದಾಯ ಹೇಳಿ ಹೊರಡಲು ತಯಾರಾದೆವು.ನನಗೆ ಒಂದು ಕ್ಷಣ ಹೀಗನ್ನಿಸಿತು."ನಾನು ಹಿಂತಿರುಗಿ ಹೋಗದೆ ಈ ಪ್ರದೇಶಗಲ್ಲಿ ಉಳಿದುಬಿಟ್ಟರೆ ಏನಾಗುತ್ತೆ?"ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಂಡೆ.ಈ ಪ್ರಶ್ನೆ ನನ್ನನ್ನು ಬೆನ್ನಟ್ಟಿ ಕಾಡತೊಡಗಿತು.ಎಲ್ಲರೂ ಮುಂದೆ ನಡೆಯುತ್ತಿದ್ದರು.ಅವರಿಂದ ಅರ್ಧ ಕಿ.ಮೀ ಗಳಷ್ಟು ದೂರ ನಾನು ನಡೆಯುತ್ತಲಿದ್ದೆ.ಮತ್ತೆ ನಾನು ಒಂಟಿಯಾದೆ..ನನಗೆ ಹಾಗೆ ನಡೆಯುವುದೇ ಆನಂದವಾಗಿತ್ತು.ಆ ನಡಿಗೆಯಲ್ಲಿ ನನ್ನ ಜೀವನದ ಪರಿಶೀಲನೆ ,ಆತ್ಮ ಅವಗಾಹನೆಯಾಯಿತೋ ಎಂದನಿಸಿತು.,ಮತ್ತೆ ನಾನು ನನ್ನೂರಿಗೆ ಮರಳಬೇಕೆ? ಅಥವಾ ಹೋಗದಿದ್ದರೆ ನನ್ನ ಹೆತ್ತವರಿಗೆ ನಾನು ಕಾಣೆಯಾದ ವಿಷಯ ಹೇಗೆ ತಿಳಿಸುವುದು?ಎಂದೆಲ್ಲ ಗೊಂದಲವಾಯಿತು.ನಡೆಯುತ್ತಿರುವಂತೆ ನಾನು ಹೀಗೆ ಯೋಚನೆ ಮಾಡುತ್ತಿದ್ದೆ.ಹಿಮಾಲಯಗಳಲ್ಲಿ ವಿರಕ್ತಿ,ವೈರಾಗ್ಯ,ಬೇಗ ಸಿದ್ಧಿಸುತ್ತವೆ ಎಂಬ ಮಾತು ಕಥೆಗಳಲ್ಲಿ ಓದಿದ ನೆನಪು ನಿಜವೆನಿಸಿತು.ಯಾಕೆ ನನ್ನಲ್ಲಿ ಈ ಬದಲಾವಣೆ ಬಂತು? ನಮ್ಮ ತಂಡ ಕಣ್ಣಿಗೆ ಕಾಣದಷ್ಟು ದೂರ ಆಯಿತು.ಒಂದೆಡೆ ಭಯ, ಆತಂಕ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಕುಳಿತೆ.ಸಮಯ ಸಂಜೆ ೫.೩೦ ಆಗಿತ್ತು.ಒಂದೆಡೆ ಚಳಿ ಗಾಳಿ.ಮತ್ತೊಂದೆಡೆ ನನ್ನ ಬಗ್ಗೆ ನನಗೆ ಸ್ಥಿಮಿತವಿಲ್ಲ..ಸಂಜೆ ಆಹ್ಲಾದಕರವಾಗಿತ್ತು.ಗಿಡಗಳ ಪೊದರುಗಳಲ್ಲಿ ಪಕ್ಷಿಗಳು ರಹಸ್ಯಗಳೇನನ್ನೋ ಹೇಳಿ ಕೊಡುವಂತಿತ್ತು...ಗಿಡಗಳು  ಗಾಳಿ ಬೀಸುವಾಗ ಅವುಗಳು ಅಲ್ಲಡುತ್ತಿರುವಾಗ ನಿನ್ನ ಮಾತನ್ನು ನಾವೂ ಕೇಳಿಸಿ ಕೊಳ್ಳುತ್ತಿದ್ದೇವೆ ಎನ್ನುತ್ತಾ ತಲೆದೂಗುತ್ತಿರುವಂತೆ ಅಲ್ಲಾಡುತ್ತಿದ್ದವು. ನಡೆಯುತ್ತಿದ್ದ ಕಾಲುಗಳೊಂದಿಗೆಸಂಬಂಧವೇ ಇಲ್ಲದಂತೆ ಮನಸ್ಸು ತನ್ನ ಕೆಲಸದಲ್ಲಿ ತೊಡಗಿತ್ತು. ಹೋಗದೆ ನನ್ನನ್ನು ಕುರಿತಾದ ಸಮಾಚಾರವನ್ನು ನನ್ನ ಮನೆಯವರಿಗೆ ತಿಳಿಸುವುದು ಹೇಗೆ?ಎಂಬ ಅನೇಕ ರೀತಿಯಲ್ಲಿ ಮನಸ್ಸು ಗೊಂದಲವಾಯಿತು.ಯಾವ ಪದ್ಧತಿಯಲ್ಲಿ ಕಳುಹಿಸಿದರೆ ,ಅವರಿಗೆ ನನ್ನ ಬಗ್ಗೆ ಯೋಚನೆ ಇಲ್ಲದೆ ನನ್ನನ್ನು ಮರೆತು ಹೋಗುತ್ತಾರೆ.?ಎಂಬ ಪ್ರಶ್ನೆಗೆ ಉತ್ತರ ಸಿಗದಾಗ ಇಲ್ಲಿಂದ ಹೊರಡುವುದೇ ಉತ್ತಮ ಎಂದು ಕಂಡಿತು.ಈ ಯೋಚನೆ ಬಹಳ ಚೆನ್ನಾಗಿ ಇದ್ದಂತೆ ಅನಿಸಿತು.ಹಾಗೆಯೇ ಮಾಡುತ್ತೇನೆ ಎಂದು ಸಂತೋಷವಾಗಿ ದೃಢವಾಗಿ ನಿಶ್ಚೈಸಿದೆ.ನನ್ನ ಸಂತೋಷ ನಡಿಗೆಯ ವೇಗವನ್ನು ಹೆಚ್ಚಿಸಿತು.ಬೆನ್ನ ಮೇಲಿದ್ದ ಬ್ಯಾಗಿನ ಭಾರ ಹಗುರವಾದಂತಹ ಫೀಲಿಂಗ್. ನನ್ನ ಸಹ ಚಾರಣಿಗರು ದಾರ್ಚಿನ್ ನಲ್ಲಿರುವ ರೂಮಿಗೆ ತಲುಪಿ ಅರ್ಧ ಘಂಟೆಯಲ್ಲಿ ನಾನೂ ತಲುಪಿದೆ. ಹಾಗಾಗಿ ಯಾರಿಗೂ ಸಂಶಯ ಬಂದಿರಲಿಲ್ಲ.ರಾತ್ರಿ ೮.೩೦ ಆಯಿತು.ಊಟ ಮುಗಿಸಿದೆವು.ಮಲಗಿದಾಗ ನಾನು ಮತ್ತೊಮ್ಮೆ ಈ ದಿವಸದ ಅನುಭವಗಲ್ಲು ಮೆಲುಕು ಹಾಕಿದೆ. ನನಗೆ ಸಂತೋಷದ ಅಥವಾ ನೆಮ್ಮದಿಯ ವಿಷಯ ಅಂದರೆ ಇಂದಿನಿಂದ ನನ್ನ ಬಳಿ ತ್ರಿಪ್ತಿಕರ ಉತ್ತರ ಇದೆ.ಈ ಉತ್ತರ ಕಂಡುಕೊಳ್ಳಲು ಪಟ್ಟ ಶ್ರಮವನ್ನು ನೆನೆಸಿಕೊಂಡಾಗ ನಿದ್ರಾ ದೇವತೆ ಪ್ರೇಮದಿಂದ ನನ್ನನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಳು...

Friday, December 11, 2009

ಮಾನಸ ಸರೋವರ ಯಾತ್ರೆ -22












ಆ  ದಿನ ಬೆಳಿಗ್ಗೆ ಎದ್ದಾಗ ಸುಮಾರು ಆರುವರೆ ಗಂಟೆಯಾಗಿತ್ತು. ನಮ್ಮ ಡೇರೆಯಲ್ಲಿ   ಗೊರಕೆ ಹೊಡೆದು ಎದ್ದ ನನಗೆ ಹೊರಗಿನ ಚಳಿಯ ಊಹೆ ಇರಲಿಲ್ಲ. ರಾತ್ರಿ ಮಲಗಿದ್ದ ಡ್ರೆಸ್ಸ್ ಹಾಗೆ ಇತ್ತು. ಎರಡು ಟೀ ಶರ್ಟ್, ಮೇಲೊಂದು ಸ್ವೆಟರ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲು ಚೀಲ, ಕೈಗೆ ಕವಚ, ಇದೆಲ್ಲದರ ಮೇಲೆ ಬೆಚ್ಚಗಿರುವ ಸ್ಲೀಪಿಂಗ್ ಬ್ಯಾಗ್ ಜಿಪ್ ಎಳೆದುಕೊಂಡು ಕೇವಲ ಸ್ವಲ್ಪ ಮುಖ ಹೊರಗೆ ಕಾಣುವ ಹಾಗೆ ಮಲಗಿದ್ದ ಎಲ್ಲರಿಗೂ ನಿದ್ದೆ ಎನ್ನುವುದು ಮರದ ದಿಮ್ಮೆಯಂತೆ ಆಗಿತ್ತು. ಆರುವರೆಗೆ ಎದ್ದ ನಾವು,ಡೇರೆಯ  ಬಾಗಿಲು ತೆಗೆದರೆ ಸುಯ್ಯನೆ ಬಂತು ತಣ್ಣನೆಯ ಗಾಳಿ. ಹೊರೆಗೆ ಏನೂ ಕಾಣಿಸುತ್ತಿರಲಿಲ್ಲ, ಬಾಗಿಲ ಮೂಲಕ ಬಂದ ಗಾಳಿ ನಮ್ಮನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಈ ರೀತಿಯ ಪರಿಸ್ಥಿತಿಯಲ್ಲಿ, ನಡೆಯುವುದು  ಅಸಾಧ್ಯವಾದ ಮಾತು. ನಮ್ಮ ನೈಸರ್ಗಿಕ ಕರೆಗಳನ್ನು ಮುಗಿಸಿಕೊಂಡು ಬಂದು, ಹಲ್ಲು ಉಜ್ಜಿ, ಮುಖ ತೊಳೆದುಕೊಂಡು ಬಂದು ಮತ್ತೆ ಬೆಚ್ಚಗಿನ ನಮ್ಮ ಉಡುಪುಗಳನ್ನು ಧರಿಸಿಕೊಂಡೆವು. ಸುಮಾರು ಏಳುಗಂಟೆ ನಲವತ್ತೈದು ನಿಮಿಷಕ್ಕೆ ಎಲ್ಲರೂ ಒಂದೆಡೆ  ತಲುಪಿ, , ಬ್ರೆಡ್-ಜಾಮ್ ಮತ್ತು  ಹೊಟ್ಟೆಗೆ ಇಳಿಸಿದೆವು. ನಮ್ಮ ದೊಡ್ಡ ಲಗೇಜನ್ನು ನಮ್ಮ ನಮ್ಮ ಯಾಕ್ ಗಳ ಬೆನ್ನಿಗೆ ಕಟ್ಟಲು  ರವಾನಿಸಿ ಅಗತ್ಯವಿದ್ದ ಕಡಿಮೆ ವಸ್ತುಗಳನ್ನು ನಾವು ಹೊತ್ತುಕೊಂಡು, ನಮ್ಮ ನೆರವಿಗೆ ಬೇಕಾದ ಕೋಲುಗಳನ್ನು ಹಿಡಿದು ಹೊರಟಾಗ ಸಮಯ ಒಂಬತ್ತು ಗಂಟೆ. ಆ ನಿಧಾನವಾಗಿ ನಮ್ಮ ನಡಿಗೆ ಶುರುವಾಯಿತು, ಹಿಂದಿನ ದಿನ ನಿತ್ಯ ಮಂಜಿನ ಪರ್ವತಗಳನ್ನು  ದಾಟಿ ಬಂದ ನಮಗೆ ಅಷ್ಟೊಂದು ದಟ್ಟವಾದ ಮಂಜು  ಕಾಣಿಸುತ್ತಿರಲಿಲ್ಲ. ನಡೆಯುತ್ತಾ ನಡೆಯುತ್ತಾ ಮಂಜು  ಕಡಿಮೆಯಾದಂತೆ ಕಾಣಿಸಿತು. ಸುಮಾರು ಒಂದು ಗಂಟೆಯ ಚಾರಣದ  ನಂತರ ಬಿಸಿಲು ಕಾಣಿಸತೊಡಗಿತು. ಹಾಗೆ ಬಿಸಿಲು ಜಾಸ್ತಿಯಾಯಿತು. ಮೈಮೇಲೆ ತೊಟ್ಟಿದ್ದ ಅಧಿಕ ಬಟ್ಟೆಗಳು ಒಂದೊಂದಾಗೆ ಕಳಚಿ ಬ್ಯಾಗನ್ನು ಸೇರತೊಡಗಿದವು. ಕೇವಲ ಎರಡು ಗಂಟೆಗಳಲ್ಲಿ ಹತ್ತು ಡಿಗ್ರಿಯಿಂದ ಸುಮಾರು ಮುವತ್ತು ಡಿಗ್ರಿ ತಾಪಮಾನಕ್ಕೆ ತಲುಪಿದ್ದೆವು. ಇಲ್ಲಿಂದ ಶುರುವಾಯಿತು ತಾಪತ್ರಯ. ಕೆಲವರಿಗೆ ಈ ತಾಪಮಾನದ ಬದಲಾವಣೆ ಸಹಿಸಲು ಆಗಲಿಲ್ಲ. ನಮ್ಮ ಗುಂಪಿನಲ್ಲಿ ಬಹಳ ಚುರುಕಿದ್ದ ಕೇಶವಣ್ಣ  ನಡೆಯಲಾಗದೆ ತನ್ನ ವೇಗವನ್ನು ಕಡಿಮೆ ಮಾಡಿದರು . ಎಲ್ಲರಿಗಿಂತ ಮುಂದಿರುತ್ತಿದ್ದವರು , ನಿಧಾನವಾಗಿ ಕೊನೆಯ ಸ್ಥಾನಕ್ಕೆ ಬಂದರು .ಆಗ ಅವರ ಅವಸ್ಥೆಯನ್ನು ಗಮನಿಸಿ ಶೇರ್ಪಾ ಅವರನ್ನು ಹೆಗಲ ಮೇಲೆ ಹಾಕಿಕೊಂಡು ವೇಗವಾಗಿ ನಡೆದರು..  ಅವರ  ಜೊತೆಗೆ ನಾನೂ ನಡೆದೆ. . ನನಗೆ ಇಂತಹ ಪರಿಸ್ಥಿತಿ ಬರಬಾರದು ಎಂದು ದೇವರಲ್ಲಿ ಮೊರೆ ಇಟ್ಟೆ..  ಮಧ್ಯಾಹ್ನ ೧೨.೩೦ ಕ್ಕೆ  ಚಾರಣಿಗರು   ದೂರದಲ್ಲಿ ಕಾಣುತ್ತಿದ್ದ ಒಂದು ವಿಶಾಲವಾದ ಬಯಲಿನಲ್ಲಿ  ಕುಳಿತು ತಮ್ಮ ತಮ್ಮ ಊಟದ ಪ್ಯಾಕೆಟ್‌ಅನ್ನು ಬಿಚ್ಚಿ ತಿನ್ನುತ್ತಿದ್ದರು. ನಾವು ಅಲ್ಲಿಗೆ ಹೋಗುವುದರೊಳಗೆ ಎಲ್ಲರೂ ಅವರವರ ಊಟವನ್ನು ಮುಗಿಸಿ ವಿಶ್ರಮಿಸುತ್ತಿದರು. ಸುಮಾರು ನಾಲ್ಕು ಗಂಟೆಯ ಪ್ರಯಾಣದ ನಂತರ ನಮಗೆ ಸಿಕ್ಕ ವಿಶ್ರಾಂತಿ ಅದಾಗಿತ್ತು. ನಾವೆಲ್ಲಾ ಬ್ರೆಡ್, ಕೇಕ್, ಹಣ್ಣಿದ್ದ ನಮ್ಮ ಊಟವನ್ನು ತಿನ್ನುತ್ತಿದ್ದರೆ, ಸುಸ್ತಾಗಿದ್ದ ಆ ಕೇಶವಣ್ಣ  ಹಾಗೆಯೆ ನೆಲದ  ಮೇಲೆ ಮಲಗಿದ್ದರು . ನಮ್ಮೆಲ್ಲರ ಒತ್ತಾಯದ ಮೇರೆಗೆ ಅವರು  ತಿನ್ನಲು ಶುರುಮಾಡಿದರು . ನಿಧಾನವಾಗಿ ಬಂದ ನಾವಷ್ಟೆ ಅಲ್ಲಿ ಉಳಿದುಕೊಂಡೆವು, ಉಳಿದವರು ನಡೆಯಲು ಶುರುಮಾಡಿದರು. ಬಹಳ ಸುಸ್ತಾಗಿದ್ದ ಕೇಶವಣ್ಣ  ನೋಡು ನೋಡುತ್ತಲೆ ತಿಂದಿದ್ದ ಎಲ್ಲವನ್ನು ವಾಂತಿ ಮಾಡಿಕೊಂಡರು . ಎಷ್ಟು ಸುಸ್ತಾಗಿದ್ದರೆಂದರೆ , ವಾಂತಿಮಾಡಿಕೊಳ್ಳುವಾಗ ಬಗ್ಗಲೂ ಅವರ ಲ್ಲಿ ಶಕ್ತಿ ಇರಲಿಲ್ಲ. ನನಗೆ  ಹೊರಡಲು ಹೇಳಿ ಗೈಡ್ ಮತ್ತು ನಮ್ಮ ಇಬ್ಬರು ಸಹ ಚಾರಣಿಗರು  ಅಲ್ಲೆ ಉಳಿದುಕೊಂಡರು. ನಾನು  ಅವರ  ಬಗ್ಗೆ ಯೋಚನೆ ಮಾಡುತ್ತಾ ನಿಧಾನವಾಗಿ ನಡೆಯುತ್ತಿದ್ದೆವು. ಸಣ್ಣ ಸಣ್ಣ ಗುಡ್ಡಗಳನ್ನು  ಹತ್ತಿ ಇಳಿಯುತ್ತಿದ್ದೆವು.  ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಪ್ರತೀ ೧೦೦ ಮೀಟರಿಗೊಮ್ಮೆ  ನಾವು ಬಂದ ದಾರಿಯನ್ನು ನೋಡುತ್ತಿದ್ದೆವು. ಒಂದು ಕಡೆ ನಿಂತು ನೋಡುತ್ತಿದ್ದಾಗ ನಾಲ್ಕುಜನ ಬರುತ್ತಿರುವುದು ಕಾಣಿಸಿತು. ನಿಧಾನವಾಗಿಯಾದರೂ ಪರವಾಗಿಲ್ಲ, ಬರುತ್ತಿದ್ದಾರಲ್ಲ ಎನ್ನುವ ಸಮಾಧಾನದಿಂದ ನಾವು ಮುಂದುವರೆದೆವು..


 ಇನ್ನು ಸುಮಾರು 10 ಕಿಲೋ ಮೀಟರು ಗಳಷ್ಟು ಪ್ರಯಾಣ ಮಾಡಿದರೆ ನಮ್ಮ ಕೈಲಾಸ ಪರ್ವತದ ಪ್ರದಕ್ಷಿಣೆ ಮುಗಿಯುತ್ತದೆ. ಇಷ್ಟು ಬಂದವರಿಗೆ ಕೂಡಾ ನಮಗೆ ಇನ್ನುಳಿದ 10 ಕಿ.ಮೀ.ಚಾರಣ ಮಾಡುವುದು ತುಂಬಾ ಕಷ್ಟ... ಅಲ್ಲಿ ನಿಂತು ಕೆಲವು ಫೋಟೋ ಗಳನ್ನು ತೆಗೆಯುತ್ತಿದ್ದಾಗಲೇ ಶುರುವಾಯಿತು ಮಳೆ. ಮಳೆಗೆ ತಪ್ಪಿಸಿಕೊಳ್ಳಲು ಅಲ್ಲಿ ಎಲ್ಲೂ ಜಾಗವಿಲ್ಲ. ದೂರ ದೂರದವರೆಗೂ ಮರವಿಲ್ಲ, ಸೂರೆನ್ನುವ ಪದ ಕೂಡ ಹತ್ತಿರ ಸುಳಿಯುತ್ತಿರಲಿಲ್ಲ. ಇದ್ದ ಒಂದೇ ದಾರಿಯೆಂದರೆ  ನಾವು ಹಾಕಿದ ರೈನ್ ಕೋಟನ್ನು ಅಗಲವಾಗಿ ಬಿಡಿಸಿಕೊಂದೆವು..  ಆಕಾಶನೋಡುತ್ತಿದ್ದ ಬೆಟ್ಟ, ಈಗ ಪಾತಾಳ ನೋಡುತ್ತಿದೆ. ಮಳೆಗೆ ಕಲ್ಲುಗಳು ಜಾರುತ್ತಿವೆ ಇಂಥಹ ಪರಿಸ್ಥಿತಿಯಲ್ಲಿ ಜೋರಾಗಿ ಓಡುವುದು ಅಪಾಯವನ್ನು ಎಳೆದುಕೊಂಡಂತೆ. ಮಳೆಯಲ್ಲಿ ನೆನೆದರೆ ಒಂದು ತೊಂದರೆ ಬೇಗ ಓಡಿದರೆ ಇನ್ನೊಂದು ತೊಂದರೆ. ಬೇರೆ ದಾರಿ ಇಲ್ಲದೆ ಹರ ಸಾಹಸಮಾಡಿ ಬ್ಯಾಗಲ್ಲಿದ್ದ ಬ್ರೆಡ್ ಜ್ಯಾಮ್ ತಿಂದೆವು. . ಮಳೆ ಮತ್ತು ಚಳಿಗೆ ಕುಸಿದು ಹೋಗಿದ್ದ ಎಲ್ಲರೂ ನಡುಗುತ್ತಿದ್ದೆವು.  ಸಮಯ ಸಂಜೆ ೫.೦೦ ಘಂಟೆ.ಸುಮಾರು ಒಂದು ಘಂಟೆಯಷ್ಟು ವಿಶ್ರಾಂತಿಯ ಸಮಯ ...  ಚಳಿಗೆ ಎಲ್ಲರೂ ನಲುಗಿ ಹೋಗಿದ್ದರು. ಈ ಜಾಗಕ್ಕೆ ಬಂದ ದಿನ ನಾನು ಮುಖ ತೊಳೆಯಲು ಹೋಗಿ ನೀರು ಮುಟ್ಟಿದ್ದೆ.  ನೀರು ಹಾಕಿಕೊಂಡಾಗ ಅಂಥ ತೊಂದರೆ ಆಗಲಿಲ್ಲ, ಎರಡು ಮೂರು ಸಲು ನೀರು ಹಾಕಿಕೊಂಡೆ, ಮುಖ ಎನ್ನುವುದು ಹಾಗೆ ಮರಗಟ್ಟಿತ್ತು. ಕೈಗಳನ್ನು ಉಜ್ಜಿಕೊಂಡೆ ..  ಜೋರಾಗಿ ಉರಿಯತೊಡಗಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಉರಿಯುತ್ತಿದ್ದ ಕೈ, ಬ್ರೆಡ್ ತಿಂದು ಗ್ಲೌಸ್  ಹಾಕುವ   ತನಕ ಸುಮ್ಮನಾಗಲಿಲ್ಲ. ಇದನ್ನು ಅನುಭವಿಸಿದ್ದ ನಾನು ಮತ್ತೆಂದು ಚಳಿಯಲ್ಲಿ ತಣ್ಣೀರಿನ ಜೊತೆಗೆ ಸರಸವಾಡಲಿಲ್ಲ. ನಮ್ಮ ಪ್ರಯಾಣ ಮುಂದುವರಿಯಿತು. ಸುಮಾರು ೨ ಕಿ.ಮೀ ದೂರದಷ್ಟು ನಡೆದಾಗ ವಿಶಾಲವಾದ ಬಯಲಿನಲ್ಲಿ ನಡೆಯುವ ಭಾಗ್ಯ ನನ್ನ ಕಾಲಿಗೆ ಒದಗಿ ಬಂತು.ಇನ್ನು ಕೇವಲ ೫ ಕಿಮೀ ದೂರ ನಡೆದರೆ ನಮ್ಮ ಚಾರಣ ಮುಗಿಯುತ್ತದೆ ಎಂದು ಪಾಂಡೆ ಹೇಳಿದಾಗ ನಮ್ಮಲ್ಲಿ ಏನೋ ಸ್ವಲ್ಪ ಸಮಾಧಾನ.ನನ್ನ  ಟಾರ್ಚ್ ಲೈಟಿನಲ್ಲಿ ಬ್ಯಾಟರೀ ಖಾಲಿಯಾಗಿ ದಾರಿಯೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.ಒಬ್ಬರನ್ನೊಬ್ಬರು ಹೋದೆವು.   ನಮ್ಮ ನಡಿಗೆ ಬಹಳ ನಿಧಾನವಾಗಿದ್ದರಿಂದ ಅವರು ಬಂದಿದ್ದು ನಮಗೂ ಖುಷಿಯಾಯಿತು .  ದೂರದಲ್ಲಿ ಅಸ್ಪಷ್ಟವಾಗಿ ಸಾಲು ಸಾಲು ಬೆಳಕು ಕಾಣುತ್ತಿದ್ದವು ...ಹತ್ತಿರವಾಗುತ್ತಿದ್ದಂತೆಯೇ ಆ ಬೆಳಕು ಸ್ಪಷ್ಟವಾಯಿತು.ನಮ್ಮ ಕಾರುಗಳು ನಮ್ಮನ್ನು ಕರೆದುಕೊಂಡು ಹೋಗಲು ಕಾದಿದ್ದವು. ಡ್ರೈವರ್ ಗಳು  ನಮ್ಮನ್ನು ಕರೆದುಕೊಂಡು ಹೋಗಲು ಸುಮಾರು ೧.೫೦ ಕಿ.ಮೀ ಗಳಷ್ಟು ಮುಂದೆ ಬಂದರು. ನಮ್ಮ ಡ್ರೈವರ್ ತುತೋಯಿ ನಮ್ಮನ್ನು ಸ್ವಾಗತಿಸಿದ.ಎಲ್ಲರೂ ಸೇರಿ ಫೋಟೋ ತೆಗೆಸಿಕೊಂಡೆವು.ನಮ್ಮ ಡ್ರೈವರ್ ,ಶೇರ್ಪಾ ಹಾಗೂ ನನ್ನ ಜೊತೆ ಚಾರಣ ಮಾಡಿದ  ಉಷಾ,ಕೇಶವಣ್ಣ,ಕಿಶೋರ್ ಎಲ್ಲರೂ ಕಾರಿನತ್ತ  ನಡೆಯುತ್ತಾ ಹೋದೆವು. ಕಾರಿನಲ್ಲಿ   ದಾರ್ಚಿನ್ ನತ್ತ ಪ್ರಯಾಣ ಮಾಡಿದೆವು. ರೂಮಿಗೆ  ಬ೦ದವನೇ  ಕುಳಿತು ಎರಡು ಸ್ಪೂನ್‌ ನೀರು  ಕುಡಿದಿರಬೇಕು...... ತಲೆ ಧಿಮ್ಮೆ೦ದಿತು....... ಮೈ ತು೦ಬಾ ಬೆವರು! ತಲೆ  ಗಿರಗಿರ್ರನೇ ಸುತ್ತತೊಡಗಿತು. ವಾಂತಿ ಆಯಿತು. ಡಾಕ್ಟರ್ ಬಂದು ನನಗೆ ಔಷಧಿ  ಕೊಟ್ಟರು. ದೇಹ ನಿದ್ದೆ ಬಯಸುತ್ತಿದೆ, ಮನಸ್ಸು ಪೂರ್ತಿ ಕೈಲಾಸದಲ್ಲಿ ತೇಲಾಡುತ್ತಿದೆ  . ನಾನು ಊರಿಂದ  ಬಂದು ಇಂದಿಗೆ ೩೦ ದಿನಗಳಾದವು..ಈ ಮೂವತ್ತು  ದಿನಗಳ ಪ್ರತಿ ಘಳಿಗೆಯೂ ಅತ್ಯದ್ಭುತವಾಗಿ ಕಳೆಯಲ್ಪಟ್ಟಿವೆ.ನನ್ನ ಆನಂದಕ್ಕಿಂದು ಪಾರವೇ ಇಲ್ಲದಂತಾಗಿದೆ. ನನ್ನ ಈ ಸಂಭ್ರಮವನ್ನು.ಅಕ್ಷರಕ್ಕಿಳಿಸುವ ಒಂದು ಪುಟ್ಟ ಪ್ರಯತ್ನವಿದು.ಹಾಗೆ ನಿದ್ದೆಗೆ ಜಾರಿದೆ..









