ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Wednesday, November 4, 2009

ಮಾನಸ ಸರೋವರ ಯಾತ್ರೆ-೧೮










ಬೆಳಿಗ್ಗೆ ೮ ಘಂಟೆಯ ಸಮಯ.ಸ್ನಾನ ಇಲ್ಲದೆ ೧೦ ದಿನಗಳಾಗಿದ್ದವು.ಕೇವಲ ಬ್ರೆಷ್ ಮಾಡಿ ಕೈಯಲ್ಲಿದ್ದ ಬಿಸ್ಕೆಟ್ ,ಒಣ ದ್ರಾಕ್ಷಿ ,ಗೋಡಂಬಿ,ಬಾದಾಮಿ,ಬ್ರೆಡ್ ಜ್ಯಾಮ್ ನಮ್ಮ ನಿತ್ಯದ ಆಹಾರಗಳಾಗಿದ್ದವು. ನಮ್ಮ ಪ್ರಯಾಣ ಮುಂದುವರೆಯಿತು. ಎಲ್ಲರೂ ನಿಧಾನವಾಗಿ ತಮ್ಮ ತಮ್ಮ ಬ್ಯಾಗನ್ನು ಕೊಡವಿಕೊಂಡು ಹೆಗಲಿಗೆ ಏರಿಸಿಕೊಂಡು ನಡೆಯಲು ಶುರುಮಾಡಿದರು. ಈಗ ನಮ್ಮ ಮುಂದಿದ್ದ ದಾರಿ ಮಾತ್ರ ನಮ್ಮ ಊಹೆಗೂ ಮೀರಿತ್ತು ಅಥವಾ ಊಹಿಸಲೇ ಸಾಧ್ಯವಿಲ್ಲದಂತಿತ್ತು. ನೇರವಾಗಿ ಹತ್ತಲಾಗದ ಬೆಟ್ಟವನ್ನು ಜಿಗ್-ಜಾಗ್ ಮಾದರಿಯಲ್ಲಿ ಹತ್ತಲು ಶುರುಮಾಡಿದೆವು. ಎರಡು ಹೆಜ್ಜೆ ಇಟ್ಟು ಹತ್ತಬಹುದಾದ ಮಾರ್ಗವನ್ನು ಸುಮಾರು ಹನ್ನೆರಡು ಹೆಜ್ಜೆ ಇಟ್ಟು ಹತ್ತುತ್ತಿದ್ದೆವು. ಬೂದಿಯಂತಹ ಮಣ್ಣಿನಿಂದ ಕೂಡಿದ ಈ ದಾರಿಯನ್ನು ನೇರವಾಗಿ ಹತ್ತುವುದು ಅಸಾಧ್ಯದ ಕಾರ್ಯವಾಗಿತ್ತು. ಕೇವಲ ನೂರು ಮೀಟರ್‌ನಷ್ಟು ಬೆಟ್ಟವನ್ನು ಹತ್ತಲು ಸುಮಾರು ಒಂದು ಗಂಟೆ ತೆಗೆದುಕೊಂಡೆವು. ಒಂದೊಂದು ಹೆಜ್ಜೆ ಇಡಬೇಕಾದರೂ ಯಾಕಾದರೂ ಈ ಪರ್ವತ ಹತ್ತಲು ಬಂದೆವೊ ಎಂದು ನಮ್ಮನ್ನು ನಾವೇ ಬೈದುಕೊಳ್ಳುತ್ತಿದ್ದೆವು. ಒಬ್ಬರ ಹಿಂದೆ ಒಬ್ಬರು ಬರುತ್ತಿದ್ದ ನಾವು, ಒಬ್ಬರನ್ನೊಬ್ಬರು ಕಾಣದಷ್ಟು ಅಂತರವನ್ನು ಬೆಳೆಸಿಕೊಂಡಿದ್ದೆವು. ನಮ್ಮಲ್ಲಿ ಗೈಡ್ ಗಳು ಕಡಿಮೆ ಇದ್ದರು, ಕೆಲ ಗೈಡ್‌ಗಳು ಸುಸ್ತಾದವರನ್ನು ಹಿಂದಕ್ಕೆ ಬಿಡಲು ಹೋಗಿದ್ದರು, ಹಾಗಾಗಿ ನಾನು ಒಬ್ಬ ಚೈನೀಸ್ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಬೇರೆ ಯಾರೊ ಗೈಡ್‌ನನ್ನು ಹಿಂಬಾಲಿಸುತ್ತಾ ಹೊರಟೆ. ಎಲ್ಲೆಲ್