Sunday, December 6, 2009

ಮಾನಸ ಸರೋವರ ಯಾತ್ರೆ-೨೧

ಎಂಟು ಮಂದಿ ಮಲಗಬಹುದಾದ ಡೇರೆಯೊಳಗೆ ನಾವು ನಾಲ್ವರೇ ಆರಾಮವಾಗಿ ಬಿದ್ದುಕೊಂಡೆವು.
ನನಗಂತೂ ಎಲ್ಲೇ ಮಲಗಿದರೂ, ಎಷ್ಟೇ ಗಲಾಟೆಯಿದ್ದರೂ ನಿದ್ದೆ ಬೀಳುತ್ತದೆ. ಹೀಗಿರುವಾಗ ರಭಸವಾದ ಗಾಳಿ ಬೀಸಿ ರಾತ್ರಿ ಸುಮಾರು ೧೨ ಗಂಟೆಗೆ ಡೇರೆಯ ಹುಕ್-ಗಳು ಹಾರಿಹೋಗಿದ್ದವು. ಉಳಿದ ಮೂವರು ಅದನ್ನು ಸರಿಪಡಿಸಿ ಮಲಗಿದ್ದರು. ನನಗದು ಗೊತ್ತೇ ಆಗಲಿಲ್ಲ. ಆ ಪರಿಯ ಸುಖ ನಿದ್ರೆಯಲ್ಲಿದ್ದೆ ನಾನು. ಆದರೆ ಬೆಳಗ್ಗಿನ ಜಾವ ೩ ಗಂಟೆಗೆ ತಲೆಗೆ ಏನೋ ತಾಗುತ್ತಿರುವಂತೆ ಭಾಸವಾದಾಗ ಎಚ್ಚರವಾಯಿತು. ಗಾಳಿಯ ರಭಸಕ್ಕೆ ಡೇರೆಯ ಅಧಾರಕ್ಕಿರುವ ಸಣ್ಣ ರಾಡುಗಳು ಸಂಪೂರ್ಣವಾಗಿ ಬಗ್ಗಿ ತಲೆಗೆ ತಾಗುತ್ತಿದ್ದವು. ಆದರೂ ಹಾಗೇ ಮಲಗಿಕೊಂಡೆ. ನಮ್ಮ ಶೇರ್ಪಾ  ಮತ್ತೆ ಹೊರನಡೆದು ಎಲ್ಲವನ್ನು ಸರಿಪಡಿಸಿ ಬಂದರು.ಡೇರಾಪುಕ್ ನಲ್ಲಿ  
 ನಾವು ಇದೇ ಡೇರೆಯೊಳಗೆ ೧೦ ಜನರು ಮಲಗಿದ್ದರೆ ಇಲ್ಲಿ ನಾಲ್ಕೇ ಮಂದಿ! ಪ್ರಕೃತಿಯ ಮಡಿಲಲ್ಲಿ  ರಾತ್ರಿಯನ್ನು ಮನಸಾರೆ ಆನಂದಿಸಿದೆವು..
ಮರುದಿನ ಬೆಳಗ್ಗೆ ಗೌರೀ ಕುಂಡದತ್ತ ನಮ್ಮ ಚಾರಣ..







ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು, ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ... ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಹಿಮ ಕರಗಬಹುದು. ಆದರೆ ಇದು ಬೀಳುವುದು ಗೊತ್ತಾಗುವುದಿಲ್ಲ. ನಮ್ಮಷ್ಟಕ್ಕೇ ನಾವು ಮೇಲೆ ಹತ್ತುತ್ತಿರುವಾಗ ಒಮ್ಮೆಲೆ ಅಪ್ಪಳಿಸಿದರೆ ಏನೂ ಮಾಡುವಂತಿಲ್ಲ. ಹಗ್ಗ ಹಿಡಿದು ಧೈರ್ಯದಿಂದ ಇದ್ದರೆ ಹೇಗೋ ಬಚಾವ್ ಆಗಬಹುದು.. ಹಿಮ ಬಿರುಗಾಳಿಗೂ ಅಷ್ಟೇ. ಅದರ ವೇಗಕ್ಕೆ ಆನೆ ಸಿಕ್ಕರೂ ಅದನ್ನು ಎತ್ತಿಕೊಂಡು ಸಾವಿರಾರು ಅಡಿಯ ಕೆಳಗಿನ ನೀರ್ಗಲ್ಲಿನ ಮೇಲೆ ಒಗೆದು ಬಿಡುತ್ತದೆ. ಬದುಕುವ ಮಾತು ಇನ್ನೆಲ್ಲಿಂದ ಬಂತು? ಎಂಥ ಗಟ್ಟಿಗನಿದ್ದರೂ, ಒಂದೇ ಸಮನೆ ಪರ್ವತ ಹತ್ತಿ ಬರುತ್ತೇನೆಂಬ ಹುಮ್ಮಸ್ಸಿದ್ದರೂ ಪ್ರಯೋಜನವಾಗದು.

ಅದಕ್ಕೇ  ನಾವು ನಿಸರ್ಗವನ್ನು ಧಿಕ್ಕರಿಸಲು ಹೋಗುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮ ದೇಹ ಪ್ರಕೃತಿ ಹೊಂದಿಕೊಳ್ಳದಿದ್ದರೆ ಏನೂ ಸಾಧ್ಯವಾಗದು. ಆದ್ದರಿಂದಲೇ ದಿನಗಳ ಲೆಕ್ಕ ಹಾಕುತ್ತಾ ಹತ್ತಲು ಬಾರದು. ಪ್ರಕೃತಿಯೇ ಒಪ್ಪಿಗೆ ನೀಡುವವರೆಗೆ ಕಾಯಬೇಕು... ಕ್ರಾಂಪೋನ್ ಪಾಯಿಂಟ್ ಎಂಬುದೊಂದಿದೆ. ಅಲ್ಲಿಂದ ನಾವು ವಿಶೇಷವಾದ ಪಾದರಕ್ಷೆ (ಕ್ರಾಂಪೋನ್ ಬೂಟ್) ಧರಿಸಬೇಕು. ಬೂಟ್‌ಗೆ ಮೊಳೆಗಳಂಥ ಸಾಧನ ಅಳವಡಿಸಲಾಗಿರುತ್ತದೆ. ಅದರಿಂದ ಹಿಮವನ್ನು ಒದೆಯುತ್ತಾ ಹೆಜ್ಜೆ ಇಡಬೇಕು. ಹಿಮ ಕಂದಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಕ್ರಮ. ಕೆಲವೊಮ್ಮೆ ಭೂಮಿಯ ಶಾಖ ಮತ್ತು ಗಾಳಿಯ ಒತ್ತಡದಿಂದ ಉಂಟಾಗುವ ಬಿರುಕುಗಳು ಕಂದಕಗಳಾಗಿ ಮಾರ್ಪಡುತ್ತವೆ.
ಅದರ ಮೇಲೆ ಸುರಿಯುವ ಮಂಜು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ. 5 ಅಡಿಯಿಂದ 2 ಸಾವಿರದಡಿಯವರೆಗೂ ಆಳವಿರಬಹುದು. ನಾವು ಕ್ರಾಂಪೋನ್ಸ್‌ಗಳಿಂದ ಒದ್ದು ನೋಡದಿದ್ದರೆ ಗೊತ್ತಾಗದೇ ಈ ಕಂದಕಕ್ಕೆ ಬೀಳಬಹುದು. ನಾವು ಒದ್ದಾಗ ಅದರ ಶಬ್ದ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ಟೊಳ್ಳಾದ ಜಾಗವಿದ್ದರೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ. ಹಿಮ ಕಂದಕಕ್ಕೆ ಬಿದ್ದರೆ ಶವ ಸಿಗುವುದೂ ಖಚಿತವಿಲ್ಲ. ಈ ಸೂಕ್ಷ್ಮತೆ ಅರಿವಿರದಿದ್ದರೆ ಕಷ್ಟ.


ಈ ಮಧ್ಯೆ ಆ ಚಳಿಯಲ್ಲಿ ಶೇರ್ಪಾ ದಂಪತಿಗಳು ಅವರ ಎಳೆ ಮಗುವಿನ ಆರೈಕೆ ಮಾಡುವುದು ನೋಡಿದಾಗ ಎಂತವರಿಗೂ ಹೃದಯ ಕರಗಬಹುದು.ಆ ಮಗುವಿಗೆ ಆಗಾಗ ಮೈ ಹುಷಾರಿಲ್ಲದಾಗ ನಮ್ಮ ಶೇರ್ಪಾ ಹೋಗಿ ಉಪಚರಿಸುತ್ತಿದ್ದ.ಆ ಮಗುವಿಗೆ ನಿದ್ರೆ ಹತ್ತಿದ ಮೇಲೆ ಸಂತೃಪ್ತಿ ಭಾವನೆಯೊಂದಿಗೆ ಬಂದು ನಮ್ಮ ತಂಡವನ್ನು ಸೇರುತ್ತಿದ್ದ. ಇಂತಹ ಕಠಿಣ ಚಾರಣದ ಸಮಯದಲ್ಲಿಯೂ ಅವರ ಮಾತೃ ವಾತ್ಸಲ್ಯ ಕಂಡು ನಾನೂ ಒಂದು ಕ್ಷಣ ಮಗುವಾಗಬೇಕು ಎನ್ನಿಸಿತು..
ನಾನು ಗೌರೀ ಕುಂಡಕ್ಕೆ ಬರುವುದಕ್ಕೂ ಈ ದೃಶ್ಯಕ್ಕೂ ಎಲ್ಲಿಯ ಅನುಬಂಧ? ನನ್ನ ನೆನಪು  ಒಂದು ಕ್ಷಣ ತಾಯಿ ಮಡಿಲಿಗೆ ಹೋಯಿತು.ನನ್ನ ಅಮ್ಮನೂ ನನ್ನನ್ನು ಹೀಗೇ ಎತ್ತಿರಬಹುದೇ?ತಾಯಿ ಬಗ್ಗೆ  ವರ್ಣನೆ ಅಪರಿಮಿತ.  ಭಾರತದ ವೈಶಿಷ್ಟ್ಯವೆಂದರೆ ನದಿ, ಬೆಟ್ಟ, ಪರ್ವತ, ನಿಸರ್ಗವನ್ನೂ ಮಾತೆಯೆಂದೇ ಆರಾಧಿಸಲಾಗುತ್ತದೆ. ಮನುಕುಲದ ಅಭ್ಯುದಯಕ್ಕೆ, ವಿಕಾಸಕ್ಕೆ ಕಾರಣೀಭೂತಳಾದ ಈ ತಾಯಿಯನ್ನು ನೆನೆಯಲು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ...

13,100 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಒಂದಕ್ಕೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಹಿಮಗೋಡೆ (ಐಸ್‌ವಾಲ್) ದಾಟಬೇಕು. ಬಹಳ ಎಚ್ಚರಿಕೆಯಿಂದ ಈ ಗೋಡೆಯನ್ನು ದಾಟಿ ಆ ಬದಿಗೆ ಹೋದರೆ ನಾರ್ತ್‌ಕೋಲ್. ಇದಕ್ಕೆ 8 ಗಂಟೆ ತಗುಲಿತು. ಜೋರಾದ ಗಾಳಿ ಬೀಸುತ್ತಿತ್ತು. ಒಂದು ಕಡೆ ಟೆಂಟ್ ಕಟ್ಟಿದಾಗ ಗಾಳಿ ನುಂಗಿ ಹಾಕಿತು. ಸ್ವಲ್ಪ ಹೊತ್ತು ಸುಮ್ಮನಾಗಿ ಬೇರೆ ಜಾಗ ಹುಡುಕಿ ಶಿಬಿರ ನಿರ್ಮಿಸಿ ಅಲ್ಲಿಯೇ ಉಳಿದು ಹೋಗೋಣ ಎಂದು ಪಾಂಡೆ ಹೇಳಿದರು.. ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.


ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಸೇಷನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಜಾಗ್ರತೆಯಾಗಿ   ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ. ಆಗ ಕಂಡಿತು ಗೌರೀ ಕುಂಡ... ಅದು ಸ್ಪಟಿಕದಂಥ ಶುಭ್ರ ನೀರು.. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ  ಕೊಳವಿದೆ. ಪಾರ್ವತೀ ದೇವಿಯ ಸ್ನಾನದ ಕೊಳ ಎಂದು ಪುರಾಣದ ಉಲ್ಲೇಖ.ಹಿಂದೂ ಭಕ್ತಾದಿಗಳು ಇಲ್ಲಿ ಪೂಜೆ ಮಾಡುತ್ತಾರೆ. ನಾನು ಈ ನೀರಿನಲ್ಲಿ ಕೈ ಇಡುತ್ತಿದಂತೆಯೇ  ಬೆರಳುಗಳೆಲ್ಲ ಮರಗಟ್ಟಿ ಹೋದವು.ಆದರೂ ಸ್ವಲ್ಪ ನೀರು ತೆಗೆದುಕೊಂಡು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡೆ.ದೂರದಿಂದ ಈ ಕೊಳವನ್ನು ನೋಡಿದಾಗ ಹಸಿರು ಬಣ್ಣದಿಂದ ವಿಚಿತ್ರವಾಗಿ ಕಾಣಿಸುತ್ತದೆ. ಹತ್ತಿರಕ್ಕೆ ಹೋಗಿ ನೋಡಿದರೆ ,ನೀರು ಮಾಮೂಲು ಆಗಿಯೇ ಇರುತ್ತದೆ.ಪಾರ್ವತೀ ದೇವಿ ಶಿವನನ್ನು ವಿವಾಹ ಮಾಡಿಕೊಳ್ಳಬೇಕೆಂದು ಈ ಸರೋವರದಲ್ಲಿ ತಪಸ್ಸು ಮಾಡಿದಳೆಂದೂ, ಪ್ರತೀ ದಿನವೂ ಈ ಕೊಳದಲ್ಲಿ ತನ್ನ ಕೋರಿಕೆಯನ್ನು  ನೆರವೆರಿಸಿಕೊಂಡಳು ಎಂದು ಪಾಂಡೆ ಈ ಗೌರೀ ಕುಂಡದ ಬಗ್ಗೆ ಮಾಹಿತಿ ನೀಡಿದರು..ಮನಸ್ಸಿನಲ್ಲಿ ಪಾರ್ವತೀ ದೇವಿಯನ್ನು ಪ್ರಾರ್ಥನೆ ಮಾಡಿದೆ.ಗೌರೀ ಕುಂಡದಿಂದ ತುಂಬಾ ಎತ್ತರಕ್ಕೆ ಹತ್ತಿ ಸುಮಾರು ೪ ಕಿಲೋಮೀಟರು ಗಳಷ್ಟು ದೂರ ಬಂದೆವು..










ನನ್ನ ಬ್ಯಾಗ್,ಊರುಗೋಲು,ಇವನ್ನೆಲ್ಲ ಎತ್ತಿಕೊಂಡು ನಡೆಯುವಾಗ ಮುಂಚೆ ಇದ್ದದಕ್ಕಿಂತ ಹತ್ತು ಪಟ್ಟು ಭಾರ ಜಾಸ್ತಿಯಾದಂತೆ ಅನಿಸಿತು. ಸಂಜೆ ೬.೦೦  ಘಂಟೆಯಾಯಿತು.ಈ ಜಾಗ ನನಗೆ ಒಂದು ದೇವ ಭೂಮಿ ಎಂದನಿಸಿತು, ನನ್ನ ಊಹೆಯಂತೆ ಕಂಡುದೆಲ್ಲಾ ವಾಸ್ತವವಾಗಿ ನಡೆಯಿತೆನ್ನಲು ಗೌರೀ ಕುಂಡದಿಂದ ೮೦೦ ಅಡಿಯಷ್ಟು ಎತ್ತರಕ್ಕೆ ಹತ್ತಿ ಬಂದಿರುವುದೇ ಆಧಾರ!!!!!!ನನ್ನ ಜನ್ಮ ಧನ್ಯವಾಯಿತು ಎಂಬ ವಿಶ್ವಾಸ ಬಂತು.. ಈ ರೀತಿಯ ಅನುಭವವನ್ನು ಕೊಟ್ಟಿದ್ದು ನನ್ನ ಹಿರಿಯರ ಹಾಗೂ ನನ್ನ ಗುರುಗಳ ಆಶೀರ್ವಾದ ಫಲವೇ?????ಹೀಗೆ ಭಾವನಾ ಲೋಕದಲ್ಲಿ ವಿಹರಿಸುತ್ತಾ ಮುಂದೆ ನಡೆಯುತ್ತಿದ್ದಾಗ   ಹಿಮದ ಗಾಳಿ ನಮ್ಮನ್ನು ನಮ್ಮ ಟೆಂಟ್  ನಲ್ಲಿ ಸ್ವಾಗತ ಮಾಡುತ್ತಿತ್ತು...

Friday, November 27, 2009

ಮಾನಸ ಸರೋವರ ಯಾತ್ರೆ-೨೦


ರಾತ್ರಿ ೧೦ ಘಂಟೆ,ನಾವು ಡೇರೆಯಲ್ಲಿ ಮಲಗಲು ತಯಾರಾದೆವು. ಎಷ್ಟು ಸಲ ಕಣ್ಣು ಮುಚ್ಚಿಕೊಂಡರೂ ನಿದ್ದೆ ನಮ್ಮ ಬಳಿ ಸುಳಿಯಲಿಲ್ಲ.ಒಂದು ಬದಿ ಮೈ ಕೊರೆಯುವ ಚಳಿ , ಮತ್ತೊಂದೆಡೆ ನಮ್ಮ ಸಹ ಚಾರಣಿಗನನ್ನು ಕಳೆದುಕೊಂಡ ದುಖ:ನಮ್ಮ ಜೀವ ಹಿಂಡುತ್ತಿದೆ. ಛಳಿ ಹೆಚ್ಚಾಗಿದೆ.ಎಷ್ಟು ಹೊದ್ದುಕೊಂಡರೂ ಸಾಲದೆನಿಸಿ ಕಷ್ಟವಾಗುತ್ತಿದೆ.ರಾತ್ರಿಯೆಲ್ಲಾ ಕಳೆಯುವುದು ಹೇಗೆಂದು ಭಯವಾಗುತ್ತಿದೆ.ಮಧ್ಯ ರಾತ್ರಿ ೧.ಘಂಟೆಯವರೆಗೂ  ನಿದ್ದೆ ಬರಲಿಲ್ಲ. ಮತ್ತೆ ನಿದ್ದೆ ಎಷ್ಟು ಹೊತ್ತಿಗೆ ಬಂತೋ ತಿಳಿಯದು.ಆ ನಿದ್ದೆ ಆ ರಾತ್ರಿಯ ಚಳಿಯಿಂದ ತಪ್ಪಿಸಿಕೊಳ್ಳುವ ಸದಾವಕಾಶವನ್ನು ಪರಶಿವನು ಆ ರೀತಿ ನಮಗೆ ಪ್ರಸಾದಿಸಿದನೆಂಬ ಅನುಭೂತಿ ಉಂಟಾಯಿತು.ಮುಂಜಾನೆ ೪.೦೦ ಘಂಟೆಯ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು.ಡೇರೆಯಿಂದ ಹೊರಗೆ ಬಂದೆ.ನಿಂತು ಸುತ್ತಲೂ ನೋಡಿದಾಗ zeero ವೋಲ್ಟ್ ಬಲ್ಬ್ ಉರಿದಂತೆ ಕಾಣುತ್ತಿದೆ.ಅಷ್ಟು ಮಂದವಾದ ಬೆಳಕು.ಆ ರಾತ್ರಿಯಲ್ಲೂ ಕೈಲಾಸ ಪರ್ವತವು ತನ್ನ ದಿವ್ಯ ಕಾಂತಿಯನ್ನು ಪಸರಿಸುತ್ತಲೇ ಇದೆ.ಮಂಜುಗಡ್ಡೆಯಿಂದ ಆವೃತವಾದ ಕೈಲಾಸ ಪರ್ವತವು ಬೃಹದಾಕಾರದ ಶಿವಲಿಂಗದಂತೆ ಶೋಭಿಸುತ್ತಿದೆ.ಮತ್ತೊಮ್ಮೆ ಇಂತಹ ಅವಕಾಶವನ್ನು ನೋಡಲು ಈ ಜೀವನದಲ್ಲಿ ನನಗೆ ದೊರೆಯುವುದು ಅಸಾಧ್ಯವೆಂದು ನನಗನಿಸಿತು.   ಈ ಜೀವನದಲ್ಲಿ ನನಗೆ ಇದು ಕೊನೆಯಾಗಿರಬಹುದು.ಆ ಮುಂಜಾನೆ ಮಳೆಹನಿಗಳ ರೂಪದಲ್ಲಿ ಮಂಜಿನ ತುಣುಕುಗಳೊಡನೆ ಅಮೃತಸಿಂಚನವಾಯಿತು. ನನ್ನ ಆನಂದಕ್ಕೆ ಎಲ್ಲೆಯೇ ಇಲ್ಲದಂತಾಯಿತು.ವಿಪರೀತ ಛಳಿಯಾಗಿದ್ದರಿಂದ ತಲೆಗೆ ಧರಿಸಿದ ಟೋಪಿ,ಕೋಟುಗಳನ್ನು ಒಂದು ನಿಮಿಷಕ್ಕಾದರೂ ತೆಗೆಯಬೇಕೆಂದು ಅನಿಸಿತು. ಈ ಅಮೃತ ಸಿಂಚನ ನನಗಾಗಿಯೇ ಈ ಪರಮೇಶ್ವರನಿಂದ ಸೃಷ್ಟಿ ಸಲ್ಪಟ್ಟಿದೆನಿಸಿ,ನಾನು ಧರಿಸಿದ ಕೋಟು .ಕ್ಯಾಪ್ ಗಳನ್ನು ತೆಗೆದು ಆ ಹನಿಗಳಲ್ಲಿ ನೆನೆಯುವ ಪ್ರಯತ್ನದಲ್ಲಿ ತೊಡಗಿದೆ.ಕೇವಲ ಐದು ನಿಮಿಷಗಳು ಮಾತ್ರ ಹನಿಗಳು ಬಿದ್ದು ನಿಂತು ಹೋದವು.!ಎಂತಹ ಅದೃಷ್ಟ ನನ್ನದು!ನಿಂತಿದ್ದ ಕಡೆಯಿಂದಲೇ ಕೈಲಾಸನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ.  ಇದು ಕೈಲಾಸನಾಥನ ಅನುಗ್ರಹ.ಎಷ್ಟೋ ಜನ್ಮದ ಪುಣ್ಯವೋ ಅಥವಾ ನನ್ನ ಹಿರಿಯರು ಮಾಡಿದ ಅನುಷ್ಠಾನದ ಫಲವೋ?ಈ ದೃಶ್ಯವನ್ನು  ಕಾಣಲು ನನ್ನನ್ನು ಈ ಭುವಿಗೆ ತಂದಿಳಿಸಿದ ನನ್ನ ಪಿತೃಗಳನ್ನು ಒಂದು ಕ್ಷಣ ಸ್ಮರಣೆ ಮಾಡಲು ಕೈಲಾಸನಾಥನು ನನಗೆ ಸುಬುದ್ಧಿಯನ್ನು ಅನುಗ್ರಹಿಸಿದನು. ನನಗೆ ಆ ಆಲೋಚನೆ ಬಂದ ಕೆಲವೇ ನಿಮಿಷಗಳಲ್ಲಿ ಹನಿಗಳು ಬೀಳುವುದು ನಿಂತಿತು.ಏನೊಂದು ಪವಾಡ!!!!!!!!! ನಾನು ಕಾಣುವುದು ಕನಸೋ ಎಂದು ಒಂದು ಕ್ಷಣ ನನ್ನ ತೊಡೆ ತಟ್ಟಿ ನೋಡಿದೆ. ಇಲ್ಲ!! ಎಚ್ಚರವಾಗಿದ್ದೇನೆ. 
         ನೋಡು ನೋಡುತ್ತಿದ್ದಂತೆಯೇ ಸೂರ್ಯೋದಯವಾಯಿತು.ಆ ಸೂರ್ಯೋದಯದ ಕಿರಣ ಕೈಲಾಸ ಪರ್ವತಕ್ಕೆ ಬಿದ್ದಾಗ, ಮಂಜು ಆವಿಯಾಗುವದು, ಇವೆಲ್ಲ ಏಕ ಕಾಲಕ್ಕೆ ನಡೆಯುವುದು ಕೈಲಾಸದಲ್ಲಿ ಬೆಂಕಿಯ ಜ್ವಾಲೆ ಎದ್ದಂತೆ ಕಾಣುತ್ತಿತ್ತು.  ಸುಮಾರು ಬೆಳಿಗ್ಗೆ  ೭.೦೦ ಘಂಟೆಯ ನಂತರ ನಮ್ಮ ಚಾರಣವನ್ನು ಮುಂದುವರಿಸಿದೆವು.ಸುಮಾರು ೨ ಕಿಲೋಮೀಟರ್ ಗಳಷ್ಟು ಚಾರಣ ಮಾಡಿದಾಗ ಒಂದು ಗುಹೆ ಸಿಕ್ಕಿತು.ಆ ಗುಹೆಯಲ್ಲಿ ಒಂದು ದೇವತೆಯ ವಿಗ್ರಹ ಕಂಡಿತು.ಇದೀಗ ನಾವು ಕೈಲಾಸ ಪರಿಕ್ರಮದ ಮಾರ್ಗವನ್ನು ಕಂಡು ಹಿಡಿದ ವ್ಯಕ್ತಿಯ ವಿಗ್ರಹವೂ ಅಲ್ಲಿದೆ.ಅಲ್ಲಿಂದ ಹೊರಬಂದರೆ ಮೂರು ಪರ್ವತಗಳು ಕಾಣಿಸುತ್ತವೆ.ಅಷ್ಟರವರೆಗೆ ನನ್ನ ಏಕೈಕ ಸಂಗಾತಿಯಾಗಿದ್ದ ನನ್ನ ಕ್ಯಾಮರಾ ಬ್ಯಾಟರೀ ಲೋ ಎಂದು ತೋರಿಸುತ್ತಿತ್ತು.ಆ ಪರ್ವತಗಳ ಫೋಟೋಗಳನ್ನು ತೆಗೆದ ಕೂಡಲೇ ನನ್ನ ಕ್ಯಾಮರಾ ಆಫ್ ಆಯಿತು.ನನ್ನ ನಿರಾಶೆ ಆಗ ಹೇಳ ತೀರದು.ಆ ಪರ್ವತಗಳು ಮಂಜುಶ್ರೀ,ಅವಲೋಕಿತೇಶ್ವರೀ,ವಜ್ರಪಾಣಿ. ಆ ಪರ್ವತಗಳ ದರ್ಶನ ತುಂಬಾ ವಿಶಿಷ್ಟ..ಎಂದು ಪಾಂಡೆ ಪರ್ವತಗಳ ಬಗ್ಗೆ ವಿವರಣೆ ನೀಡಿದರು. ಜ್ಞಾನ ,ದಯೆ, ಅಧಿಕಾರಗಳನ್ನು ಆ ಪರ್ವತಗಳು ಪ್ರಸಾದಿಸುತ್ತವೆಯಂತೆ.ಅವುಗಳಿಗೆ ನಮಸ್ಕರಿಸಿದೆ.ಅಲ್ಲಿದ್ದ ವ್ಯಕ್ತಿಯೊಬ್ಬ ,ನನ್ನನ್ನು ಇವರು ಇಂಡಿಯಾ ದವರೇ?ಎಂದು ನಮ್ಮ ಶೇರ್ಪಾನಲ್ಲಿ ವಿಚಾರಿಸಿದ. ಹೌದು ಎಂದ,ಅವರೂ ಪಶ್ಚಿಮ ಬಂಗಾಳದವರಾಗಿದ್ದರು.ಎಷ್ಟೋ ಪ್ರೇಮದಿಂದ ನಗು ನಗುತ್ತಾ ಅವರು ನನ್ನನ್ನು ಮಾತನಾಡಿಸಿದರು.ಅವರ ಭಾಷೆಯಲ್ಲಿ ನನಗೆ ಏನೂ ಅರ್ಥವಾಗಲಿಲ್ಲ. ಸುಮಾರು ೪ ಕಿ.ಮೀ.ಗಳಷ್ಟು ಚಾರಣ ಮಾಡಿದಾಗ ಒಂದು ಅದ್ಭುತ ಎದುರಾಯಿತು.!!!   ಚಿತ್ರ ವಿಚಿತ್ರ ಗಳಿಂದ ಕೂಡಿದ ಆ ಸ್ಥಳ."ಶಿವಸ್ಥಾಲ್"..ಸೂರ್ಯನ ಕಿರಣ ನಡು ನೆತ್ತಿಯ ಮೇಲೆ ಬಿದ್ದರೂ ಬಿಸಿಲಿನ ಪ್ರಖರ ಸ್ವಲ್ಪವೂ ಅರಿವಾಗುತ್ತಿರಲಿಲ್ಲ.ಇಲ್ಲಿ ಕೆಲವು  ಅಘೋರಿಗಳು ತಪಸ್ಸು ಮಾಡುತ್ತಿದ್ದರು.ಆ ಕ್ಷಣ ನನಗೆ ಹಿಮಾಲಯನ್ ಬ್ಲಂಡರ್ ಎನ್ನುವ ಲೇಖನ ಅಘೋರಿಗಳ ಬಗ್ಗೆ ಓದಿರುವುದು ನೆನಪಾಯಿತು.ಇಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕು ಎಂದು ಪಾಂಡೆ ಹೇಳಿದಾಗ ನನಗೆ ಮತ್ತಷ್ಟು ಭಯವಾಯಿತು.ಈ ಶಿವಸ್ಥಾಲ್ ನಲ್ಲಿ ಹಳೆಯ ಬಟ್ಟೆಗಳು,ತಲೆ ಕೂದಲುಗಳ ರಾಶಿ,ಪ್ರಾಣಿಗಳ ರುಂದಗಳು,ಹೀಗೆ ಅಸಹ್ಯವಾದ ವಸ್ತುಗಳನ್ನು ಕಂಡ ನಾನು ಅಲ್ಲಿಂದ ಆದಷ್ಟು ಬೇಗ ಓಡಬೇಕೆಂದು ನನ್ನ ಚಾರಣದ ವೇಗವನ್ನು ಹೆಚ್ಚಿಸಿದೆ.ಕೆಲವರು ತಮ್ಮ ರಕ್ತವನ್ನೂ ಇಲ್ಲಿ ಒಂದು ಹನಿ ಅರ್ಪಿಸಿದರೆ ಸ್ವರ್ಗ ಪ್ರಾಪ್ತಿ ಎಂದು ನಂಬುತ್ತಾರೆ.ಈ ಪ್ರದೇಶದಲ್ಲಿ ವೈರಾಗ್ಯ ಚೆನ್ನಾಗಿ ಮೈಗೂಡುತ್ತದೆ ಎಂದು ಟಿಬೆಟಿಯನ್ನರ ನಂಬಿಕೆ,ಅಂತೆಯೇ ಕೆಲವರು ಸತ್ತಂತೆ  ಮಲಗಿ ಏಳುತ್ತಾರೆ. ಅಲ್ಲಿ ಏನಾದರೊಂದನ್ನು ಸಮರ್ಪಿಸಿ ಹೋಗುವ ಪದ್ದತಿಯಂತೆ,ಹೀಗೆ ಪಾಂಡೆ  ಈ ಸ್ಥಳದ ಬಗ್ಗೆ ಮಾಹಿತಿ ನೀಡಿದರು.ಏನು ಬೇಕಾದರೂ ಆಗಲಿ ..ಮೊದಲು ಇಲ್ಲಿಂದ ನಡೆಯೋಣ ಎಂದು ನಾನು ಧರಿಸಿದ್ದ ಅಂಗಿಯೊಂದನ್ನು ಅಲ್ಲಿಗೆ ಸಮರ್ಪಿಸಿ ಮುಂದೆ ನಡೆದೆ.  ಎತ್ತರ ಹೆಚ್ಚುತ್ತಿದ್ದರಿಂದ ಅತೀ ಕಷ್ಟದಿಂದ ಹೆಜ್ಜೆ ಹಾಕಬೇಕಾಗುತ್ತಿತ್ತು.ಹತ್ತು ಹೆಜ್ಜೆ ನಡೆಯಲು ಹತ್ತು ನಿಮಿಷಗಳೇ ಬೇಕಾದಷ್ಟು ಕಷ್ಟದ ಪರಿಸ್ಥಿತಿ. ಅದರಲ್ಲೂ ಮಧ್ಯಾಹ್ನ ೩ ಘಂಟೆಯ ಸಮಯವಾದ್ದರಿಂದ ಬಾಯಿ ಒಣಗಿಹೋಯಿತು. ಡ್ರೈ ಫ್ರುಟ್ಸ್, ಚಾಕ್ಲೆಟ್ ಬಾಯಲ್ಲಿಟ್ಟುಕೊಂಡು ನಡೆಯಬೇಕಾಗುತ್ತಿತ್ತು.ಹಿಂದಿನ ರಾತ್ರಿ ಏನೂ ತಿಂದಿರಲಿಲ್ಲ.ಶರೀರ ಮತ್ತಷ್ಟು ಸುಸ್ತಾಗತೊಡಗಿತು. ಪಾಂಡೆಯವರು ನಮ್ಮನ್ನು ಅರ್ಧ ಘಂಟೆಗೊಮ್ಮೆ ಎಚ್ಚರಿಸಿ ಚಾರಣದಲ್ಲಿ ಬೇಕಾದ ಜಾಗ್ರತೆಗಳನ್ನು ಮನದಟ್ಟಾಗುವಂತೆ ಹೇಳುತ್ತಿದ್ದರು.ಹಿಂದಿನ ದಿನ ನಮ್ಮ ಚಾರಣಿಗರಲ್ಲೋಬ್ಬರಾದ  ಗುರುಮೂರ್ತಿಯವರು ಮೃತಪಟ್ಟಿದ್ದು ನನ್ನಲ್ಲಿ ಪೂರ್ತಿ ಭಯ ಮನೆ ಮಾಡಿತು.ಮತ್ತೆ ಓಂ ನಮಶಿವಾಯ ಜಪ ಮುಂದುವರಿಸಿದೆ.ನಾನು ನಮ್ಮ ಭಾರತಕ್ಕೆ ಪುನಃ ಕ್ಷೇಮವಾಗಿ ಮರಳಿ ನನ್ನ ಹೆತ್ತವರಿಗೆ ನಾನು ಕಾಣ ಬೇಕಾದರೆ ಅದಕ್ಕೆ ಕೈಲಾಸನಾಥನೇ ಕಾರಣ ಎಂದು ಬಲವಾಗಿ ನಂಬಿದೆ.ನನಗೆ ಆಗ ಉಳಿದದ್ದು ಅದೊಂದೇ ಆತ್ಮ ಸ್ಥೈರ್ಯ !!!!! ನನ್ನ ಪಕ್ಕದಲ್ಲೇ ಕೆಂಪು ವಸ್ತ್ರ ಧರಿಸಿ ಒಬ್ಬ ಟಿಬೆಟ್ ಲಾಮಾ ನನ್ನಿಂದ ವೇಗವಾಗಿ ನಡೆದ.ಈ ಹಿಂದೆ ನಮ್ಮ ಚಾರಣದಲ್ಲಿ ನಾನು ಅವನನ್ನು ನೋಡಿರಲಿಲ್ಲ.ಈಗ ಇದ್ದಕ್ಕಿದ್ದ ಹಾಗೆ ಅವನು ಎಲ್ಲಿಂದ ಬಂದ?ಎಂಬ ಸಂಶಯ, ಭಯ ,ಎಲ್ಲಾ ಒಟ್ಟಿಗೇ ಆಯಿತು.   ಇವನು ಅಘೋರಿಗಳ ಪೈಕಿ ಒಬ್ಬನಿರಬಹುದೇ?ಎಂಬ ಭಯ ನನ್ನನ್ನು ಕಾಡಿತು.ಅವನು ಮುಂದೆ ಹೋಗಿ ಹಿಂತಿರುಗಿ ನನ್ನನ್ನೇ ದಿಟ್ಟಿಸಿ ನೋಡಿದ!!!!!! ನನ್ನ ಎದೆ ಆಗ ನಿಮಿಷಕ್ಕೆ ೧೦೦ ಸಲ ಬಡಿಯಿತು.ಏನಾದರಾಗಲೀ ಎಂದು ಅವನಿಗೆ ಎರಡು ಕೈ ಮುಗಿದು ನಮಸ್ಕರಿಸಿದೆ.ಆತ ನನ್ನ ಹತ್ತಿರ ಬಂದ!!!!!!!! ಆತನ ಜೋಳಿಗೆಯಿಂದ ಒಂದು ಚಾಕ್ಲೆಟ್ ಹೊರತೆಗೆದ..ನನ್ನತ್ತ ಕೈ ಚಾಚಿದ.ನನ್ನ ಶೇರ್ಪಾ ಮುಂದೆ ಹೋಗಿದ್ದ.ನಾನು ಈಗ ಒಬ್ಬಂಟಿ.. ಏನು ಮಾಡುವುದು.ತೆಗೆದು ಕೊಳ್ಳದೇ ವಿಧಿಯಿಲ್ಲ!! ಒಂದೆಡೆ ನನ್ನಲ್ಲಿರುವ ಎಲ್ಲಾ ಆಹಾರ ಖಾಲಿಯಾಗಿದ್ದವು.ಧೈರ್ಯ ಮಾಡಿ ತೆಗೆದುಕೊಂಡೆ.  ನನಗೆ ಅದು ಚಾಕ್ಲೆಟ್ ಎನಿಸಲಿಲ್ಲ.ಇಂದಿನ ಯಾತ್ರೆಯನ್ನು ಮುಗಿಸಲು ಅತ್ಯಗತ್ಯವಾದ ಔಷಧಿಯೆಂದು ಭಾವಿಸಿದೆ..ನನ್ನ ಗುರುಗಳು ಆತನ ರೂಪದಲ್ಲಿ ಬಂದು ಕೊಟ್ಟರೆನ್ದನಿಸಿತು. ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಾ ಅವನೊಡನೆ ಮುಂದೆ ನಡೆದೆ..  ಮರಣಕ್ಕೆ ಹತ್ತಿರವಾದ ಪ್ರಯಾಣ.ಎಲ್ಲಾ ಆ ಈಶ್ವರನೇ ಭಾರ!!!!
                 ದೊಡ್ಡ ದೊಡ್ಡ ಕಲ್ಲುಗಳನ್ನೂ ಹಿಮದ ಬಂಡೆಗಳನ್ನೂ ದಾಟಿಕೊಂಡು ಸುಮಾರು ರಾತ್ರಿ ೭.೦೦ ಘಂಟೆಯ ಹೊತ್ತಿಗೆ  "ಡೋಲ್ಮಾಪಾಸ್"ಎನ್ನುವ ಪ್ರಮಾದಕರ ಪರ್ವತದ ಬಳಿಗೆ ತಲುಪಿದೆ.ಅಲ್ಲಿಂದ ಕೈಲಾಸ ಪರ್ವತದ ಉತ್ತರ ದಿಕ್ಕಿನ ಮುಖದ ದರ್ಶನ ಲಭಿಸಿತು..ಮೋಡಗಳು ಮಂಜಿನ ಹೊಗೆಯಿಂದಾಗಿ ಕ್ಷಣ ಕ್ಷಣಕ್ಕೂ ರೂಪ ಬದಲಾಯಿಸುತ್ತಿರುತ್ತದೆ.ತೀರಾ ಹತ್ತಿರದಲ್ಲೇ ಇರುವಂತೆ ಅನಿಸಿತು.ಮೇಲಕ್ಕೆ ಹತ್ತ ಬಹುದು ಎಂದು ಕೊಳ್ಳುತ್ತಾರೆ.ಆದರೆ ಯಾರಿಗೂ ಸಾಧ್ಯವಾಗದು..ನಾನು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಧ್ಯಾನ ಮಾಡಿದೆ.ಆಕ್ಸಿಜನ್ ಎಟುಕದೇ ಕಷ್ಟವಾಗುತ್ತಿದೆ,ನಮ್ಮ ಬೆನ್ನಲ್ಲಿ ಕಟ್ಟಿಕೊಂಡ ಆಕ್ಸಿಜನ್ ಸಿಲಿಂಡರ್ ಯಾವಾಗ ಮುಗಿಯುತ್ತದೆ ಎಂಬ ಭಯ!!!!!!!!ಆದರೂ ಪಟ್ಟು ಹಿಡಿದು ಕುಳಿತೆ...  ನನಗೆ ನೆನಪಿನಲ್ಲಿರುವ ಎಲ್ಲಾ ದೈವಿಕ ಶಕ್ತಿಗಳನ್ನು ಪ್ರಾರ್ಥಿಸಿದೆ. ಕಷ್ಟ ಬಂದಾಗ ಎಲ್ಲರೂ ನೆನಪಿಗೆ ಬರುತ್ತಾರೆ.ಎಲ್ಲೂ ಇಲ್ಲದ ನಂಬಿಕೆಗಳು,ವಿಶ್ವಾಸಗಳು ನಮ್ಮಲ್ಲಿ ಮನೆ ಮಾಡುತ್ತವೆ.ಎಲ್ಲದೂ ದೊಡ್ಡದೇ ಎನಿಸುತ್ತದೆ.ನನ್ನದೂ ಅಂತಹುದೇ ಪರಿಸ್ಥಿತಿ.ಈ ಡೋಲ್ಮಾ ಪಾಸ್ ದಾಟಿದರೆ ಸಾಕು,ಈ ದಿನದ ಯಾತ್ರೆಯಲ್ಲಿ ಅತೀ ಮುಖ್ಯವಾದ ತಿರು ಏರ್ಪಡುತ್ತದೆ. ಹಾಗೆಯೇ ಸುಮಾರು ೩ ಕಿಲೋ ಮೀಟರ್ ಗಳಷ್ಟು ನಡೆದು ಒಂದು ವಿಶಾಲವಾದ ಬಯಲಿನಲ್ಲಿ ಟೆಂಟ್ ಸಿದ್ಧಪಡಿಸಿ ಆ ರಾತ್ರಿ ಕಳೆಯುವ ಪ್ರಯತ್ನ ಮಾಡಿದೆವು.. 

Wednesday, November 18, 2009

ಮಾನಸ ಸರೋವರ ಯಾತ್ರೆ -೧೯




ಈ ಜೀವನವೇ ಅಷ್ಟೇ...... ಕಾಲ ಯಾರಿಗೂ ಕಾಯುವುದಿಲ್ಲ.. ನಮಗೂ ಸಹ... ಇದೆಲ್ಲರ ಮಧ್ಯದಲ್ಲಿ ದ್ವೇಷದ ಜೀವನ ಎಕೆ..? ಯಾರೇ ಬಂದರೂ ಸರಿ, ಅವರು ನಮ್ಮ ಮಿತ್ರರೇ ಅಗಿರಬಹುದು, ಇಲ್ಲಾ ಅಪರಿಚಿತರೇ ಅಗಿರಬಹುದು... ನಮ್ಮ ಧ್ಯೇಯ ಆದಷ್ಟು ನಗುವ ಹಂಚುವುದು.....ಕೊನೆಯಲ್ಲಿ ಅದು ಸಹ ಒಂದು ಸುಮಧುರ ನೆನಪಾಗಿ ಈ ಜಗವ ಬಿಟ್ಟು ಹೋದ ಮೇಲೂ ನಿಮ್ಮ ಪ್ರೀತಿ-ಪಾತ್ರರ ಮನದಲ್ಲಿ ಇದ್ದು ಅವರ ಜೀವನವನ್ನು ಒಂದು ಒಳ್ಳೆಯ ಆದರ್ಶವಾಗಿ ಮುಂದುವರಿಸುವುದು. ಅಲ್ವಾ??


ನಾವು ಜೀವನದ ಈ "ನಾಲ್ಕು ದಿನಗಳ" ಪಯಣವನ್ನ ಪ್ರತಿದಿನ ಉಲ್ಲಾಸದಿಂದ ಸಾಗಿಸಲೇ ಬೇಕು... ಕೆಲವೊಮ್ಮೆ ಎಂಥಾ
ಕಷ್ಟಗಳು ಬಂದರೂ ಸಹ... ಏಕೆಂದರೆ ಜೀವನ ಮರಳಿನ ಹಾಗೇ, ಕೈಯಿಂದ ಜಾರುತ್ತಲೇ ಹೋಗುತ್ತದೆ... ಪ್ರತಿ ಕ್ಷಣವು....! ನಾವು ಅದನ್ನು ಅರಿಯಲು ಹೋದರೆ ಕೊನೆಗೆ ನಾವು ಕಳೆದ ಕ್ಷಣಕ್ಕೆ ಕೊರಗ ಬೇಕು ಅಷ್ಟೆ.. ಇದ್ದ ಜೀವನವನ್ನೇ ಸುಂದರವಾಗಿ ಕಳೆದರೆ ಅದು ಮುಂದೊಂದು ದಿನ ಸುಂದರ ನೆನಪಾಗಿ ಬರುತ್ತೆ ತಾನೇ... ?? ನೆನಪು ಬರುತ್ತದೆ, ಹಾಗೇ ಹೋಗುತ್ತದೆ ಸಹ... ಆದರೂ ಕೆಲವೊಂದು ಸಲ ಆ ನೆನಪೇ ನಮ್ಮ ಜೀವನವನ್ನ ಸುಂದರಗೊಳಿಸೋದು ಅಲ್ಲವೇ? ಅವುಗಳ ಮರೆತರೆ.... ಎಂದಾದರೂ ಸಾಧ್ಯವೇ? .. ಈ ಲೋಕದಲ್ಲಿ ಕೆಲವು ಮಿತ್ರರು ಮತ್ತು ಕೆಲವು ಆಪ್ತರು ನಮ್ಮ ಪ್ರಾತಃ ಸ್ಮರಣೀಯರೇ ಅಗಿರುತ್ತಾರೆ. ಅವರಿಂದಲ್ಲವೇ ನಮ್ಮ ಬಾಳು ಇಷ್ಟು ಬೆಳೆದದ್ದು ಮತ್ತು ನಾವು ಸಮೃದ್ಧಿ ಹೊಂದದ್ದು... ಮರೆಯದೆ ಹೊಂದಿಸಿಕೊಂಡು ಹೋಗಬೇಕಾದ ಬಂಧದ ನೆನಪಿನ ಸಾಲುಗಳು ಅವು...ನಾನು ಯಾಕೆ ಈ ಪದಗಳನ್ನು ಹೇಳುತ್ತೆನೆಂದರೆ ನಮ್ಮ ಚಾರಣಿಗರ ಪೈಕಿ ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ... ಆ ವ್ಯಕ್ತಿ ಗುರುಮೂರ್ತಿ(ಹೆಸರು ಬದಲಿಸಲಾಗಿದೆ)..ಊರು ಕೊಯಂಬತ್ತೂರು . ಅಷ್ಟೇ ನನಗೆ ಗೊತ್ತು ಆ ವ್ಯಕ್ತಿಯ ಬಗ್ಗೆ .... ನಮ್ಮ ಮಾತುಗಳು ಮುಗಿದಿದ್ದವು. ಮನಸ್ಸು ಸಂತಸಗೊಂಡಿತು...ಆದರೂ ಹೃದಯಕ್ಕೆ ನಮ್ಮಿಂದ ಅದೇನೋ ಬೇಕಿತ್ತು ಆ ದಿನ.. ಮಾತಿನಲ್ಲಿಯೇ ಕಳೆದು ಹೋಗಿತ್ತು ಅದೇಷ್ಟೋ ಕ್ಷಣ.... ಸಮಯ ಅಂದಾಜು ಬೆಳಿಗ್ಗೆ ೧೦.೩೦ ... ನಾವು ದೆರಾಪುಕ್ ನಿಂದ ಕೈಲಾಸದ ಪಶ್ಚಿಮ ಭಾಗವಾದ ಗೌರೀ ಕುಂಡದತ್ತ ಹೆಜ್ಜೆ ಹಾಕುತ್ತಿದ್ದೆವು. ಕೆಲವರು ದೇರಾಪುಕ್ ನಿಂದ ಸುಮಾರು ೨ ಕಿಲೋ ಮೀಟರು ದೂರದಲ್ಲಿ ನೇರವಾಗಿ ಕೈಲಾಸದಿಂದಲೇ ಹರಿದು ಬರುತ್ತಿರುವ ಮಂಜಿನ ಹೊಳೆಯಲ್ಲಿ ಅಲ್ಲಿರುವ ಶಿವಲಿಂಗ ಸ್ವರೂಪದಂತೆ ಇರುವ ಕಲ್ಲಿಗೆ ಪೂಜೆ ಮಾಡುತ್ತಾ ಇದ್ದರು. ನಾನು ಅವುಗಳನ್ನೆಲ್ಲ ಗಮನಿಸುತ್ತ ನನ್ನಷ್ಟಕ್ಕೆ ನಮ್ಮ ಗುಂಪಿನವರೊಡನೆ ಸೇರಿ ಮುಂದೆ ನಡೆದೆ.. ಸುಮಾರು ೩೫ ಜನರ ತಂಡ ನಮ್ಮದಾಗಿದ್ದರಿಂದ ಬೇರೆ ಬೇರೆ ಗುಂಪುಗಳಲ್ಲಿ ನಾವು ಚಾರಣ ಮಾಡುತ್ತಿದ್ದೆವು. ನಮ್ಮ ತಂಡ ಸುಮಾರು ಎಲ್ಲರಿಗಿಂತ ಮುಂದೆ ಇತ್ತು. ಅದೊಂದು ತಬ್ಬಲಿ ದಿನ . ಕರುಳು ಕೊರೆಯುವ ಚಳಿ... ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು...ನಮ್ಮ ಶೇರ್ಪಾ ನ ಕಾಡ್ ಲೆಸ್ ರಿಂಗಣಿಸಿತು..ಅತ್ತ ಕರೆಯಿಂದ ಶೆರ್ಪಾನ ಉತ್ತರ.ಭಾಷೆ ಬರದ ನಮ್ಮಿಂದ ಶೆರ್ಪಾನಲ್ಲಿ ಮೌನದ ಮೂಲಕ ಪ್ರಶ್ನೆ.ಏನಾಯಿತು?ಎಂದು ಕೇಳಿದೆವು.. ನೀವು ಇಲ್ಲೇ ನಿಲ್ಲಿ..ಎಂದು ನಮ್ಮನ್ನು ಕುದುರೆಗಳಿಂದ ಕೆಳಗಿಳಿಸಿ ನಮ್ಮಲ್ಲಿನ ಒಂದು ಕುದುರೆಯನ್ನು ಆತ ಕೇಳಿ ವೇಗವಾಗಿ ದೇರಪುಕ್ ನತ್ತ ಹೋದ. ಏನೂ ತಿಳಿಯದ ನಮಗೆ ಭಯವಾಯಿತು.
ಸುಮಾರು ಒಂದು ಘಂಟೆಯಷ್ಟು ಕಾಲ ನಮ್ಮ ತಂಡ ಶೇರ್ಪಾನಿಗೆ ಕಾಡು ಕುಳಿತೆವು. ಸಮಯ ಮಧ್ಯಾಹ್ನ ೩.೦೦ ಘಂಟೆ,ಒಂದೆಡೆ ಹೊಟ್ಟೆ ಹಸಿಯುತ್ತಿತ್ತು. ಆ ಕ್ಷಣ ಹೆಲಿಕಾಪ್ಟರ್ ಶಬ್ದ ಕೇಳಿಸಿತು.ಮಂಜಿನಲ್ಲಿ ಅದರ ಶಬ್ದ ಕೇಳಿಸುವುದಲ್ಲದೆ ಹೆಲಿಕಾಪ್ಟರ್ ಕಾಣಿಸಲಿಲ್ಲ.ಅಂತೂ ನಮ್ಮ ಹತ್ತಿರವೇ ಹೋದದ್ದು ಸ್ಪಷ್ಟ..ಆಗ ನಮ್ಮ ಭಯ ಮತ್ತಷ್ಟು ಹೆಚ್ಚಿತು.ಸುಮಾರು ೪.೦೦ ಘಂಟೆಯಾಗುವಾಗ ಶೇರ್ಪಾ ಬಂದ.ಅವನ ಮನಸಿನಲ್ಲಿ ಏನೋ ಭಯ,ದುಖ ಕಂಡಿತು.ಆಗ ನಮ್ಮ ಪಂದೆಯವರೂ ಜೊತೆಗೆ ಇದ್ದರು.ಅವರಲ್ಲಿ ಏನಾಯಿತು? ಎಂದು ಕೇಳಿದೆವು. ಆಗ ನಿಮ್ಮ ತಂಡದ ಗುರುಮೂರ್ತಿ ಎಂಬವರು ಆಮ್ಲಜನಕದ ಕೊರತೆಯಿಂದ ನಿಮೆಲ್ಲರನ್ನು ಬಿಟ್ಟು ಹೋಗಿದ್ದಾರೆ.ಎಂದರು.ಆಗ ನಮ್ಮ ಜಂಘಾ ಬಲವೇ ಉಡುಗಿ ಹೋಯಿತು.ಇನ್ನು ನಮ್ಮ ಪರಿಸ್ಥಿತಿ ಏನೋ?ಮನೆಯಲ್ಲಿ ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ವ್ಯಕ್ತಿಗಳನ್ನು ಕೈಲಾಸನಾಥನೆ ನಮ್ಮನ್ನು ರಕ್ಷಿಸಬೇಕು ಎಂದು ಪ್ರಾರ್ಥನೆ ಮಾಡಿದೆವು. ನಮ್ಮ ಬಳಿ ಇರುವ ಆಮ್ಲಜನಕದ ಸಿಲಿಂಡರ್ ನ ವೇಗವನ್ನು ಕಡಿಮೆ ಮಾಡಿಕೊಂಡೆವು.ಅದುವರೆಗೆ ೮.೦೫ ವೇಗದಲ್ಲಿ ಉಸಿರಾದುತ್ತಿದ್ದೆವು.ಈಗ ೬.೦೦ ಗೆ ಮಾಡಿಕೊಂಡೆವು. ಅಷ್ಟೊತ್ತಿಗೆ ಗುರುಮೂರ್ತಿ ಜೊತೆಗೆ ಇರುವ ತಂಡ ನಮ್ಮ ತಂಡದ ಜೊತೆ ಸೇರಿದರು.ನಾವು ಅವರಲ್ಲಿ ನಡೆದ ವಿಷಯವನ್ನು ಕೇಳಿದೆವು.ಆಗ ದೆರಪುಕ್ ನಲ್ಲಿ ನಾವು ನೋಡಿದ ಮಂಜಿನ ಹೊಳೆಯಲ್ಲಿ ಶಿವಲಿಂಗ ಸ್ವರೂಪದ ಕಲ್ಲಿಗೆ ಪೂಜೆ ಮಾಡಿ ಆ ತೀರ್ಥವನ್ನು ಅವರು (ಗುರುಮೂರ್ತಿ)ಸ್ನಾನ ಮಾಡಿದರಂತೆ.ಆಗ ಮೈ ತಣ್ಣಗಾಗಿ ರಕ್ತ ಹೆಪ್ಪುಗಟ್ಟಿತು. ಆಗ ಅವರಲ್ಲಿದ್ದ ಆಮ್ಲಜನಕದ ಸಿಲಿಂಡರ್ ಖಾಲಿಯಾಗಿತ್ತು.ಆಗ ಅವರ ಗುಂಪಿನವರ ಸಿಲಿಂಡರ್ ಮೂಲಕ ಆಮ್ಲಜನಕವನ್ನು ವರ್ಗಾಯಿಸುವಷ್ಟು ಸಮಯ ಅವರ ದೇಹ ಆ ಪರಿಸ್ಥಿತಿಯನ್ನು ತಾಳಿಕೊಳ್ಳಲಿಲ್ಲ..ಆ ಕೂಡಲೇ ನಮ್ಮ ಶೇರ್ಪಾ ತಂಡದವರು ಚೀನಾ ಮಿಲಿಟರೀ ಪಡೆಯನ್ನು ಸಂಪರ್ಕಿಸಿ ತಕ್ಷಣ ಆಮ್ಲಜನಕದ ಹೆಲಿಕಾಪ್ಟರ್ ಬರುವಂತೆ ಕರೆ ಮಾಡಿದರು.ಹೆಲಿಕಾಪ್ಟರ್ ಬರುವಷ್ಟರಲ್ಲಿ ಗುರುಮೂರ್ತಿ ಮೈ ತಣ್ಣಗಾಗಿಗೆದೆ.ಉಸಿರಾಟದ ಶಬ್ದ ಕೇಳಿಸುತ್ತಾ ಇಲ್ಲ ಎಂದು ಹೇಳಿದಾಗ ನಾವು ಇನ್ನು ಜೀವ ಸಹಿತ ನಮ್ಮೂರು ಮುಟ್ಟುವುದು ಸಂಶಯ ಎಂದನಿಸಿತು.ಮನಸ್ಸಿನಲ್ಲಿಯೇ ಗುರುಮೂರ್ತಿ ಆರೋಗ್ಯ ಬೇಗನೆ ಸುಧಾರಿಸಲಿ ಎಂದು ಪ್ರಾರ್ಥಿಸಿ  ಮುಂದೆ ನಡೆದೆವು.ಅಲ್ಲಿಂದ ಮುಂದೆ ನನ್ನ ಪ್ರತೀ ಹೆಜ್ಜೆಯೂ ಓಂ ನಮಶಿವಾಯ ದಿಂದ ಕೂಡಿತ್ತು.ಜೀವ ಸಹಿತ ನನ್ನ ಮನೆಯವರನ್ನು ಕಾಣಬೇಕು ಎನ್ನುವ ಆತುರ ಜಾಸ್ತಿಯಾಯಿತು.ಸತ್ತರೂ ಚಿಂತಿಲ್ಲ ..ಮನೆಯವರಿಗೆ ತಿಳಿಯಬೇಕು.ನಮ್ಮಿಂದ ಹಿಂದೆ ಇಡೀ ಜೀವನವನ್ನೇ ಮಾನಸ ಮತ್ತು ಕೈಲಾಸವನ್ನು ಭಾರತಕ್ಕೆ ಸೇರಿಸಲು ಪ್ರಾಣತ್ಯಾಗ ಮಾಡಿದ ಯೋಧರಿಗೆ ಹೋಲಿಸಿದರೆ ನಮ್ಮ ಪ್ರಾಣ ಏನೂ ದೊಡ್ಡದಲ್ಲ ಎಂದನಿಸಿತು. ಅಂಥಹ ಯೋಧರಿಗೆ ನಮ್ಮ ನಮನವನ್ನು ಸಲ್ಲಿಸಿ ಅಲ್ಲಿಂದ ಮುಂದಕ್ಕೆ ನಡೆದೆವು.

Wednesday, November 4, 2009

ಮಾನಸ ಸರೋವರ ಯಾತ್ರೆ-೧೮










ಬೆಳಿಗ್ಗೆ ೮ ಘಂಟೆಯ ಸಮಯ.ಸ್ನಾನ ಇಲ್ಲದೆ ೧೦ ದಿನಗಳಾಗಿದ್ದವು.ಕೇವಲ ಬ್ರೆಷ್ ಮಾಡಿ ಕೈಯಲ್ಲಿದ್ದ ಬಿಸ್ಕೆಟ್ ,ಒಣ ದ್ರಾಕ್ಷಿ ,ಗೋಡಂಬಿ,ಬಾದಾಮಿ,ಬ್ರೆಡ್ ಜ್ಯಾಮ್ ನಮ್ಮ ನಿತ್ಯದ ಆಹಾರಗಳಾಗಿದ್ದವು. ನಮ್ಮ ಪ್ರಯಾಣ ಮುಂದುವರೆಯಿತು. ಎಲ್ಲರೂ ನಿಧಾನವಾಗಿ ತಮ್ಮ ತಮ್ಮ ಬ್ಯಾಗನ್ನು ಕೊಡವಿಕೊಂಡು ಹೆಗಲಿಗೆ ಏರಿಸಿಕೊಂಡು ನಡೆಯಲು ಶುರುಮಾಡಿದರು. ಈಗ ನಮ್ಮ ಮುಂದಿದ್ದ ದಾರಿ ಮಾತ್ರ ನಮ್ಮ ಊಹೆಗೂ ಮೀರಿತ್ತು ಅಥವಾ ಊಹಿಸಲೇ ಸಾಧ್ಯವಿಲ್ಲದಂತಿತ್ತು. ನೇರವಾಗಿ ಹತ್ತಲಾಗದ ಬೆಟ್ಟವನ್ನು ಜಿಗ್-ಜಾಗ್ ಮಾದರಿಯಲ್ಲಿ ಹತ್ತಲು ಶುರುಮಾಡಿದೆವು. ಎರಡು ಹೆಜ್ಜೆ ಇಟ್ಟು ಹತ್ತಬಹುದಾದ ಮಾರ್ಗವನ್ನು ಸುಮಾರು ಹನ್ನೆರಡು ಹೆಜ್ಜೆ ಇಟ್ಟು ಹತ್ತುತ್ತಿದ್ದೆವು. ಬೂದಿಯಂತಹ ಮಣ್ಣಿನಿಂದ ಕೂಡಿದ ಈ ದಾರಿಯನ್ನು ನೇರವಾಗಿ ಹತ್ತುವುದು ಅಸಾಧ್ಯದ ಕಾರ್ಯವಾಗಿತ್ತು. ಕೇವಲ ನೂರು ಮೀಟರ್‌ನಷ್ಟು ಬೆಟ್ಟವನ್ನು ಹತ್ತಲು ಸುಮಾರು ಒಂದು ಗಂಟೆ ತೆಗೆದುಕೊಂಡೆವು. ಒಂದೊಂದು ಹೆಜ್ಜೆ ಇಡಬೇಕಾದರೂ ಯಾಕಾದರೂ ಈ ಪರ್ವತ ಹತ್ತಲು ಬಂದೆವೊ ಎಂದು ನಮ್ಮನ್ನು ನಾವೇ ಬೈದುಕೊಳ್ಳುತ್ತಿದ್ದೆವು. ಒಬ್ಬರ ಹಿಂದೆ ಒಬ್ಬರು ಬರುತ್ತಿದ್ದ ನಾವು, ಒಬ್ಬರನ್ನೊಬ್ಬರು ಕಾಣದಷ್ಟು ಅಂತರವನ್ನು ಬೆಳೆಸಿಕೊಂಡಿದ್ದೆವು. ನಮ್ಮಲ್ಲಿ ಗೈಡ್ ಗಳು ಕಡಿಮೆ ಇದ್ದರು, ಕೆಲ ಗೈಡ್‌ಗಳು ಸುಸ್ತಾದವರನ್ನು ಹಿಂದಕ್ಕೆ ಬಿಡಲು ಹೋಗಿದ್ದರು, ಹಾಗಾಗಿ ನಾನು ಒಬ್ಬ ಚೈನೀಸ್ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಬೇರೆ ಯಾರೊ ಗೈಡ್‌ನನ್ನು ಹಿಂಬಾಲಿಸುತ್ತಾ ಹೊರಟೆ. ಎಲ್ಲೆಲ್ಲಿ ಆ ಚೈನೀಸ್ ಹುಡುಗಿ ಸುಸ್ತಾಗಿ ಕೂರುತ್ತಿದ್ದಳೊ ನಾನು ಅಲ್ಲೆ ಕೂರುತ್ತಿದ್ದೆ. ನಾಲ್ಕೈದು ಕಡೆ ಅವಳು ವಾಂತಿ ಮಾಡುತ್ತಿದ್ದಾಗ ನಾನು ದೂರದಲ್ಲೆ ಕುಳಿತು ಅವಳು ಹೊರಟ ತಕ್ಷಣ ವೇಗವಾಗಿ ಹೋಗಿ ಅವರನ್ನು ಕೂಡಿಕೊಳ್ಳುತ್ತಿದ್ದೆ. ಆಮ್ಲಜನಕ ಬಹಳ ಕಡಿಮೆ ಇದ್ದಕಾರಣ ಉಸಿರಾಟದ ತೊಂದರೆ ಬಹಳವಾಗಿತ್ತು. ಏನೂ ಕೆಲಸ ಮಾಡದೆ ಸುಸ್ತಾಗುವ ಅಂತಹ ಜಾಗದಲ್ಲಿ ಪರ್ವತ ಹತ್ತುವಂತಹ ಕಠಿಣ ಕಾರ್ಯ ಬಹಳ ಆಯಾಸದಾಯಕ. ನನ್ನ ಹಿಂದೆ ನಮ್ಮ ಗುಂಪಿನ ಇನ್ನೊಬ್ಬ ಹುಡುಗ ಬಂದ. ನಾನು ಅವನನ್ನು ನೋಡಿ ಸ್ವಲ್ಪ ನಿಧಾನವಾಗಿ ಚಲಿಸತೊಡಗಿದೆ. ಸ್ವಲ್ಪೆ ದೂರದಲ್ಲಿ ಹತ್ತಿಯ ಹಾಸಿಗೆಯಂತೆ ಕಾಣಿಸತೊಡಗಿತು. ಅದು ಮಂಜುಗಡ್ಡೆಯಿರಬೇಕು ಎಂದು ಅನ್ನಿಸಿದರೂ ಅಂತಹ ಖುಷಿ ಅನ್ನಿಸಲಿಲ್ಲ. ಈ ಪರ್ವತ ಹತ್ತುವ ಮೊದಲು, ಕೆಳಗಿನಿಂದ ಮಂಜುಗಡ್ಡೆಯನ್ನು ನೋಡುತ್ತಿದ್ದ ನಾನು, ಮೊದಲ ಬಾರಿ ಮಂಜುಗಡ್ಡೆಯ ಮೇಲೆ ಹೋದಮೇಲೆ ಹತ್ತಿ ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಬೇರೆಯವರಿಗೆ ಹೊಡೆಯುತ್ತೇನೆ ಎಂದು ಊಹಿಸಿಕೊಂಡಿದ್ದೆ. ಆದರೆ ಈಗ ನನ್ನ ಕಾಲಿನ ಪಕ್ಕದಲ್ಲೆ ಮಂಜಿನ ಹಾಸಿಗೆ ಬಿದ್ದಿದ್ದೆ, ಅದನ್ನು ಮುಟ್ಟುವ ಆಸೆ ಕೂಡಾ ನನ್ನಲ್ಲಿ ಉಳಿದಿರಲಿಲ್ಲ. ಹಿಂದೆ ಬರುತ್ತಿದ್ದ ನನ್ನ ಸ್ನೇಹಿತನಿಗೆ ಹೇಳಿದೆ. ಅದಕ್ಕೆ ಅವನು ಅದನ್ನು ನೋಡುವ ಆಸಕ್ತಿ ನನ್ನಲ್ಲಿ ಉಳಿದಿಲ್ಲ, ಬೇಕಿದ್ದರೆ ನೀನೆ ಮುಟ್ಟಿ ನೋಡು ಎಂದು ಹೇಳಿ ನನ್ನ ಹತ್ತಿರ ಬಂದು ನಿಂತುಕೊಂಡ. ನಮಗೆ ಎಷ್ಟು ಸುಸ್ತಾಗಿತ್ತೆಂದರೆ, ಮಂಜನ್ನು ಮುಟ್ಟಲು ಎರಡು ಹೆಜ್ಜೆ ಮುಂದೆ ಹೋಗಬೇಕಿತ್ತು, ಹೋದರೆ ಮತ್ತೆ ಎರಡು ಹೆಜ್ಜೆ ಹಿಂದೆ ಬರಬೇಕು ಎಲ್ಲಾ ಸೇರಿ ನಾಲ್ಕು ಹೆಜ್ಜೆ. ಮಂಜನ್ನು ಮುಟ್ಟುವ ಖುಷಿಗಿಂತ ನಾಲ್ಕು ಹೆಜ್ಜೆ ಉಳಿಸಿದ ಖುಷಿ ಜಾಸ್ತಿ ಎನಿಸಿ ಸುಮ್ಮನೆ ಮುಂದುವರೆದೆವು. ಅಂತು ನಮ್ಮ ಜಿಗ್-ಜಾಗ್ ಮಾದರಿಯ ಪ್ರಯಾಣ ಮುಗಿಯಿತು ಮತ್ತು ಮುಂದೆ ಕಲ್ಲು ಬಂಡೆಗಳು ಶುರುವಾದವು.
ನಮ್ಮ ಕೈಲಿದ್ದ ಕೋಲುಗಳನ್ನು ಮಡಿಚಿ ಬಂಡೆಗಳನ್ನು ಹಿಡಿದು ಹತ್ತಲು ಶುರುಮಾಡಿದೆವು. ಹಿಂತಿರುಗಿ ನೋಡಿದರೆ ನಮ್ಮ ಸಹ ಚಾರಣಿಗರು ಬಹಳ ದೂರದಲ್ಲಿ ಬರುತ್ತಿದ್ದರು. ಕೂತರೆ ಅಲ್ಲಿಯ ಚಳಿಗೆ ಮತ್ತು ಕಡಿಮೆ ಆಮ್ಲಜನಕಕ್ಕೆ ಇನ್ನೂ ಸುಸ್ತಾಗುತ್ತಿದ್ದೆವು, ಹಾಗಾಗಿ ಪ್ರಯಾಣವನ್ನು ಮುಂದುವರೆಸಿದೆವು. ಕೆಲವು ಬಂಡೆಗಳನ್ನು ಹತ್ತುವಾಗ ತೆವಳಿ ಹತ್ತುತ್ತಿದ್ದರೆ ಮತ್ತೆ ಕೆಲವು ಕಡೆ ಪೂರ್ತಿಯಾಗಿ ಮಲಗಿ ಹತ್ತಬೇಕಾಗಿತ್ತು. ಎಲ್ಲಿಗೆ ಹೋಗುತ್ತಿದ್ದೇವೆ, ನಮ್ಮ ದಾರಿ ಸರಿ ಇದೆಯಾ ಎನ್ನುವುದೆ ನಮಗೆ ತಿಳಿಯದಂತಾಗಿತ್ತು. ನನ್ನ ಸ್ನೇಹಿತ ಸ್ವಲ್ಪ ಹಿಂದೆ ಉಳಿದುಕೊಂಡ ಅವನಿಗಾಗಿ ಕಾದ ನನಗೆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ಕೂಡ ಕಾಣಿಸದಾದರು, ಆದರೂ ಅಲ್ಲಿ ದಾರಿಯಂತೆ ಕಾಣಿಸುತ್ತಿದ್ದ ಮಾರ್ಗದಲ್ಲಿ ನಡೆಯುತ್ತಾ ಹೋದೆ. ಎಲ್ಲೊ ಒಂದುಕಡೆ ಅವರುಗಳು ಹೋಗುತ್ತಿದ್ದುದು ಕಾಣಿಸಿತು. ವೇಗವಾಗಿ ಹೋದರೆ ಮತ್ತೆ ಅವರು ಕಾಣಿಸುತ್ತಿರಲಿಲ್ಲ. ಸ್ವಲ್ಪ ಸುಧಾರಿಸಿಕೊಳ್ಳಲು ಒಂದು ಬಂಡೆಗೆ ಬೆನ್ನು ತಾಗಿಸಿ ಕುಳಿತರೆ ಕೈ ಮತ್ತು ಕಾಲುಗಳು ಉರಿಯತೊಡಗಿದವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಪಾದಗಳು ಬೆಂಕಿಯಲ್ಲಿಟ್ಟಂತೆ ಉರಿಯುತ್ತಿವೆ. ಕೂತರೆ ಕೆಲಸ ಕೆಡುತ್ತದೆ ಎಂದು ಮತ್ತೆ ನಡೆಯಲು ಶುರುಮಾಡಿದೆ. ಒಂದು ಕವಲುದಾರಿಯಲ್ಲಿ ತಪ್ಪು ದಾರಿ ಹಿಡಿದು ಹೊರಟೆ. ಹೋಗುತ್ತಾ ಹೋಗುತ್ತ ಕಣಿವೆಯ ತುದಿ ಮುಟ್ಟಿದೆ. ಅಲ್ಲಿ ಮುಂದೆ ನನಗೆ ಮಾರ್ಗವೆ ಇಲ್ಲ ಇನ್ನು ಮುಂದೆ ಹೋದರೆ ಕಣಿವೆಗೆ ಬೀಳುತ್ತೇನೆ, ಮೇಲೆ ಹತ್ತಲು ದಾರಿ ಎನ್ನುವುದೆ ಇಲ್ಲ. ಹಿಂದೆ ಹೋಗಲು ಮತ್ತೆ ದಾರಿ ಸರಿಯಾಗಿ ನೆನಪಾಗುತ್ತಿಲ್ಲ. ಹೆದರಿ ಸುತ್ತಲೂ ನೋಡಿತ್ತಿದ್ದೆ, ಅಲ್ಲೆ ಒಂದು ಬಂಡೆಯ ಮೇಲೆ ಇಬ್ಬರು ನಿಂತಿದ್ದರು. ಒಬ್ಬ ಶೇರ್ಪಾ ತಲೆಯ ಮೇಲಿದ್ದ ಟಾರ್ಚ್ ಆ ಹಗಲಿನಲ್ಲಿ ಮಂಜಿನ ನಡುವೆ ಅಪಾಯದ ಸೂಚನೆಯಂತೆ ಮಿಣುಕಿಸಿದ. ಅಲ್ಲಿಂದ ಜೋರಾಗಿ ಕೂಗಿ ಕೇಳಿದೆ, ಅಲ್ಲಿಗೆ ಬರಲು ದಾರಿಯಾವುದು? ಅದಕ್ಕೆ ಉತ್ತರಿಸುತ್ತ ಅವನು ಹೇಳಿದ, ಹಾಗೆ ಬಂಡೆಯನ್ನು ಹಿಡಿದು ಮೇಲಕ್ಕೆ ಬಾ, ಯಾವುದೆ ಕಾರಣಕ್ಕು ಬಲಗಡೆಗೆ ಹೋಗಬೇಡ. ಅವನು ಹೇಳಿದ್ದು ಏಕೆ ಎಂದು ನಾನು ಮೇಲೆ ಹೋದ ಮೇಲೆ ಬೆಳಕಿನಲ್ಲಿ ನೋಡಿ ತಿಳಿಯಿತು. ಅದೊಂದು ದೊಡ್ಡ ಪ್ರಪಾತ, ಅದರ ತುಂಬ ಮಂಜುಗಡ್ಡೆ ತುಂಬಿದೆ. ಅದರ ಆಳ ಗೊತ್ತಿಲ್ಲ, ಹತ್ತಲು ಕಲ್ಲು ಬಂಡೆಯಿಲ್ಲ. ಸತ್ತು ಬದುಕಿದೆ ಎಂದು ಮನಸ್ಸಿನಲ್ಲೆ ಅಂದುಕೊಂಡೆ. ನನಗೆ ಸೂಚನೆ ಕೊಟ್ಟು ಕರೆಸಿಕೊಂಡ ಆ ಜಾಗದ ಹೆಸರು ದೇರಪುಕ್ . ಅದನ್ನು ಕೂಡ ಈ ಪರ್ವತದ ಒಂದು ಉನ್ನತ ತುದಿ ಎಂದು ಹೇಳುತ್ತಾರೆ. ಅಲ್ಲಿಂದ ಕೇವಲ ಮೂರು ನೂರು ಮೀಟರ್ ನಂತರ ಸಿಗುವುದೆ ಉಹುರು ತುದಿ, ಕೈಲಾಸದ ಅತೀ ಎತ್ತರವಾದ ಜಾಗ.
ನಾನು ದೇರಾಪುಕ್ ತಲುಪಿದ ತಕ್ಷಣ ಅಲ್ಲಿದ್ದ ಆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ತಮ್ಮ ಪ್ರಯಾಣ ಮುಂದುವರೆಸಿದರು. ನನ್ನ ಪೈಕಿಯವರು ಯಾರಾದರೂ ಬರಲಿ ಎಂದು ನಾನು ಅಲ್ಲೆ ಕುಳಿತೆ. ಕುಳಿತ ಎರಡೆ ನಿಮಿಷದಲ್ಲಿ ಮತ್ತೆ ಕೈ ಕಾಲುಗಳು ಉರಿಯಲಾರಂಬಿಸಿದವು. ಏನೂ ಮಾಡಲಾಗದ ಸ್ಥಿತಿ ನನ್ನದಾಗಿತ್ತು. ಅಲ್ಲಿ ಕಾಯುತ್ತಿದ್ದ ನನಗೆ ಇನ್ನೊಬ್ಬ ವ್ಯಕ್ತಿಯನ್ನು ನೋಡುವ ತನಕ ಬದುಕುತ್ತೇನೆ ಎನ್ನುವ ಭರವಸೆ ಇಲ್ಲದಾಗಿತ್ತು. ಅವನನ್ನು ನೋಡಿ ನನ್ನ ಕಷ್ಟ ಹೇಳಿಕೊಂಡರೆ ಅವನು ನನಗಿಂತ ಕಷ್ಟದ ಸ್ಥಿತಿಯಲ್ಲಿದ್ದ! ಹೀಗೆ ಕೂತರೆ ನಾವು ಮಂಜುಗಡ್ಡೆಯಂತೆ ಕಲ್ಲಾಗುತ್ತೇವೆ, ನಮ್ಮ ಪ್ರಯಾಣ ಮುಂದುವರೆಸೋಣ ಎಂದು ತೀರ್ಮಾನಿಸಿ ನಾನು ಮತ್ತೆ ನನ್ನ ಶೇರ್ಪಾ ಹೊರಟೆವು. ಇಲ್ಲಿಂದ ಮುಂದಿನ ಮಾರ್ಗ ಅಷ್ಟೊಂದು ಸುಲಭವಾಗಿರಲಿಲ್ಲ. ಒಂದು ಕಡೆ ಕಂದರ ಮತ್ತೊಂದು ಕಡೆ ಬಂಡೆ. ಕಾಲ ಕೆಳಗೆ ಮಂಜು ಗಡ್ಡೆ. ಸ್ವಲ್ಪ ಏಮಾರಿದರೂ ಜಾರಿ ಮಂಜಿನ ಕಂದರಕ್ಕೆ ಹೋಗುವ ಅವಕಾಶ ಜಾಸ್ತಿ. ಹಾಗೆ ನಡೆಯುತ್ತಾ ಸುಮಾರು ದೂರ ಹೋಗಿದ್ದೆವು, ಯಾರೋ ಕೂಗಿದ ಹಾಗಾಯಿತು. ತಿರುಗಿ ನೋಡಿದರೆ ನಮ್ಮ ಗುಂಪಿನವರಲ್ಲಿ ಒಬ್ಬರು . ನಮ್ಮನ್ನು ಇಲ್ಲೆ ಇರುವಂತೆ ತಿಳಿಸಿದ್ದಾರೆ, ಮುಂದೆ ಹೋಗಬಾರದಂತೆ ಎಂದು ವಾಪಸ್ ಕರೆದ. ನಾವು ದೇರಾಪುಕ್ ಗೆ ವಾಪಸ್ ಬಂದೆವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಕಾಲಿನ ಪಾದ ಉರಿಯುತ್ತಿತ್ತು. ನನ್ನ ಕಷ್ಟ ಹೇಳಿಕೊಂಡರೂ ಅದರ ಬಗ್ಗೆ ಕನಿಕರಿಸುವವರು ಯಾರೂ ಇರಲಿಲ್ಲ. ಏಕೆಂದರೆ ಉಳಿದವರ ಪಾಡು ನನಗಿಂತ ಬೇರೆ ಏನಿರಲಿಲ್ಲ. ನನ್ನ ಕೈ ಉರಿಯುತ್ತಿದ್ದ ಕಾರಣ ಎರಡು ಕೈಯನ್ನು ಉಜ್ಜಿಕೊಳ್ಳೊಣ ಎಂದು ಹಾಕಿದ್ದ ಗ್ಲೌಸ್ ತೆಗೆಯುತ್ತಿದ್ದೆ, ಅಲ್ಲೆ ದೂರದಲ್ಲಿ ನಿಂತಿದ್ದ ಇನ್ನೊಬ್ಬ ಕಿರುಚಿದ, ಯಾವುದೇ ಕಾರಣಕ್ಕು ಗ್ಲೌಸ್ ತೆಗೆಯಬೇಡ, ರಕ್ತ ಹೆಪ್ಪು ಗಟ್ಟಿ ಅಥವ ಚರ್ಮ ಕಿತ್ತು ಬಂದರೆ ಏನು ಮಾಡುತ್ತೀಯ ಎಂದು ಹೆದರಿಸಿದ. ಸತ್ಯ ಅಸತ್ಯದ ವಿಚಾರಕ್ಕೆ ಹೋಗದೆ ಸುಮ್ಮನೆ ನನ್ನ ಕಷ್ಟವನ್ನು ಸಹಿಸಿಕೊಂಡೆ. ಯಾಕಾದರೂ ಈ ಪರ್ವತ ಹತ್ತಲು ಬಂದೆನೊ ಎಂದು ಮನಸ್ಸಿನಲ್ಲಿಯೆ ಗೊಣಗುತ್ತಿದ್ದೆ. ನಮ್ಮ ಊರಿನವರು ಸುಮಾರು ೧೦ ಜನ ಒಂದು ಕಡೆ ಸೇರಿದೆವು.ಸುಮಾರು ಜನ ಬಂದು ನಮ್ಮನ್ನು ಸೇರಿದರು. ಕೆಲವರು ಚಳಿಯಿಂದಾಗುವ ತೊಂದರೆಗೆ ಅಳುತ್ತಿದ್ದರೆ ಕೆಲವರು ನಡೆಯಲಾಗದು ಎಂದು ಕುಳಿತಲ್ಲಿಂದ ಮೇಲೇಳಲೆ ಇಲ್ಲ. ಅಂತು ನಮ್ಮ ಮುಖ್ಯ ಗೈಡ್ ಪಾಂಡೆಯವರು ನಮ್ಮನ್ನೆಲ್ಲ ಮುಂದುವರೆಯುವಂತೆ ಸೂಚಿಸಿದರು . ಅಲ್ಲಿಂದ ಸುಮಾರು ಎರಡು ನೂರು ಮೀಟರ್ ದೂರದ ದಾರಿಯನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾಗುತ್ತದೆ ಎಂದು ತಿಳಿಸಿದರು. ಮಂಜುಗಡ್ಡೆಯ ಕಿರಿದಾದ ದಾರಿಯಲ್ಲಿ ನಮ್ಮ ಪ್ರಯಾಣ ಶುರುವಾಯಿತು. ನಡೆಯುತ್ತಾ ನಡೆಯುತ್ತ ಬೆಳಕು ಕಡಿಮೆಯಾಯಿತು.ಆಗ ನಮ್ಮ ಭಾರತೀಯ ಕಾಲಮಾನ ಪ್ರಕಾರ ನನ್ನ ಕೈ ಗಡಿಯಾರ ಸಂಜೆ ೪.೦೦ ಘಂಟೆ ತೋರಿಸುತ್ತಿತ್ತು ., ಸುತ್ತಲೂ ಏನಿದೆ ಎಂದು ಕಾಣಿಸುತ್ತಿತ್ತು. ಸ್ವರ್ಗ ಎಂದರೆ ಹೀಗೆ ಇರುತ್ತದೆ ಎಂದು ಆಗ ತಿಳಿಯಿತು. ಸುತ್ತಲೂ ಅಸ್ಪಷ್ಟವಾದ ಬೆಳಕು, ಬಣ್ಣ ಎನ್ನುವುದಿದ್ದರೆ ಅದು ಬಿಳಿ ಮಾತ್ರ. ಆಗಸಕ್ಕು, ಭೂಮಿಗೂ, ಮಂಜುಗೆಡ್ಡೆಗೂ ಏನೂ ವ್ಯತ್ಯಾಸವೆ ಇಲ್ಲ ಯಾವುದು ಆಗಸ, ಯಾವುದು ಭೂಮಿ ಎಂದು ತಿಳಿಯಲಾಗದ ಅನುಭವ. ಸುತ್ತಲೂ ಮಂಜುಗಡ್ಡೆ, ದೂರ ದೂರದವರೆಗೂ ತನ್ನದೇ ಆದ ಸೌಂದರ್ಯವನ್ನು ಮಂಜುಗಡ್ಡೆ ತೋರಿಸುತ್ತಿತ್ತು. ನಮ್ಮಲ್ಲಿದ್ದ ಎಲ್ಲಾ ಶ್ರಮ ಕಾಣೆಯಾಯಿತು. ನಾನು ಮತ್ತು ಇನ್ನೊಬ್ಬ ಸ್ನೇಹಿತ ನಡೆಯುತ್ತ ಮುಂದುವರಿದೆವು, ಹಿಂದೆ ಯಾರು ಬರುತ್ತಿದ್ದಾರೆ ಎಂದು ಯೋಚಿಸುವುದಕ್ಕೂ ಆಗದಷ್ಟು ಸಂತೋಷ ನಮ್ಮಲ್ಲಿತ್ತು ಬಹಳ ದೂರ ಬಂದ ಮೇಲೆ ನೋಡಿದರೆ ಅಲ್ಲಿದ್ದವರು ನಾವಿಬ್ಬರೆ. ಆಮೇಲೆ ತಿಳಿಯಿತು ಬಹಳಷ್ಟು ಜನ ಸುಸ್ತಾಗಿ ವಾಪಸ್ ಹೋದರು ಮತ್ತೆ ಕೆಲವರು ನಡೆಯಲಾಗದೆ ಅಲ್ಲೆ ಬಿದ್ದು, ಅವರನ್ನು ಉಳಿದವರು ಎತ್ತಿಕೊಂಡು ಹೋದರು ಎಂದು. ನಾವು ಇಬ್ಬರು ಮಾತ್ರ ನಿಧಾನವಾಗಿ ನಡೆಯುತ್ತಾ ಅಲ್ಲಲ್ಲಿ ಮಂಜಿನ ಗೆಡ್ಡೆಯನ್ನು ಕಡಿದು ತಿನ್ನುತ್ತಾ ಹೋಗುತ್ತಿದ್ದಾಗ ದೂರದಲ್ಲಿ ಬಣ್ಣ ಬಣ್ಣದ ಬಟ್ಟೆ ಕಟ್ಟಿದ್ದ ಕೆಲವು ಕಟ್ಟಿಗೆಗಳು ಕಾಣಿಸಿದವು. ಅದೆ ನಾವು ತಲುಪಬೇಕಾದ ಈ ದಿವಸದ ತುದಿ ಎಂದು ತಿಳಿಯಿತು. ಬಹಳ ಸುಸ್ತಾಗಿದ್ದ ನಮಗೆ ಓಡಿ ಹೋಗುವಷ್ಟು ಶಕ್ತಿ ಇರಲಿಲ್ಲ. ನಿಧಾನವಾಗಿಯೆ ಹೋಗಿ ಅದನ್ನು ಮುಟ್ಟಿದೆವು, ಅಪ್ಪಿದೆವು ... ನಾವು ಸ್ವರ್ಗದಲ್ಲೆ ಇದ್ದೆವು. ದೂರ ದೂರದವರೆಗೂ ಕಾಣಿಸುತ್ತಿದ್ದ ಮಂಜಿನ ಬೆಟ್ಟಗಳು, ಅಲ್ಲಲ್ಲಿ ಮಂಜಿನ ಕಲಾಕೃತಿಗಳು, ಮಂಜಿನಿಂದ ನಿರ್ಮಿತವಾಗಿರುವ ಬಹಳಷ್ಟು ವಿಸ್ಮಯಗಳನ್ನು ನೋಡಿ ಆನಂದಿಸಿದೆವು...
ಜೀವನದ ಅತೀ ತ್ರಾಸದಾಯಕ ಪ್ರಯಾಣ ಮತ್ತು ಅತೀ ಆನಂದದಾಯಕ ಕ್ಷಣ ಎನ್ನಬಹುದಾದ ಒಂದು ವಿಚಿತ್ರ ಅನುಭವ ಈ ಕೈಲಾಸ ಪರ್ವತ ಪ್ರದಕ್ಷಿಣೆ . ಪರ್ವತಾರೋಹಣ ಎನ್ನುವ ಹುಚ್ಚು ಇರುವ ಯಾರಿಗಾದರೂ ಇದು ಸ್ವರ್ಗ. ಜೀವನದಲ್ಲಿ ಒಮ್ಮೆ ಬದುಕಿದ್ದಾಗಲೆ ಸಿಗುವ ಸ್ವರ್ಗ ಸುಖ.
.

Friday, October 30, 2009

ಮಾನಸ ಸರೋವರ ಯಾತ್ರೆ -೧೭








ಎಲ್ಲವೂ ಮಂಜುಗಡ್ಡೆಯಾಗಿಬಿಡುವ ಇಲ್ಲಿನ ಅನುಭವವೇ ವಿಭಿನ್ನ. ಎರಡೇ ದಿನಗಳಲ್ಲಿ ನಮ್ಮ 'ಸ್ಲೀಪಿಂಗ್ ಬ್ಯಾಗ್'ಗಳೆಲ್ಲಾ ಮಂಜುಗಡ್ಡೆಯಿಂದ ಆವೃತವಾಗಿಬಿಟ್ಟವು... ನಮ್ಮ ಚಾರಣ ಮುಂದುವರಿದಂತೆಲ್ಲಾ ಈ ಮನಮೋಹಕ ಪ್ರದೇಶದ ಭೀಕರತೆ ಅರಿವಾಗುತ್ತಾ ಹೋಯಿತು. ಹಿಮಗಾಳಿಯಲ್ಲಿ ಸೆಟೆದುಕೊಳ್ಳುವ ಕಾಲುಗಳನ್ನು ಮುಂದೆ ಇಡಲೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಎರಡು ಹಿಮಗಡ್ಡೆಗಳು ಸಂಧಿಸುವ ತಾಣ ದಾಟಬೇಕಾದ ಸಂದರ್ಭದಲ್ಲಂತೂ ಹೃದಯ ಬಾಯಿಗೆ ಬಂದಂತಾಗುತ್ತದೆ! ಆ ತಾಣದಲ್ಲಿ ಕೆಳಗೆ ದೂರದಲ್ಲೆಲ್ಲೋ ನೀರು ಹರಿದ ಸದ್ದು ಕೇಳುತ್ತದೆ. ಆದರೆ ಏನೂ ಕಾಣುವುದಿಲ್ಲ. ಅಂತಹ ತಾಣವನ್ನು ಬಹು ಎಚ್ಚರಿಕೆಯಿಂದ ದಾಟುವ ಬಗ್ಗೆ ನಮಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. ಅಲ್ಲಿ ಆಕಸ್ಮಿಕವಾಗಿ ಹಿಮದ ಮೇಲ್ಮೈ ಕುಸಿದು ನಾವೇನಾದರೂ ಕೆಳಗೆ ಜಾರಿದರೆ ಮೈನಸ್ 200 ಡಿಗ್ರಿಯ ಉಷ್ಣಾಂಶದಲ್ಲಿ ಹಿಮಗಡ್ಡೆಯಾಗಬೇಕಾಗುತ್ತದೆ! ಅಂದ ಹಾಗೆ, ಟಿಎಸ್‌ಐ ಛಾಯಾಗ್ರಾಹಕ ಭಾಸ್ಕರ್ ಅವರಿಗಂತೂ ಅಲ್ಲಿನ ಸುಂದರ ತಾಣಗಳ ಮಹತ್ವ ತುಂಬಾ ಚೆನ್ನಾಗಿಯೇ ಅರಿವಾಯಿತು. ಈ ಕ್ಯಾಂಪ್‌ಗೆ ಸಾಗುವ ಚಾರಣಿಗರ ಲಗೇಜ್ 20 ಕೆ.ಜಿ.ಯದು. ಅದರ ಜೊತೆಗೆ ಭಾಸ್ಕರ್ ಅವರ ಕ್ಯಾಮರಾ ಲಗೇಜ್ 12 ಕೆ.ಜಿ. ಇವನ್ನೆಲ್ಲಾ ಹೊತ್ತು ಫೋಟೊ ಕ್ಲಿಕ್ಕಿಸುವುದು ಹೇಗೆ? ಆಗ ನೆರವಾದವರೇ ತ್ಸೆಂಗೆ ಎಂಬ ಒಬ್ಬ ಶೇರ್ಪಾ . ಭಾಸ್ಕರ್ ಲಗೇಜ್ ಅವರು ಹೊತ್ತಿದ್ದರಿಂದಲೇ ಇಷ್ಟೆಲ್ಲಾ ಚಿತ್ರಗಳನ್ನು ತೆಗೆಯಲು ಸಾಧ್ಯವಾಗಿದ್ದು.... ಚಾರಣದಲ್ಲಿ ನಮ್ಮ ಜೊತೆ ಹೆಜ್ಜೆ ಹಾಕಿದ ಭಾಸ್ಕರ್ , "ಆಗಸದಿಂದ ನೋಡಿದರೆ ಈ ಪ್ರದೇಶವೆಲ್ಲಾ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿಗೆ ವಿಮಾನದಲ್ಲಿ ಬರುವುದಂತೂ ಸುಂದರ ಅನುಭವ. ಆದರೆ ಈ ನೆಲದ ಮೇಲೆ ನಡೆಯುವುದು ಮಾತ್ರ ಮಹಾಸಂಕಟ" ಎಂದು ಬಿಟ್ಟರು. ಅವರ ಗಾಯಗೊಂಡ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ಬೀಸುವ ಚಳಿಗಾಳಿ ಅವರ ನೋವನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ಇಂತಹ ಪ್ರದೇಶದಲ್ಲಿ ಅದರಲ್ಲೂ, ಮೊಣಕಾಲಿಗೆ ಗಾಯವಾದ ಸಂದರ್ಭದಲ್ಲಿ 'ಪ್ರಕೃತಿ ಕರೆ'ಗಳನ್ನು ಹೇಗೆ ತೀರಿಸಿಕೊಳ್ಳುತ್ತಾರೆ ಎಂಬ ಕುತೂಹಲ ನನಗೆ ಕಾಡಿತು.... ಈ ಹಿಮ ಪ್ರದೇಶದಲ್ಲಿ 'ಮಲ ವಿಸರ್ಜನೆ' ಮಾಡುವುದು ಅತ್ಯಂತ ತ್ರಾಸದಾಯಕ. ಎರಡು ಸೀಮೆಎಣ್ಣೆ ಡಬ್ಬದ ಮೇಲೆ ಮರದ ಹಲಗೆಯೊಂದನ್ನು ಇಟ್ಟು ಅದರ ಮೇಲೆ ಕೂರಬೇಕು. ಇಲ್ಲಿನ ಶೇರ್ಪಾ ಒಬ್ಬನ ಅನುಭವವನ್ನು ಕೇಳಿ: ಅವರು ಹೀಗೆ ಕುಳಿತಿದ್ದಾಗ ಸಮತೋಲನ ಕಾಯ್ದುಕೊಳ್ಳಲು ಪಕ್ಕದಲ್ಲಿ ಒಂದು ಕೋಲನ್ನು ನೆಲಕ್ಕೆ ಊರಿ ಹಿಡಿದುಕೊಂಡರು, ಅಷ್ಟೇ. ಕೂಡಲೇ ಮಂಜುಗಡ್ಡೆಯಂತಾಗಿದ್ದ ಆ ಕಂಬಕ್ಕೆ ಅವರ ಅಂಗೈ ಅಂಟಿಕೊಂಡುಬಿಟ್ಟಿತು. ಬಿಡಿಸಿಕೊಳ್ಳಲು ಜೋರಾಗಿ ಕೈ ಎಳೆದರೆ ಅಂಗೈ ಚರ್ಮವೇ ಹರಿದುಹೋಗುತ್ತದೆ. ಆ ಪ್ರದೇಶದ ಅನುಭವ ಚೆನ್ನಾಗಿದ್ದ ಆ ಶೇರ್ಪಾ ಹಾಗೆ ಜೋರಾಗಿ ಕೈ ಎಳೆಯದೆ, ಬಿಸಿ ನೀರು ತರಿಸಿ ಅದನ್ನು ಕಂಬಕ್ಕೆ ಅಂಗೈ ಮೇಲೆ ಹಾಯಿಸಿ ನಿಧಾನವಾಗಿ ಕೈಬಿಡಿಸಿಕೊಂಡರು. ಹಿಮದ ನೆಲೆಯಲ್ಲಿ ಇಂತಹ ಅನುಭವಗಳು ಅದೆಷ್ಟೋ.!!!!!!!!
ಇಲ್ಲಿನ ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯ ನನ್ನ ಮನದಾಳದಿಂದ ಮರೆಯಾಗದು" ನನ್ನ ಮಟ್ಟಿಗೆ ಇಲ್ಲಿ ತೆಗೆದ ಚಿತ್ರಗಳೇ ಎಲ್ಲಾ ಕಥೆಯನ್ನೂ ಹೇಳುತ್ತವೆ. ನಾನು ಕೇವಲ ಭಾವನೆಗಳನ್ನು ನಿರೂಪಿಸುತ್ತೇನೆ ಅಷ್ಟೇ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಕೈಲಾಸ ಪರ್ವತದಷ್ಟು ಉತ್ತಮ ಪ್ರದೇಶ ಬೇರಿಲ್ಲ ಎಂಬುದು ನನ್ನ ಭಾವನೆ. ಆ ಕಾರಣದಿಂದ ಹಾಗೂ ಪ್ರಾಕೃತಿಕ ರೌದ್ರತೆಯಿಂದ ಇದೊಂದು ಸ್ವರ್ಗ ಎನ್ನಬಹುದು. ಆದರೆ ಹಿಮಗಾಳಿಯನ್ನೆದುರಿಸುತ್ತಾ ಟೆಂಟ್‌ಗಳಲ್ಲಿ ವಾಸಿಸುವ ನಮ್ಮ ಪಾಲಿಗಂತೂ ಈ ಸಮಯ ಸ್ವರ್ಗದ ಸಾಕ್ಷಾತ್ಕಾರ...ಎಂಬುದು ನನ್ನ ಅನಿಸಿಕೆ.
ಆಗಸದಲ್ಲಿ ಮಂಜಿನ ನಡುವೆಯೂ ಮೋಡ ಹಾಕಿಕೊಳ್ಳುತ್ತಿತ್ತು ಎನ್ನಿಸುತ್ತದೆ. ಇದ್ದ ಅಲ್ಪ-ಸ್ವಲ್ಪ ಬೆಳಕೂ ಕಡಿಮೆಯಾಗುತ್ತಾ ಬರುತ್ತಿತ್ತು. ಸಮಯವೇನೋ ಸಂಜೆ ನಾಲ್ಕು ಘಂಟೆ ಸಮೀಪಿಸುತ್ತಿತ್ತಷ್ಟೇ. ಆದರೆ ಅಲ್ಲಿ ಸಂಜೆ ಆರು ಘಂಟೆಯ ನಂತರ ಚಾರಣ ಮಾಡುವುದು ಅಸಾಧ್ಯ ಎಂದು ನಮಗೆ ಚೆನ್ನಾಗಿ ಗೊತ್ತಿತ್ತು.. "ನಾಲ್ಕು ಘಂಟೆಯ ಚಾರಣ, ಸಣ್ಣದು" ಎಂದುಕೊಂಡು ಪಾಂಡೆ ಅವರು ಕರೆದುಕೊಂಡು ಹೊರಟ ಚಾರಣದಲ್ಲಿ ಎಂತೆಂಥ ಅನುಭವಗಳು! ಆರೇಳು ಘಂಟೆಯ ಅನುಭವ ಅಷ್ಟೇ. ಆದರೂ, ಆಗ ಸಂಜೆ ಘಂಟೆ ಎಷ್ಟೋ ಹೊತ್ತಾದಂತೆ ಇತ್ತು. . ಆದರೆ ಈ ಉತ್ಕೃಷ್ಟ ಅನುಭವವನ್ನು ನಾವು ಜೀವನದಲ್ಲಿ ಖಂಡಿತಾ ಮರೆಯುವುದಿಲ್ಲ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ. ಕೇವಲ ಐದು ಕಿಲೋಮೀಟರುಗಳ ಚಾರಣದ ನಂತರ ಒಂದು ಟೆಂಟನ್ನು ಸಿದ್ಧಪಡಿಸಿಕೊಂಡು ಅದರಲ್ಲಿ ವಿಶ್ರಾಂತಿ ಪಡೆಯುವ ಪ್ರಯತ್ನ ಮಾಡಿದೆವು.

Sunday, October 25, 2009

ಮಾನಸ ಸರೋವರ ಯಾತ್ರೆ-೧೬


ಕೇವಲ ೨ ಘಂಟೆಯ ನಿದ್ರೆಯಿಂದ ಎಚ್ಚರಗೊಂಡಾಗ ಸಮಯ ಬೆಳಿಗ್ಗೆ ೭ ಘಂಟೆ.ಬ್ರೆಷ್ ಮಾಡಿ ನೀರು ಕುಡಿದೆ,ಎರಡು ಬ್ರೆಡ್ ತಿಂದೆ.ಶಾರೀರಿಕವಾಗಿ ನಾನು ಬಳಲಿ ಹೋಗಿದ್ದೆ.ಕಾಲು ಮುಂದಿಡಲು ಶರೀರದ ಎಲ್ಲಾ ಅಂಗಗಳ ಶಕ್ತಿಯನ್ನು ಒಟ್ಟು ಗೂಡಿಸಬೇಕಾದಷ್ಟು ಕಷ್ಟದ ಪರಿಸ್ಥಿತಿ.ಈ ಅನುಭವ ನಾವು ಎಂದೂ ಕೇಳಿರಲಿಲ್ಲ ಮತ್ತು ಸ್ವತ: ಅನುಭವಿಸಿರಲಿಲ್ಲ.. ಸಂದರ್ಭೋಚಿತವಾಗಿ ಕೇಳಿ, ಓದಿದ ಅನುಭವವೂ ಇಲ್ಲ.ಈ ತರಹದ ಸಾಹಸ ಮಾಡುತ್ತಿರುವದು ಇದೇ ಮೊದಲ ಅನುಭವ.ನಮ್ಮೆಲ್ಲರಿಗೂ ಈ ಜಾಗವನ್ನು ಬಿಟ್ಟು ಹೇಗೋ ಜೀವವನ್ನು ಉಳಿಸಿಕೊಂಡು ಮುಂದೆ ಯಾವಾಗಲೋ ಒಂದು ದಿನ ಇನ್ನಷ್ಟು ವ್ಯವಸ್ಥೆಗಳೊಂದಿಗೆ ಸಿದ್ಧ ಮಾಡಿಕೊಂಡು ಬಂದರಾಯಿತು ಎಂಬಷ್ಟು ಮನಸ್ಥಿತಿ ನಮಗಾಯಿತು.ಈ ರೀತಿ ನಮ್ಮ ಪ್ರತಿಯೊಬ್ಬ ಯಾತ್ರಿಕನೂ ನಾನು ನೆನೆಸಿದಂತೆ ಹೇಳಿದಾಗ ನನಗೂ ಯಾತ್ರೆ (ಪರಿಕ್ರಮ)ಮಾಡುವದಕ್ಕೆ ಮನಸ್ಸು ಹಿಂಜರಿಯಿತು.ಈ ಪರಿಸ್ಥಿತಿ ಮರೆಯಾಗದ ಅನುಭವ.ಎಲ್ಲಾ ನನ್ನ ಮನಸ್ಸಿನ ಒಳಗೆ ಸಂಭಾಷಣೆ ಮಾತ್ರ.!
ಬಾಯಿಬಿಟ್ಟು ಮಾತಾಡಲೂ ಶಕ್ತಿಯಿಲ್ಲ.ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಎದ್ದು ಹತ್ತು ಹೆಜ್ಜೆ ಹಾಕೋಣವೆಂದರೆ ಆಗಲಿಲ್ಲ.ಕಾಲುಗಳಲ್ಲಿ ಶಕ್ತಿ ಉಡುಗಿಹೋಗಿ ಹೆಜ್ಜೆ ಇಟ್ಟರೆ ಕುಡಿದವನಂತೆ ತೂರಾಡುವ ಪರಿಸ್ಥಿತಿ ನನ್ನದು. ಆಗ ಪಾಂಡೆಯವರು ಬಂದು ಒಂದು ಮೀಟಿಂಗ್ ಮಾಡೋಣ ಎಂದು ಹೇಳಿದರು.ನಾವೆಲ್ಲಾ ನಮ್ಮ ಡೇರೆಯಲ್ಲಿ ಕಾಲು ನೀಡಿ ಕುಳಿತೆವು.ನಾವೆಲ್ಲಾ ಇನ್ನು ಮುಂದೆ ಬಹಳ ಎಚ್ಚರಿಕೆಯ ಚಾರಣ ಮಾಡಬೇಕಾಗಿದೆ.ಅದಕ್ಕಾಗಿ ಎಚ್ಚರಿಕೆಯ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳೋಣ ಎಂದು ಹೇಳಿದರು.ಇದನ್ನು ನೀವು ತಪ್ಪದೆ ಅನುಸರಿಸಬೇಕು ಎಂದರು.ಅದನ್ನು ಒಂದೊಂದಾಗಿ ವಿವರಿಸಿದರು. 


೧. ಈ ಬೆಟ್ಟಗಳಲ್ಲಿ ನಡೆಯುತ್ತಿರುವಾಗ ಯಾವಗಲೂ ನಾವು ಬೆಟ್ಟದ ಅಂಚಿನಲ್ಲಿಯೇ ನಡೆಯುತ್ತಿರಬೇಕು.ಹಿಂದಿನಿಂದ ಕುದುರೆ ,ಯಾಕ್ ಏನಾದರೂ ಬಂದರೆ ನಾವು ಬೆಟ್ಟದ ಅಂಚಿಗೇ ಇದ್ದು ಅವುಗಳಿಗೆ ದಾರಿ ಬಿಡಬೇಕು. 
೨. ಈ ಚಾರಣದಲ್ಲಿ ಖಾಲೀ ಹೊಟ್ಟೆಯಲ್ಲಿ ನಡೆಯಬಾರದು.ಅದರಿಂದ ಹಸಿವು ಹೆಚ್ಚಿ ನಿಶ್ಶಕ್ತಿಯಿಂದ ತಲೆಸುತ್ತಿ ಬೀಳುವ ಅಪಾಯವಿದೆ. 
೩. ತಿನ್ನುವ ಪದಾರ್ಥಗಳು ,ಕುಡಿಯುವ ನೀರು,ಔಷಧಗಳು,ರೈನ್ ಕೋಟು,ಕ್ಯಾಮರಾ,ಮೊದಲಾದವುಗಳು ಬೇಗ ಕೈಗೆಟಕುವಂತೆ ಚೀಲದಲ್ಲಿಟ್ಟು ಅದನ್ನು ಹೆಗಲಿಗೆ ಹಾಕಿಕೊಂಡಿರಬೇಕು. 
೪. ಒಬ್ಬೊಬ್ಬರೇ ಹೋಗಕೂಡದು.ಗುಂಪು ಗುಂಪುಗಳಾಗಿ ನಡೆಯುತ್ತಿರಬೇಕು.ದಣಿವು ತೋರದಿರಲು ಮತ್ತು ಭಕ್ತಿಭಾವ ಸ್ಥಿರಗೊಳಿಸುವದಕ್ಕೂ ಬಗೆ ಬಗೆಯ ದೈವ ನಿನಾದಗಳನ್ನು ಮಾಡುತ್ತಿರುವದು ಸೂಕ್ತ. 
೫. ಚಾರಣದಲ್ಲಿ ಆಯಾಸ, ಆಲಸ್ಯಗಳು ಉಂಟಾಗುತ್ತವೆ,ತುಂಬಾ ಎತ್ತರವಾದ ಪ್ರದೇಶಗಳಲ್ಲಿ ಆಮ್ಲಜನಕ ಕಡಿಮೆಯಾಗಿರುತ್ತದೆಯಾಗಿರುವುದರಿಂದ ತಲೆಸುತ್ತುವಿಕೆ,ಉಸಿರಾಟದ ತೊಂದರೆ.ಸಹನೆ, ಸಮಾಧಾನಗಳು ಕಡಿಮೆಯಾಗುವಿಕೆ ಇತ್ಯಾದಿ ಕಂಡುಬರುವುದು ಸಹಜ.ಅದಕ್ಕಾಗಿ ಜಾಗ್ರತೆ ವಹಿಸಬೇಕು.ಮುಂದಿರುವ ದಾರಿ,ಎತ್ತರವಾದ ಪರ್ವತಗಳು ಇವುಗಳನ್ನು ನೋಡಿ,'ಅಯ್ಯೋ ! ಇಷ್ಟು ದೂರವೇ?ಅಷ್ಟೊಂದು ಎತ್ತರ ಹತ್ತಬೇಕೆ?" ಎಂದುಕೊಂಡರೆ,ಪುಕ್ಕಲುತನ ಏರ್ಪಟ್ಟು ಹೆಜ್ಜೆ ಮುಂದಿಡಲು ಸಾಧ್ಯವಾಗುವುದಿಲ್ಲ.ಹಾಗಾಗಿ ಹೀಗೆ ಹೆಚ್ಚಾಗಿ ಊಹಿಸಿಕೊಳ್ಳಬಾರದು.
೬. ಯಾವಾಗಲಾದರೂ ದಾರಿ ತಿಳಿಯದೆ ಹೋದರೆ, ಮನುಷ್ಯರು ಇರುವುದಿಲ್ಲವಾದ್ದರಿಂದ ಕುದುರೆ ಲದ್ದಿಗಳನ್ನು ನೋಡಿಕೊಳ್ಳುತ್ತಾ ಸಾಗಬೇಕು.
೭. ಸಾಧ್ಯವಾದಷ್ಟೂ ಕಡಿಮೆ ಆಹಾರ ತಿನ್ನಬೇಕು.೨ ಅಥವಾ ೩ ಘಂಟೆಗೊಂದು ಸಲ ತಿನ್ನುವುದು ಉತ್ತಮ.ಹೆಚ್ಚು ನೀರು ಕುಡಿಯುವುದು ಒಳ್ಳೆಯದು.ಕನಿಷ್ಠ ಪಕ್ಷ ದಿನಕ್ಕೆ ೪ ಲೀಟರ್ ನೀರು ಕುಡಿಯುವುದು ಒಳ್ಳೆಯದು.
ಹೀಗೆ ಎಚ್ಚರಿಕೆ ವಹಿಸುತ್ತಾ ಮುಂದೆ ಸಾಗಬೇಕು...


ವಾತಾವರಣ ಬೇಗ ಬೇಗ ಬದಲಾಗುತ್ತಿರುತ್ತದೆ.ಆಗಲೇ ಬಿಸಿಲು ಬರುತ್ತದೆ. ಕೂಡಲೇ ಮಳೆ ಬರುತ್ತದೆ.ಇವುಗಳ ವ್ಯತ್ಯಾಸ ನಮಗೆ ತಿಳಿಯುವುದಿಲ್ಲ. ಈ ಪ್ರಕೃತಿಯನ್ನು ನೋಡುವಾಗ ಒಂದು ಶ್ಲೋಕ ನೆನಪಾಯಿತು.


ಅಶ್ವಪ್ಲುತಂ ವಾಸವಗರ್ಜಿತಂ ಚ
ಸ್ತ್ರೀಣಾ೦ ಚ ಚಿತ್ತಂ ಪುರೀಶಂಚ ಭಾಗ್ಯಂ !  
ಅವರ್ಷನಂಚಾಪ್ಯತಿ ವರ್ಷನಂ ಚ  
ದೇವೋ ನ ಜಾನಾತಿ ಕುತೋ ಮನುಷ್ಯ:?  
ಕಾಳಿದಾಸನ ರಚನೆಯಾಗಿರುವ ಈ ಶ್ಲೋಕದ ತಾತ್ಪರ್ಯವೇನೆಂದರೆ ,ಕುದುರೆ ನೆಗೆತ,ಮೇಘದ ಘರ್ಜನೆ,ಸ್ತ್ರೀಯ ಮನಸ್ಸು, ಗಂಡಸರ ಭಾಗ್ಯ, ಮಳೆ ಬರುವುದು / ಬರದಿರುವುದು, ಇವುಗಳನ್ನು ತಿಳಿದುಕೊಳ್ಳುವುದು ದೇವತೆಯರಿಗೇ ಅಸಾಧ್ಯವೆಂದರೆ, ಇನ್ನು ಮನುಷ್ಯರ  ಪಾಡೇನು? ಹೀಗೇ ಚಿಂತಿಸುತ್ತಾ ಕುಳಿತಿರುವಾಗ ಸೂರ್ಯ ನೆತ್ತಿಯಮೇಲೆ ಕಾಣಿಸುತ್ತಿದ್ದ. ರೈನ್ ಕೋಟು ಆಮ್ಲಜನಕದ ಸಿಲಿಂಡರನ್ನು ನಮ್ಮ ಹೆಗಲಿಗೆ ಏರಿಸಿಕೊಂಡು ನಮ್ಮ ನಮ್ಮ ಶೇರ್ಪಾ,ಯಾಕ್,ಕುದುರೆಗಳೊಂದಿಗೆ ನಮ್ಮನ್ನು ಪ್ರತ್ಯೇಕ ಪ್ರತ್ಯೇಕವಾದ ಗುಂಪುಗಳನ್ನು ಪಾಂಡೆಯವರು ಮಾಡಿ ನಮಗೆ ಮತ್ತೊಮ್ಮೆ ಎಚ್ಚರಿಕೆಯನ್ನು ಕೊಟ್ಟರು.
ನಿಧಾನಕ್ಕೆ ಚಾರಣವನ್ನು ಪ್ರಾರಂಭಿಸಿದೆವು...

Thursday, October 15, 2009

ಮಾನಸ ಸರೋವರ ಯಾತ್ರೆ-೧೫



ಪುರಾಣ ಮತ್ತು ಪುರಾಣೋತ್ತರ ಕಾಲದಲ್ಲಿ ಕೈಲಾಸ ಪರ್ವತದ ಮಹಿಮೆಯನ್ನು ಬಣ್ಣಿಸಲಾಗಿದ್ದು. ಹಿಂದೂಗಳ ಪಾಲಿಗೆ ಕೈಲಾಸ ಪರ್ವತ ಲಯ ಕರ್ತೃ ಶಿವನ ವಾಸಸ್ಥಾನ. ಕೈಲಾಸ ಪರ್ವತದಲ್ಲಿ ಬೆಳಕು ಮತ್ತು ಶಬ್ಧಗಳ ಸಂಗಮದಿಂದ ಓಂಕಾರ ನಾದ ಹೊರ ಹೊಮ್ಮುತ್ತದೆ. ಶಿವನು ನಾದೋಪಾಸಕನಾದ ಕಾರಣ ಓಂಕಾರದ ವ್ಯುತ್ಪತ್ತಿ ಇಲ್ಲಿಯೆ ಆಗಿದೆ ಎಂದು ಧರ್ಮ ಗ್ರಂಥಗಳು ಪ್ರತಿಪಾದಿಸುತ್ತವೆ. ಹಿಂದೂಗಳ ಪಾಲಿಗೆ " ಓಂ" ಪವಿತ್ರ ಶಬ್ಧ. ಮಾನಸ ಸರೋವರ ಭಾರತೀಯರ ಆದ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಕೈಲಾಸ ಪರ್ವತದಲ್ಲಿ ಕಲ್ಪವೃಕ್ಷ ಇದೆ ಎಂಬ ನಂಬಿಕೆ ಇದೆ. ಸ್ವರ್ಗಲೋಕದ ಶ್ರೀಮಂತ ದೇವತೆ ಕುಬೇರನ ನಗರ ಇದೆ ಎಂಬ ನಂಬಿಕೆ ಇದ್ದು, ಪರ್ವತದ ನಾಲ್ಕು ದಿಕ್ಕುಗಳು ಹವಳ ಮುತ್ತು ಚಿನ್ನಗಳನ್ನು ಪ್ರತಿನಿಧಿಸುತ್ತವೆ ಎಂಬ ಪ್ರತೀತಿ ಇದೆ. ಬೌದ್ಧ ಧರ್ಮಿಯರಿಗೂ ಕೈಲಾಸ ಪರ್ವತ ಪವಿತ್ರ ಯಾತ್ರಾಸ್ಥಳವಾಗಿದ್ದು, ಇಲ್ಲಿ ಉಗ್ರ ಸ್ವರೂಪಿ ಬುದ್ಧ ವಾಸವಾಗಿದ್ದಾನೆ ಎಂಬ ನಂಬಿಕೆ ಅವರಲ್ಲಿ ಇದೆ. ಜೈನ ಧರ್ಮದ ಮೊದಲ ತಿರ್ಥಂಕರ ಕೈಲಾಸ ಪರ್ವತದಲ್ಲಿ ನಿರ್ವಾಣ ಹೊಂದಿದನು ಎಂಬುದು ಅವರ ವಾದ. ಒಟ್ಟಿನಲ್ಲಿ ಏನೆ ಇರಲಿ ಇದು ಎಲ್ಲಾ ಧರ್ಮಿಯರಿಗೂ ಪವಿತ್ರ ಸ್ಥಳವಾಗಿದೆ.
ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ, ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ, ಬೌದ್ಧ, ಜೈನ ಮತ್ತು ಬಾನ್ ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ. ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ ಪರ್ವತವನ್ನು ಏರಲು ಯಾರಿಗೂ ಅನುಮತಿ ದೊರೆಯುವುದಿಲ್ಲ. ಹೀಗಾಗಿ ಜಗತ್ತಿನ ಪ್ರಮುಖ ಶಿಖರಗಳ ಪೈಕಿ ಕೈಲಾಸಪರ್ವತವೊಂದು ಮಾತ್ರ ಆರೋಹಿಸಲ್ಪಡದೇ ಉಳಿದಿದೆ. ಶಿಖರವು ಸಮುದ್ರಮಟ್ಟದಿಂದ ೨೧,೭೭೮ ಅಡಿಗಳಷ್ಟು ಎತ್ತರದಲ್ಲಿದೆಯೆಂದು ಅಂದಾಜು ಮಾಡಲಾಗಿದೆ.. ಕೈಲಾಸ ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ಸ್ಫಟಿಕ ಎಂಬ ಅರ್ಥವು ಇದೆ. ಟಿಬೆಟನ್ ಭಾಷೆಯಲ್ಲಿ ಈ ಪರ್ವತದ ಹೆಸರು ಗಾಂಗ್ಸ್ ರಿನ್-ಪೋ-ಚೆ. ಇದರ ಅರ್ಥವು "ಹಿಮದ ರತ್ನ" ವೆಂದಾಗುವುದು. ಇನ್ನೊದು ಸ್ಥಳೀಯ ಹೆಸರು ಟಿಸೆ. ಜೈನ ಪರಂಪರೆಯಲ್ಲಿ ಕೈಲಾಸಪರ್ವತವನ್ನು ಅಷ್ಟಪಾದ ಎಂದು ಉಲ್ಲೇಖಿಸಲಾಗಿದೆ.
ಹಿಂದೂಧರ್ಮದ ಪ್ರಕಾರ ಪರಶಿವನು ಕೈಲಾಸಪರ್ವತದ ಶಿಖರದ ಮೇಲೆ ಹಿಮವಂತನ ಪುತ್ರಿ ಪಾರ್ವತಿಯೊಂದಿಗೆ ನೆಲೆಸಿರುವನು. ಶಿವನು ಇಲ್ಲಿ ಸದಾ ಧ್ಯಾನಮಗ್ನನಾಗಿರುತ್ತನೆ. ಅಲ್ಲದೇ ಧನಾಧಿಪತಿ ಕುಬೇರನ ನೆಲೆಯು ಸಹ ಕೈಲಾಸಪರ್ವತದ ಸನಿಹದಲ್ಲಿಯೇ ಎಂದು ಹೇಳಲಾಗುತ್ತದೆ. ಹಿಂದೂಧರ್ಮದ ಅನೇಕ ಶಾಖೆಗಳು ಕೈಲಾಸಪರ್ವತವನ್ನು ಸ್ವರ್ಗ, ಆತ್ಮದ ಅಂತಿಮ ನೆಲೆ ಮತ್ತು ವಿಶ್ವದ ಪರಮೋನ್ನತ ಅಧ್ಯಾತ್ಮಿಕ ಕೇಂದ್ರವೆಂದು ಪರಿಗಣಿಸುತ್ತವೆ. ವಿಷ್ಣುಪುರಾಣದ ಪ್ರಕಾರ ಕೈಲಾಸಪರ್ವತವು ಜಗತ್ತಿನ ಕೇಂದ್ರ ಮತ್ತು ಅದರ ನಾಲ್ಕು ಮುಖಗಳು ಸ್ಪಟಿಕ, ಪದ್ಮರಾಗ, ಸ್ವರ್ಣ ಮತ್ತು ನೀಲವೈಢೂರ್ಯದಿಂದ ಮಾಡಲ್ಪಟ್ಟಿವೆ. ಕೈಲಾಸಪರ್ವತವು ಜಗತ್ತಿನ ಆಧಾರಸ್ಥಂಭ. ಅದರ ಎತ್ತರ ೮೪೦೦೦ ಯೋಜನಗಳಷ್ಟು. ಅದು ವಿಶ್ವಮಂಡಲದ ಕೇಂದ್ರವಾಗಿದ್ದು ಪದ್ಮಾಕೃತಿಯಲ್ಲಿ ಹಬ್ಬಿರುವ ಆರು ಪರ್ವತಶ್ರೇಣಿಗಳ ಕೇಂದ್ರಸ್ಥಾನದಲ್ಲಿದೆ. ಕೈಲಾಸಪರ್ವತದಿಂದ ಹೊರಹರಿಯುವ ನಾಲ್ಕು ನದಿಗಳು ನಾಲ್ಕೂ ದಿಕ್ಕಿನಲ್ಲಿ ಪ್ರವಹಿಸಿ ಜಗತ್ತನ್ನು ನಾಲ್ಕು ಪ್ರದೇಶಗಳನ್ನಾಗಿ ವಿಭಜಿಸಿವೆ. ಜಗತ್ತಿನ ಅತ್ಯಂತ ದೊಡ್ಡ ಮತ್ತು ಅತಿ ಪ್ರಮುಖ ಶಿಲೆಯಲ್ಲಿ ಕೊರೆದು ಮಾಡಿರುವ ದೇವಾಲಯವೆಂದರೆ ಎಲ್ಲೋರಾದ ಕೈಲಾಸ ದೇಗುಲ. ಇದಕ್ಕೆ ಕೈಲಾಸಪರ್ವತವೇ ಸ್ಫೂರ್ತಿ. ಈ ದೇವಸ್ಥಾನದ ಅನೇಕ ಶಿಲ್ಪಗಳು ಶಿವಪಾರ್ವತಿಯರಿಗೆ ಸಂಬಂಧಿಸಿದ ಘಟನಾವಳಿಗಳನ್ನು ತೋರಿಸುತ್ತವೆ. ಇವುಗಳ ಪೈಕಿ ರಾವಣನು ಕೈಲಾಸಪರ್ವತವನ್ನು ಬುಡಸಮೇತ ಕೀಳಲು ನಡೆಸಿದ ಪ್ರಯತ್ನವೂ ಒಂದು.
ಬೌದ್ಧ ಧರ್ಮದಲ್ಲಿ ಕೈಲಾಸಪರ್ವತವನ್ನು ಚಿತ್ರಿಸಿರುವ ಟಿಬೆಟ್ ನ ತಾಂತ್ರಿಕ ಬೌದ್ಧರು ಕೈಲಾಸಪರ್ವತವು ಪರಮೋನ್ನತ ಆತ್ಮಾನಂದವನ್ನು ಪ್ರತಿನಿಧಿಸುವ ಡೆಮ್ ಚೋಕ್ ಬುದ್ಧನ ( ಡೆಮ್ ಚೋಗ್ ಮತ್ತು ಚಕ್ರಸಂವರ ಎಂಬ ಇತರ ಹೆಸರುಗಳು ಈತನಿಗೆ) ನೆಲೆಯೆಂದು ನಂಬುತ್ತಾರೆ. ತಾಂತ್ರಿಕ ಬೌದ್ಧಧರ್ಮದ ಮುಂದಾಳಾಗಿದ್ದ ಮಿಲರೇಪನು ಬಾನ್ ಧರ್ಮದ ನಾಯಕನಾಗಿದ್ದ ನಾರೋ-ಬೊಂಚುಂಗ್ ನಿಗೆ ಸವಾಲೆಸೆಯಲು ಟಿಬೆಟ್ ಗೆ ಆಗಮಿಸಿದನು. ಈರ್ವರ ಮಧ್ಯೆ ಮಾಯಮಂತ್ರಗಳ ತೀವ್ರ ಕದನ ನಡೆದು ಯಾರೂ ಜಯ ಸಾಧಿಸಲಾಗಲಿಲ್ಲ. ಕೊನೆಗೆ ಇಬ್ಬರಲ್ಲಿ ಯಾರು ಕೈಲಾಸಪರ್ವತದ ಶಿಖರವನ್ನು ಹೆಚ್ಚು ವೇಗವಾಗಿ ತಲುಪುವರೋ ಅವರೇ ವಿಜಯಿಯಾಗುವರೆಂದು ತೀರ್ಮಾನಿಸಲಾಯಿತು. ನಾರೋ-ಬೊಂಚುಂಗ್ ಮಾಯಾಪಾತ್ರೆಯೊಂದರ ಮೇಲೆ ಕುಳಿತು ಶಿಖರದತ್ತ ಧಾವಿಸತೊಡಗಿದರೆ ಮಿಲರೇಪನು ಮೌನವಾಗಿ ಕುಳಿತು ಧ್ಯಾನಮಗ್ನನಾದನು. ಆದರೆ ನಾರೋ-ಬೊಂಚುಂಗ್ ಇನ್ನೇನು ಶಿಖರವನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಮಿಲರೇಪನು ಎದ್ದು ಸೂರ್ಯಕಿರಣಗಳ ಮೇಲೇರಿ ಶಿಖರವನ್ನು ಮೊದಲು ತಲುಪಿ ಸ್ಫರ್ದೆಯಲ್ಲಿ ವಿಜಯಿಯಾದನು. ಈತನಿಂದ ಟಿಬೆಟ್ ಗೆ ತಾಂತ್ರಿಕ ಬೌದ್ಧ ಧರ್ಮವು ಆಗಮಿಸಿತೆಂದು ನಂಬಿಕೆ. ( ಸೂಚನೆ : ಟಿಬೆಟ್ ಗೆ ತಾಂತ್ರಿಕ ಬೌದ್ಧಧರ್ಮವನ್ನು ತಂದವನು ಮಲಿರೇಪನೋ ಅಥವಾ ಪದ್ಮಸಂಭವನೋ ಎಂಬ ಬಗ್ಗೆ ಸಾಕಷ್ಟು ಗೊಂದಲವಿರುವುದು.)
ಕೈಲಾಸಪರ್ವತವನ್ನು ಅಷ್ಟಪಾದವೆಂದು ಕರೆಯುವ ಜೈನರು ತಮ್ಮ ಧರ್ಮದ ಮೂಲಪುರುಷ ಋಷಭದೇವನು ಈ ಸ್ಥಳದಲ್ಲಿ ನಿರ್ವಾಣ ಹೊಂದಿದನೆಂದು ನಂಬುವರು...
ಸಹಸ್ರಾರು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಆಸ್ತಿಕರು ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳುವರು. ಹಲವು ಧರ್ಮದ ಶ್ರದ್ಧಾಳುಗಳು ಕೈಲಾಸಪರ್ವತಕ್ಕೆ ಕಾಲ್ನಡಿಗೆಯಲ್ಲಿ ಸುತ್ತುಬರುವುದು ಒಂದು ಪಾವನ ಕಾಯಕವೆಂದು ಭಾವಿಸುತ್ತಾರೆ. ಹಿಂದೂಗಳು ಮತ್ತು ಬೌದ್ಧರು ಪರ್ವತಕ್ಕೆ ಪ್ರದಕ್ಷಿಣವಾಗಿ ಸುತ್ತು ಬಂದರೆ ಜೈನರು ಮತ್ತು ಬಾನ್ ಧರ್ಮೀಯರು ಕೈಲಾಸಪರ್ವತಕ್ಕೆ ಅಪ್ರದಕ್ಷಿಣವಾಗಿ ಸುತ್ತು ಬರುತ್ತಾರೆ. ಪರ್ವತವನ್ನು ಒಂದು ಬಾರಿ ಸುತ್ತಿಬರಬೇಕಾದರೆ 162 ಕಿ.ಮೀ. ಗಳಷ್ಟು ಉದ್ದದ ದಾರಿಯನ್ನು ಕ್ರಮಿಸಬೇಕಾಗುವುದು.
ಕೆಲವು ಯಾತ್ರಿಕರು ಕೈಲಾಸಪರ್ವತವನ್ನು ಒಂದೇ ದಿನದಲ್ಲಿ ಸುತ್ತಿಬರಬೇಕೆಂದು ನಂಬುವರು. ಆದರೆ ಒರಟು ಮೇಲ್ಮೈ, ಉನ್ನತಪ್ರದೇಶದಲ್ಲುಂಟಾಗುವ ಅಸ್ವಾಸ್ಥ್ಯ ಮತ್ತು ಪ್ರತಿಕೂಲ ವಾತಾವರಣಗಳಿಂದಾಗಿ ಇದು ಕಠಿಣಸಾಧ್ಯ ಮತ್ತು ಕೆಲವೇ ಕೆಲವರು ಮಾತ್ರ ಇದನ್ನು ಸಾಧಿಸುವರು. ಕೆಲವು ಭಕ್ತರು ಇಡೀ ಪರ್ವತಕ್ಕೆ ಅಂಗಪ್ರದಕ್ಷಿಣೆಯನ್ನು ಸಹ ಮಾಡುವರು. ಈ ಕ್ರಮದಲ್ಲಿ ಪ್ರತಿ ಹೆಜ್ಜೆಗೊಮ್ಮೆ ಭಕ್ತರು ಪರ್ವತಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಆ ಸ್ಥಾನವನ್ನು ಬೆರಳಿನಿಂದ ಗುರುತಿಸಿ ನಂತರ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿ ಮುಂದೆ ಕೈಗಳು ಮತ್ತು ಮಂಡಿಯ ಮೇಲೆ ಮೊದಲು ಗುರುತಿಸಿದ್ದ ಸ್ಥಾನಕ್ಕೆ ತೆವಳುವರು. ಈ ಪ್ರಕಾರದ ಅಂಗಪ್ರದಕ್ಷಿಣೆಯ ಮೂಲಕ ಕೈಲಾಸಪರ್ವತವನ್ನು ಒಂದು ಬಾರಿ ಸುತ್ತಿಬರಲು ಕನಿಷ್ಟ ನಾಲ್ಕು ದಿನಗಳು ತಗಲುತ್ತವೆಯಲ್ಲದೆ ಅತಿ ತೀವ್ರವಾದ ದೈಹಿಕ ದಂಡನೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕೈಲಾಸಪರ್ವತವು ಟಿಬೆಟ್ ನ ಹಿಮಾಲಯದಲ್ಲಿ ಅತಿ ದುರ್ಗಮ ಪ್ರಾಂತ್ಯದಲ್ಲಿ ಮತ್ತು ಪ್ರತಿಕೂಲ ಪರಿಸರದಲ್ಲಿದೆ. ಈಚೆಗೆ ಯಾತ್ರಿಕರಿಗೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ಕೈಲಾಸಪರ್ವತವನ್ನು ಪೂಜಿಸುವ ಎಲ್ಲ ಧರ್ಮಗಳ ಪ್ರಕಾರ ಪರ್ವತಕ್ಕೆ ಕಾಲು ಸೋಕಿಸುವುದು ಅತಿ ಘೋರ ಪಾಪದ ಕಾರ್ಯ. ಇದನ್ನು ಮೀರಿ ಪರ್ವತವನ್ನು ಏರಲು ಹೊರಟವರು ಪ್ರಾಣಕಳೆದುಕೊಂಡರೆಂದು ಜನರ ಹೇಳಿಕೆ. ೧೯೫೦ರಲ್ಲಿ ಚೀನೀಯರಿಂದ ಟಿಬೆಟ್ ನ ಆಕ್ರಮಣ ಮತ್ತು ಭಾರತ-ಚೀನಾಗಳ ನಡುವೆ ಸಂಭವಿಸಿದ ಘರ್ಷಣೆಗಳಿಂದಾಗಿ ೧೯೫೯ ರಿಂದ ೧೯೮೦ ರ ವರೆಗೆ ಕೈಲಾಸಪರ್ವತದ ಯಾತ್ರೆ ನಿಂತುಹೋಗಿತ್ತು. ೧೯೮೦ರ ನಂತರ ಪ್ರತಿವರ್ಷ ಭಾರತದಿಂದ ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳಲು ನಿಗದಿತ ಸಂಖ್ಯೆಯ ಯಾತ್ರಿಕರಿಗೆ ಪರವಾನಿಗಿ ನೀಡಲಾಗುತ್ತಿದೆ. ಈ ಯಾತ್ರೆಯು ಭಾರತ ಮತ್ತು ಚೀನಾ ಸರಕಾರಗಳ ಮಾರ್ಗದರ್ಶನ ಮತ್ತು ನಿರ್ದೇಶನದಡಿ ನಡೆಯುವುದು. ಭಾರತೀಯರು ಸಾಮಾನ್ಯವಾಗಿ ಉತ್ತರಾಖಂಡದ ಕುಮಾವ್ ಹಿಮಾಲಯವನ್ನು ಕಾಲ್ನಡಿಗೆಯಲ್ಲಿ ದಾಟಿ ಕೈಲಾಸಪರ್ವತವನ್ನು ತಲುಪುವರು. ಈ ಪಾದಯಾತ್ರೆಯು ಅತಿ ದೀರ್ಘದಾರಿಯದು ಮತ್ತು ಅಪಾಯಕಾರಿ ಕೂಡ. ಬೇರೆ ಮಾರ್ಗಗಳೆಂದರೆ ಕಾಠ್ಮಂಡುವಿನಿಂದ ಅಥವಾ ಲ್ಹಾಸಾದಿಂದ ರಸ್ತೆಯ ಮೇಲಿನ ಪಯಣ. ಕಾಠ್ಮಂಡು ಮತ್ತು ಲ್ಹಾಸಾಗಳನ್ನು ಭಾರತದಿಂದ ವಿಮಾನಯಾನದ ಮೂಲಕ ತಲುಪಬಹುದು. ಪವಿತ್ರ ಕೈಲಾಸಪರ್ವತದ ಪ್ರದಕ್ಷಿಣೆಯನ್ನು ಕಾಲ್ನಡಿಗೆಯಿಂದ ಅಥವಾ ಕುದುರೆಯ ಮೇಲೆ ಕುಳಿತು ಮಾಡಬಹುದು. ಕಾಲ್ನಡಿಗೆಯು ೧೫೦೦೦ ಅಡಿ ಎತ್ತರದಲ್ಲಿ ಆರಂಭವಾಗಿ ಮುಂದೆ ೧೯೦೦೦ ಅಡಿ ಎತ್ತರದಲ್ಲಿ ಡೋಲ್ಮಾ ಪಾಸ್ ಅನ್ನು ದಾಟಬೇಕಾಗುವುದು. ಇದು ಒಟ್ಟು ನಾಲ್ಕು ದಿನಗಳ ಹಾದಿ......

Wednesday, October 14, 2009

ಮಾನಸ ಸರೋವರ ಯಾತ್ರೆ -೧೪



ಮನಸ್ಸಲ್ಲಿ ಆ ಸೂರ್ಯ ದೇವನಿಗೆ ನೂರಾರು ಪ್ರಶ್ನೆಗಳ ಸುರಿಮಳೆ ಹಾಕುತ್ತಿದ್ದೆ….. ನುಡಿಯಲು ಒಂದು ಮಾತು ಸಹಾ ಹೊರಬರಲಿಲ್ಲ..ಬರಿ ಮೌನ ಎಲ್ಲೆಲ್ಲು ಮೌನ ಅಷ್ಟೇ ….!! ಇಂದು ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಾನಸದ ತಟಕ್ಕೆ ಬಂದೆ.. ನಮ್ಮೊಡನೆ ಆಚಾರ್ಯರಾದ ಕೇಶವ ದೀಕ್ಷಿತರೂ ಇದ್ದರು. ಅಂದು ಹುಣ್ಣಿಮೆ, ನಾವೆಲ್ಲರೂ ಮಾನಸದ ತಟದಲ್ಲಿ ಆಚಾರ್ಯಯರ ನಿರ್ದೇಶಾನುಸಾರ ತರ್ಪಣಗಳನ್ನು ನೀಡಿದೆವು.ಪ್ರತಿಯೊಬ್ಬರೂ ಮಾನಸದ ಜಲವನ್ನು ಮತ್ತು ಅಲ್ಲಿಂದಲೇ ಒಂದು ಕಲ್ಲನ್ನು ನಾವು ನಾವು ತಂದಿದ್ದ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ತುಂಬಿಕೊಂಡು ಅಲ್ಲೇ ಹತ್ತಿರವಿರುವ ಒಂದು ಮಂಟಪಕ್ಕೆ ಬಂದು ಶ್ರೀಯುತ ಅಳಗಪ್ಪನ್ ಚೆಟ್ಟಿಯಾರ್ ಅವರ ಸಂಕಲ್ಪದಂತೆ ಶತ ರುದ್ರಾಭಿಷೇಕ ಮತ್ತು ರುದ್ರ ಹವನವನ್ನು ನಾವು ಮಾಡಿದೆವು. ಕೈಲಾಸನಾಥನ ಸಂಕಲ್ಪವನ್ನು ಮಾನಸ ಸರೋವರದಿಂದ ತಂದಿದ್ದ ಕಲ್ಲಿಗೆ ಪೂಜೆಯನ್ನು ಮಾಡಿದೆವು.ತದನಂತರ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯಂತೆ ಪೂಜೆಯ ನಂತರ ಮಾನಸಕ್ಕೆ ಅಭಿಷೇಕ ಜಲವನ್ನು ಸಮರ್ಪಿಸಿದೆವು.ಅಲ್ಲಿ ಚೆಟ್ಟಿಯಾರ್ ಅವರು ನಮ್ಮನ್ನು ಬಿಟ್ಟು ಏಕಾಂತವಾಗಿ ಪ್ರಾರ್ಥನೆಯನ್ನು ಮಾಡಿದರು. ನನಗೆ ಬಹಳ ಆಶ್ಚರ್ಯ! ಇಂತಹ ಶ್ರೀಮಂತ ವ್ಯಕ್ತಿ ಆಧ್ಯಾತ್ಮಿಕ ವಿಷಯದಲ್ಲೋ ಇದ್ದಾರೆ ಎಂದು ನಂಬಿಕೆ ಬಂದದ್ದೇ ಆ ಕ್ಷಣ,! ಕೇವಲ ಒಂದು ದಿವಸದ ತನ್ನ ವೈಯುಕ್ತಿಕ ಕಾರ್ಯಕ್ರಮಕ್ಕೋಸ್ಕರ ನಮ್ಮನ್ನು ಇಂತಹ ದಿವ್ಯ ತಾಣಕ್ಕೆ ಕರೆದುಕೊಂಡು ಬಂದು ನಮಗೂ ಆ ದಿವ್ಯ ದರ್ಶನ ಮಾಡಿಸಿದ ಆ ಪುಣ್ಯಾತ್ಮ ಅಳಗಪ್ಪನ್!! ಇವತ್ತು ರಾತ್ರಿಯಿಂದ ಕೈಲಾಸ ಪರ್ವತದ ಪ್ರದಕ್ಷಿಣೆ ಪ್ರಾರಂಭ , ಅದಕ್ಕಾಗಿ ಬೇಕಾದ ಆಹಾರ ಸಾಮಾಗ್ರಿಗಳನ್ನು ನಮ್ಮ ಬ್ಯಾಗಿನಲ್ಲಿ ತುಂಬಿಸಿ ತಯಾರಾದೆವು.ಅಲ್ಲಿಯ ಕಾಲಮಾನ ಪ್ರಕಾರ ಸಂಜೆ ೫.೩೦ ರ.. ನಾವೆಲ್ಲಾ ಆ ಹುಣ್ಣಿಮೆ ಚಂದ್ರನನ್ನು ನೋಡಲು ಮಾನಸದ ತಟಕ್ಕೆ ಬಂದೆವು.
ಪ್ರತಿದಿನ ಸೂರ್ಯ ಬಾನಿನಿಂದ ಜಾರಿ ಮುಳುಗು ಹಾಕುವ ಸಮಯ, ಬೆಳಕನ್ನು ಕತ್ತಲು ನುಂಗಿ ಹಾಕುವ ಸಮಯ. ಬಾನಿನಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ನನ್ನ ಕಲ್ಪನೆಗಳು, ಪ್ರಶ್ನೆಗಳು ಚುಕ್ಕಿಗಳಾಗಿ ಮನಸ್ಸನ್ನು ಆವರಿಸಿ ಬಿಟ್ಟಿರುತ್ತದೆ. ಚಂದಿರನ ಆ ಮಂದವಾದ ಬೆಳ್ಳಿ ಬೆಳಕು ನನ್ನನ್ನು ನಿಧಾನವಾಗಿ ಅವನತ್ತ ಸೆಳೆಯುತ್ತದೆ. ನನಗೆ ನಾನೇ ತಿಳಿಯದಂತೆ ಚಂದಿರನ ಜೊತೆ ನನ್ನ ಮನಸು ಹರಟ ತೊಡಗುತ್ತದೆ.ಅಲ್ಲಿ ನನ್ನ ಮುಂದಿರುವ ದಿನಗಳು ಮೆಲ್ಲಮೆಲ್ಲನೆ ರೂಪ ಪಡೆಯುತ್ತದೆ. ಬೆಳದಿಂಗಳ ಲೋಕ ಕವನಗಳಾಗಿ ಮಾನಸದ ತುಂಬೆಲ್ಲಾ ಓಡಾಡುತ್ತದೆ. ಬರೆಯಲು ಕುಳಿತರೆ ಬಲೆ ಇಲ್ಲದೆ ಮೀನನ್ನು ಹಿಡಿಯಲು ಹೊರಟಂತೆ, ನುಣುಚಿ ಹೋಗಿ ನನ್ನನ್ನು ಆಟವಾಡಿಸುತ್ತದೆ. ಸುಸ್ತಾಗಿ ಛೆ! ಅಂದುಕೊಂಡು ಕೃತಕ ಬೆಳಕಿನಡಿಗೆ ಪುಸ್ತಕಗಳಿಗಾಗಿ, ಹರಟೆ ಹೊಡೆಯಲು ಹೊಟ್ಟೆ ತುಂಬಿಸಲು ಹೋಗಿ ಬಿಡುತ್ತೇನೆ.ಸಂಜೆ ಬಾನಿನಲ್ಲಿ ನಕ್ಷತ್ರಗಳು ಸದ್ದಿಲ್ಲದೆ ನನ್ನ ಮನಸಿನಲ್ಲಿ ಕುಳಿತಿರುತ್ತದೆ. ಮತ್ತೆ ಚಂದಿರನ ಜೊತೆ ಮಾತಿಗೆ ಕುಳಿತರೆ ಹೊತ್ತು ಹೋದ್ದದ್ದು ತಿಳಿಯುವುದಿಲ್ಲ. ಬೆಳಕು ಹರಿಯುವ ವರೆಗೂ ನಿದ್ದೆ ಹತ್ತುವುದೇ ಇಲ್ಲ. ಮತ್ತೆ ಸಂಜೆಗಾಗಿ ಮನಸು ಕಾಯುತ್ತಿರುತ್ತದೆ ... ಆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಅದೇ ಖುಷಿ ನೀಡುವ ಚಳಿ ಗಾಳಿ.. ನನ್ನೊಳಗೆ ಇದೀಗ ಕಲ್ಪನೆಗಳಿಲ್ಲ,ಯಾವ ಭಾವಗಳೂ ಇಲ್ಲ. ಸೂರ್ಯನ ಅಸ್ತವಾಯಿತು.ಎಂದೋ ಬದುಕಿನಲ್ಲಿ ನಾನು ನಿರೀಕ್ಷೆ ಮಾಡಿದ ಸುಂದರ ಸಮಯ...ಈ ದಿವಸ ನನ್ನ ಕಣ್ಣ ಮುಂದೆ.. ಅದೂ ಎಂದಿನಂತೆಯೇ ಬೆಳಗು. ಗಡಗುಡುವ ಗುಡುಗಿಲ್ಲ. ಭಾವನಾತ್ಮಕ ಬೆಡಗಿನ ಬೆಳಗು. ಚುಮು ಚುಮು ಚಳಿ. ಮನ ತುಂಬಿದ ಸಿಂಗಾರ. ಮೈ ತುಂಬ ಬಂಗಾರ. ಬನದ ಹೂಗಳೆಲ್ಲ ಮುಡಿಯನೇರಿ ನಗುತ್ತಲಿವೆ. ನಾ ನಕ್ಕಿದ್ದನ್ನೇ ಸೆರೆಹಿಡಿಯುತ್ತಿದ್ದ ಕ್ಯಾಮೆರಾ. ಕೈ ತೋರಿ, ಕೈ ಹಿಡಿದು ಮನವನಾವರಿಸಿಕೊಂಡು ನನ್ನೊಳಗೇ ಬೆಳೆದ ಸುಧಿಯೆಂಬ ಚಂದಮಾಮನು ಅಂದು ನನ್ನ ಕೈಹಿಡಿದು ಬಾಳನ್ನು ಬೆಳದಿಂಗಳಾಗಿಸಿದ... ಅಂಥ ಬೆಳದಿಂಗಳದು. ಇನ್ನೇನು ಬೇಕಿತ್ತು ಈ ಬದುಕಿಗೆ? ಉತ್ತರದಲ್ಲಿ ಕೈಲಾಸನಾಥನು ಆ ಬೆಳದಿಂಗಳ ಬೆಳಕಿನಲ್ಲಿ ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾನೆ.. ಪಾಂಡೆಯವರು ನಮ್ಮನ್ನು ಕರೆದರು. ಹೋಗಬೇಕೆಂದುಕೊಂಡೆ. ಹೇಗೆ ಹೋಗಲಿ! ಚಂದಮಾಮನು ತನ್ನ ಮೊಗ್ಗನ್ನು ನನ್ನ ಮಡಿಲೊಳಗಿಟ್ಟು ಬೆಳದಿಂಗಳ ಅರಳಿಸುವ ಭಾರವ ನನ್ನೆದೆಯೊಳಗೆ ಬಿತ್ತಿ ನಡೆದಿದ್ದ...ಹೀಗೆ ಭಾವನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಸಮಯ ರಾತ್ರಿ ಘಂಟೆ ೮.೦೦ ಆದದ್ದೇ ತಿಳಿಯಲಿಲ್ಲ.
ನಾವು ರಾತ್ರಿ ೮.೩೦ಕ್ಕೆ ಊಟದ ಶಾಸ್ತ್ರ ಮುಗಿಸಿದೆವು. ಎಲ್ಲರೂ ಬ್ಯಾಗನ್ನು ನಮ್ಮ ನಮ್ಮ ಶೆರ್ಪಗಳ ಜೊತೆ ನೀಡಿ ನಮಗಾಗಿ ಕಾದಿರಿಸಿದ್ದ ಯಾಕ್ ಮತ್ತು ಕುದುರೆಗಳ ಜೊತೆ ಬೆಳದಿಂಗಳಲ್ಲಿ ಹೆಜ್ಜೆ ಹಾಕಿದೆವು.ಸುಮಾರು ೩೫ ಮಂದಿ ಈ ಚಾರಣದಲ್ಲಿ ಇದ್ದೆವು. ಮಾತು, ನೋಟ, ಸ್ಪರ್ಶಗಳು ಕಂಗಾಲಾಗಿ ನಿಂತ ನಂತರದ ಮೌನಶ್ರೇಣಿಯ ಚಾರಣ ಪಯಣ ನಮ್ಮದಿತ್ತು. ಅಲ್ಲಿ ಗದ್ದಲವಿರಲಿಲ್ಲ, . ಪ್ರಕೃತಿಯ ಚೆಲುವು ಬಗೆಬಗೆಯ ರೂಪಿನಲ್ಲಿ ಮೈದಳೆದ ಆ ಹಾದಿಯಲ್ಲಿ ನಮ್ಮ ಚಾರಣ
ಅಶಕ್ತರಾದವರು ದಾರ್ಚಿನ್ ನ ನಮ್ಮ ವಸತಿಗೃಹದಲ್ಲಿಯೇ ತಂಗಿದರು.ಸುಮಾರು ರಾತ್ರಿ ೧೦.ಘಂಟೆಯ ಸಮಯ ..
ಸಮತಟ್ಟಾದ ನೆಲವಾಗಿದ್ದರೆ ಏನೂ ತೊಂದರೆ ಇಲ್ಲ, ಆದರೆ ಚಾರಣ ಮಾಡುವುದು ಇದೆಯಲ್ಲಾ ಅದರಂತಹ ನರಕಯಾತನೆ ಇನ್ನೊಂದಿಲ್ಲ. ಮೊದಲ ಎರಡು ಕಿಲೋಮೀಟರ್ ಏನೂ ಅನ್ನಿಸಲಿಲ್ಲ, ಏಕೆಂದರೆ ಅದು ಪೂರ್ತಿಯಾಗಿ ಏರಿಕೆ ಇರಲಿಲ್ಲ. ಅಲ್ಲಲ್ಲಿ ಸಮತಟ್ಟಾದ ಭೂಮಿಯೂ ಇತ್ತು. ರಾತ್ರಿ ಹನ್ನೊಂದು ಗಂಟೆಗೆ ಹತ್ತಲು ಶುರುಮಾಡಿದ ಯಾತ್ರೆ ಮಾತ್ರ ಮರೆಯಲಾಗುವುದಿಲ್ಲ. ಒಂದು ಮೀಟರ್ ಮೇಲೆ ಹೋಗಲು ಸುಮಾರು ನಾಲ್ಕು ಮೀಟರ್‌ನಷ್ಟು ನೆಡೆಯಬೇಕಿತ್ತು. ಜಿಗ್-ಜಾಗ್ ಮಾದರಿಯಲ್ಲಿ ನಾವು ನೆಡೆಯುತ್ತಿದ್ದೆವು. ನೇರವಾಗಿ ನೇಡೆಯುವುದು ಅಸಾಧ್ಯವಾಗಿತ್ತು, ನಾವು ಹೆಜ್ಜೆ ಇಟ್ಟರೆ ಕಾಲುಗಳು ಹಾಗೆ ಕೆಳಕ್ಕೆ ಬರುತ್ತಿದ್ದವು, ಪರ್ವತದ ಆ ಮಣ್ಣು ನಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ. ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಪರ್ವತವನ್ನು ಹತ್ತಲು ಬಂದಿದ್ದಕ್ಕೆ ನಮ್ಮನ್ನು ನಾವೆ ಶಪಿಸಿಕೊಳ್ಳುತ್ತಾ ನೆಡೆಯುತ್ತಿದೆವು. ಸುಮಾರು ನಾಲ್ಕು ತಾಸುಗಳ ನಂತರ ಒಂದು ಗುಹೆ ಸಿಕ್ಕಿತು. ಅಲ್ಲಿ ಕೇವಲ ಹತ್ತುನಿಮಿಷ ಕುಳಿತುಕೊಳ್ಳಲು ಅವಕಾಶ. ಮಲಗಿಕೊಂಡರೆ ಆಮ್ಲಜನಕ ಕಡಿಮೆಯಾಗಿ ನಮಗೆ ಗೊತ್ತಾಗದೆ ನಮ್ಮ ಪ್ರಾಣ ಹಾರಿಹೋಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರಿಂದ ಯಾರೂ ಮಲಗಲು ಹೋಗಲಿಲ್ಲ. ಅಲ್ಪ ವಿರಾಮದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು.
ಎಲ್ಲರ ಕಾಲು ಪದ ಹೇಳುತ್ತಿದ್ದವು, ಯಾರಿಗೂ ಪರ್ವತ ಏರುವ ಆಸಕ್ತಿ ಇಲ್ಲದಾಗಿತ್ತು. ಆದರೂ ಇಷ್ಟು ಕಷ್ಟ ಪಟ್ಟಿರುವ ನಾವು ಇನ್ನು ಸ್ವಲ್ಪ ದೂರ ಎನ್ನುವ ಪಾಂಡೆಯವರ ಮಾತು ಎಲ್ಲರನ್ನು ಹತ್ತಲು ಪ್ರೋತ್ಸಾಹಿಸುತ್ತಿತ್ತು. ಅಲ್ಲಲ್ಲಿ ಕೆಲವರು ವಾಂತಿ ಮಾಡಿಕೊಳ್ಳುವುದು, ಕೈ ಕಾಲು ಹಿಚುಕಿಕೊಳ್ಳುವುದು, ಅಳುವ ಮುಖ ಮಾಡಿ ಕುಳಿತುಕೊಂಡಿರುವುದು ಸಾಮಾನ್ಯದೃಶ್ಯವಾಗಿತ್ತು. ಯಾರಿಗೂ ಇನ್ನೊಬ್ಬರ ಮೇಲೆ ಕರುಣೆ ಅನ್ನುವುದು ಬರುತ್ತಿರಲಿಲ್ಲ. ನಿಂತಲ್ಲೆ ಕೈ ಎತ್ತಿ, ಇಲ್ಲೆ ಇದೆ ಬನ್ನಿ ಎಂದು ನಮ್ಮ ಶೇರ್ಪಾ ಪ್ರತಿ 10 ನಿಮಿಷಕ್ಕೆ ಒಮ್ಮೆ ಹೇಳುತ್ತಿದ್ದ. ನಾವು ಎಲ್ಲಿದ್ದೇವೆ? ಇನ್ನು ಎಷ್ಟು ದೂರ ಇದೆ? ಎನ್ನುವುದು ತಿಳಿದಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ತೇಪೆ ಕಾಣಿಸುತ್ತಿತ್ತು. ಮೊದಲು ಮಂಜನ್ನು ನೈಸರ್ಗಿಕವಾಗಿ ನಾನು ನೋಡಿರಲಿಲ್ಲ. ಯಾವಾಗ ಮಂಜು ಸಿಗುತ್ತದೊ ಅದರ ಮೇಲೆ ಹತ್ತು ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಆಟವಾಡುತ್ತೇನೆ, ಅದರ ಮೇಲೆ ಮಲಗಿ ಉರುಳಾಡುತ್ತೇನೆ ಎಂದು ಏನೇನೊ ಊಹೆಗಳನ್ನು ಮಾಡಿಕೊಂಡಿದ್ದೆ. ಬೆಳಗಿನ ಜಾವ ಸುಮಾರು ೩.೦೦ ಗಂಟೆಯ ಸಮಯ, ಹತ್ತುವಾಗ ಒಂದು ಕಡೆ ಹತ್ತಿಯನ್ನು ಹಾಸಿದ ಹಾಗೆ ಕಾಣಿಸುತ್ತಿತ್ತು. ನನ್ನ ಹಿಂದೆ ಬರುತ್ತಿದ್ದವನು ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಅಲ್ಲಿ ಐಸ್ ಬಿದ್ದೆದೆ ಅಂದ, ನನಗೆ ಸರಿಯಾಗಿ ಕೇಳಿಸಲಿಲ್ಲ. ನಾನು ಹತ್ತಿರ ಹೋದಮೇಲೆ ತಿಳಿಯಿತು ಅದು ಮಂಜುಗಡ್ಡೆಯ ಹಾಸಿಗೆ ಎಂದು. ಹಿಂದೆ ತಿರುಗಿ ನಿಧಾನವಾಗಿ ಹೇಳಿದೆ ನೋಡು ಇಲ್ಲಿ ಮಂಜು ಬಿದ್ದಿದೆ, ನಿನಗೆ ಆಸೆ ಇದ್ದರೆ ಮುಟ್ಟಿ ನೋಡು, ನನಗಂತೂ ಅದರನ್ನು ಮುಟ್ಟುವ ಆಸಕ್ತಿಯೂ ಇಲ್ಲ, ಕೂತರೆ ಏಳುವ ಶಕ್ತಿಯೂ ಇಲ್ಲ ಎಂದು ಹೇಳಿ ನನ್ನ ಆಮೆ ವೇಗದ ಪ್ರಯಾಣವನ್ನು ಮುಂದುವರೆಸಿದೆ. ನಮ್ಮ ಜೊತೆಗಾರರು ಬಹಳ ಜನ ಹಿಂದುಳಿದ ಕಾರಣ ನಾನು ಬೇರೊಬ್ಬ ಗೈಡನ್ನು ಹಿಂಬಾಲಿಸಿ ಹೊರಟೆ. ಒಬ್ಬಳು ಚೈನಿ ಹುಡುಗಿಯನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆಲ್ಲಿ ಆ ಹುಡುಗಿ ಕುಳಿತಿಕೊಳ್ಳುತ್ತಾಳೊ ಅಲ್ಲೆ ನಾನು ಕೂಡ ಸುಧಾರಿಸಿಕೊಳ್ಳುತ್ತಿದ್ದೆ. ಕೆಲವು ಕಡೆ ಅವಳು ವಾಂತಿಮಾಡಿಕೊಂಡಳು. ಆದರೂ ಅವಳು ತನ್ನ ಪ್ರಯಾಣವನ್ನು ನಿಲ್ಲಿಸದೆ ಮುಂದುವರೆಸುತ್ತಿದ್ದಳು. ಈ ರೀತಿಯ ಪರ್ವತ ಹತ್ತುವಾಗ ಸುಧಾರಿಸಿಕೊಳ್ಳಲು ಕೂತರೆ ಇನ್ನೂ ಜಾಸ್ತಿ ಸುಸ್ತಾಗುತ್ತದೆ. ಆಮ್ಲಜನಕ ಕಡಿಮೆ, ಚಳಿ ಜಾಸ್ತಿ ಇದೆ, ಕೊರೆಯುವ ಚಳಿಯಲ್ಲೂ ಕೈ ಕಾಲು ಉರಿಯುತ್ತಿತ್ತು. ಹಾಗಾಗಿ ಸುಧಾರಿಸಿಕೊಳ್ಳದೆ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು.

ಸುಮಾರು ಬೆಳಗ್ಗೆ ೪.೩೦ ರ ಹೊತ್ತಿಗೆ ನಾವು ದಕ್ಷಿಣಪಥ ಎನ್ನುವ ಭಾಗಕ್ಕೆ ಅಂದರೆ ಕೈಲಾಸ ಪರ್ವತದ ದಕ್ಷಿಣ ಭಾಗಕ್ಕೆ ತಲುಪಿದೆವು.ಅಲ್ಲಿ ನಮ್ಮಿಂದ ಮುಂಚೆ ನಮ್ಮ ಯಾಕ್ ಮತ್ತು ಕುದುರೆಗಳು ತಲುಪಿದ್ದವು..ಶೇರ್ಪಾಗಳು ನಮಗಾಗಿ ಡೇರೆಯನ್ನು ಸಿದ್ದಪಡಿಸಿದ್ದರು. ಅಲ್ಲಿ ನಾವು ಹೋಗಿ ಬ್ಯಾಗನ್ನು ನಮ್ಮ ತಲೆಯಡಿಗೆ ಇಟ್ಟು ಮಲಗಿದೆವು.. ಮನಸ್ಸು ಹಳೆಯ ನೆನಪುಗಳ ಹಾದಿ ಹಿಡಿಯಿತು. ಬಾಲ್ಯಕ್ಕೋಡಿತು..ಮನೆಯ ನೆನಪಾಯಿತು.. ಆಯಾಸದಿಂದ ದೇಹವಿಡೀ ಬಳಲಿದ ಕಾರಣ ನಿದ್ದೆ ಬಂದದ್ದೆ ತಿಳಿಯಲಿಲ್ಲ .........

Thursday, October 8, 2009

ಮಾನಸ ಸರೋವರ ಯಾತ್ರೆ-೧೩


ಈ ಸಂಚಿಕೆಯಲ್ಲಿ ನನಗೆ ದೊರೆತ ಮಾಹಿತಿ ಪ್ರಕಾರ ಮಾನಸ ಸರೋವರವನ್ನು ವಿವರಿಸುತ್ತಿದ್ದೇನೆ.
ಅಂದು ಬೆಳಿಗ್ಗೆ ಐದಕ್ಕೆ ಸರಿಯಾಗಿ! ಆನಂದದಿಂದ ಸುಂದರ ಸವಿಗನಸುಗಳ ರಥವನ್ನೇರಿ ಸಾಗುತ್ತಿರುವ ಸಮಯದಲ್ಲಿ… ಇನ್ನೂ ಬೆಚ್ಚಗೆ ಹೊದ್ದು ಮಲಗೋಣ ಎಂದೆನಿಸುವ ಕ್ಷಣದಲ್ಲಿ ಈ ಪಾಂಡೆಯ ಕರೆಗೆ ಓಗೊಟ್ಟು ತಾಳಲಾರದೆ ಬಂಧಿಸಿದ ಕಣ್ಣುಗಳ ತೆರೆದು ಕೈಲಾಸ ಪರ್ವತಕ್ಕೆ ನಮಸ್ಕರಿಸಿ ಮುಖಕ್ಕೆ ನೀರೆರೆಚಿದರೆ ಅಬ್ಬಾ!!! ಮೈ ಕೊರೆಯುವ ತಣ್ಣನೆಯ ನೀರು ಸಹಾ ಒಂದು ಕ್ಷಣ ನನ್ನ ಆಜನ್ಮ ಶತ್ರುವೇನೋ ಎಂದೆನಿಸಿ ಬಿಡುವ ಹಾಗೆ ಮಾಡುತ್ತದೆ. ಇವೆಲ್ಲ ಮುಗಿಸಿ ನಮ್ಮ ರೂಮಿನ ಹೊರಗೆ ಬಂದು ನೋಡಿದಾಗ ಅಲ್ಲಿ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು ಮುಂಜಾನೆಯ ಸೂರ್ಯನ ಬಿಸಿಲಿನಲ್ಲಿ ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗೆ ನಿಲ್ಲುತ್ತವೆ. ಅವುಗಳು ಎಷ್ಟೇ ಏನೇ ಮಾಡಿದರೂ ನಾನು ಮೊದಲು ತೆಗೆದುಕೊಳ್ಳುವುದು ನನ್ನ ಪ್ರೀತಿಯ ಚಹಾ ...
ಆ ದಿನದ ದಿನಚರಿಯಲ್ಲಿ ಏನೇ ಕೆಲಸಗಳಿದ್ದರೂ ಚಹಾ ಕುಡಿಯದೆ ಬೇರೆ ಕೆಲಸಗಳಿಗೆ ಮುನ್ನುಡಿಯಿಡಲು ಸಾಧ್ಯವೇ ಇಲ್ಲ ಎಂಬುವಷ್ಟು ನನಗೆ ಚಹಾ ಮೋಡಿ ಮಾಡಿ ಬಿಟ್ಟಿದೆ. ಆ ಚಹದೊಳಗೆ ನನ್ನ ದೃಷ್ಟಿ ಬೆರೆಸಿದರೆ ಸಾಕು ಅದರಲ್ಲಿ ನೂರೆಂಟು ಕಣ್ಣುಗಳು ರೂಪಗೊಂಡು ಕಕ್ಕಾಬಿಕ್ಕಿಯಾಗಿ ನನ್ನೆಡೆಗೆ ನೋಡಲು ಶುರುವಾಗುತ್ತದೆ, ನಾನು ಅದನ್ನು ನೋಡನೋಡುತ್ತಿದ್ದಂತೆಯೇ ಆ ಕಣ್ಣುಗಳು ಮಾಯವಾಗುತ್ತಿರುತ್ತದೆ.

ಬೆಳಿಗ್ಗೆ ಎದ್ದು ನನ್ನ ನಿತ್ಯ ವಿಧಿಗಳನ್ನು ಮುಗಿಸಿ ಮಾನಸದ ಸೌಂದರ್ಯ ಆಸ್ವಾದಿಸಲು ತಟಕ್ಕೆ ಬಂದೆ.
ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ.
ಪ್ರತಿವರ್ಷ ಸಹಸ್ರಾರು ಯಾತ್ರಾರ್ಥಿಗಳು ಶಿವತಾಣವಾದ ಕೈಲಾಸ ಪರ್ವತವನ್ನೇರುತ್ತಾರೆ. ಇವರಲ್ಲಿ ಬಹುಪಾಲು ಮಾನಸ ಸರೋವರ ವೀಕ್ಷಕರೇ ಇರುತ್ತಾರೆ. ಹಿಮಾಚ್ಛಾದಿತ , ಅಚ್ಛಬಿಳಿಪಿನ ಶ್ವೇತಾಂಬರದ ಹಿನ್ನೆಲೆ, ಬೆಳ್ಳಿ ಬೆಟ್ಟವೇ ಕರಗಿ ಜಲರಾಶಿಯಾದಂತೆ ತೋರುವ ಮಾನಸ ಸರೋವರ ನಿಸರ್ಗರಮಣೀಯ ತಾಣ. ಮಾನಸ ಸರೋವರ ಪರಿಕ್ರಮದಲ್ಲಿ ಭಕ್ತಿ ಭಾವದಂತೆಯೇ, ನಿಸರ್ಗಸೌಂದರ್ಯ ವೀಕ್ಷಣೆಯ ವಿಶೇಷಾನುಭವ ಒಂದೆಡೆಯಾದರೆ, ಭಯ ಹುಟ್ಟಿಸುವ ಪ್ರಪಾತಗಳು, ಹಿಮರಾಶಿಗಳ ರುದ್ರಭಯಂಕರ ನೋಟಗಳೂ ಎದೆ ನಡುಗಿಸುತ್ತವೆ. ಆದರೂ ಶಿವಕೃಪೆಗೆ ಪಾತ್ರರಾಗಲು, ಅಭೌಮ ಪ್ರಕೃತಿ ಸೌಂದರ್ಯ ವೀಕ್ಷಿಸಲು ಹೇರಳ ಅವಕಾಶವಿರುವುದರಿಂದ ಯಾತ್ರಾರ್ಥಿಗಳು ಜೀವನಕಾಲದ ಸಾಧನೆಯಾಗಿ ಹಿಮರಾಶಿಗಳ ನೆರಳಲ್ಲಿ ಭಕ್ತಿಯ ನೆಲೆಯರಸಿ ಸಾಗುವುದು ಪ್ರತೀ ವರ್ಷದ ಪ್ರವಾಸಿ ಹಂಗಾಮಿನಲ್ಲಿ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ.

ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳೆರಡು ಒಂದಕ್ಕೊಂದು ಹೊಂದಿಕೊಂಡೇ ಇವೆ. ಸ್ಪಟಿಕದಷ್ಟೆ ಶುಭ್ರವಾಗಿರುವ ಮಾನಸ ಸರೋವರ ಹಿಂದೂಗಳ ಪಾಲಿಗೆ ಜೀವನದಲ್ಲಿ ಒಮ್ಮೆಯಾದರೂ ಮಿಂದು ಪಾವನರಾಗಬೇಕೆಂದು ಬಯಸುವ ಸ್ಥಳ.
ಮಹಾರಾಜ ಮಾಂಧಾತನು ಇಲ್ಲಿ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡ ಕಾರಣ ಈ ಸರೋವರಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿರುವ ಹೇಳಿಕೆಗಳು ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿವೆ.
ಬೌದ್ಧ ಧರ್ಮದ ಪ್ರಕಾರ ಸರೋವರದ ಮಧ್ಯದಲ್ಲಿ ಒಂದು ದಿವ್ಯ ಔಷಧಿಯ ಮರವಿದೆ ಎಂದೂ, ಆ ಮರದ ಹಣ್ಣುಗಳನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆಗೆ ಬಳಸಿದರೆ ಗುಣವಾಗುತ್ತಾರೆ ಎಂಬ ನಂಬಿಕೆ ಇದೆ.
ಸಮುದ್ರ ಮಟ್ಟದಿಂದ ಸುಮಾರು 22,028 ಅಡಿ ಎತ್ತರದಲ್ಲಿ ಇರುವುದರಿಂದ ಆಮ್ಲಜನಕದ ಕೊರತೆಯ ಕಾರಣ ಉಸಿರಾಟ, ತಲೆ ಸುತ್ತುವುದು, ನಿಶ್ಯಕ್ತಿ ಕಾಡುವ ಸಾಧ್ಯತೆ ಇದೆ. ಅಲ್ಲದೆ ಸಮುದ್ರದಿಂದ ಎತ್ತರ ಪ್ರದೇಶಕ್ಕೆ ತೆರಳಿದ ಸಮಯದಲ್ಲಿ ವಾತಾವರಣಕ್ಕೆ ದೇಹ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳು ಚೀನಾದ ವ್ಯಾಪ್ತಿಯಲ್ಲಿ ಇರುವುದರಿಂದ ಕೈಲಾಸ ಪರ್ವತ ದರ್ಶನಕ್ಕೆ ಭಾರತೀಯ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯವು ಪ್ರತಿ ವರ್ಷ ಪ್ರವಾಸವನ್ನು ಆಯೋಜಿಸುತ್ತದೆ. ಸುಮಾರು 28 ದಿನಗಳ ಚಾರಣವಾಗಿರುವುದರಿಂದ ದೈಹಿಕವಾಗಿ ಸಮರ್ಥರಾಗಿರುವವರು ಮಾತ್ರ ಕೈಲಾಸ ದರ್ಶನ ಮಾಡಬಹುದು. ವಿಮಾನ ಮೂಲಕ ಪ್ರಯಾಣ ಮಾಡುವುದಾದರೆ ಕಠ್ಮಂಡುವರೆಗೆ ಮಾತ್ರ ಸಾಧ್ಯ, ಅಲ್ಲಿಂದ ಸರೋವರದ ವರೆಗೆ ರಸ್ತೆ ಮೂಲಕ ಪಯಣಿಸಬೇಕು...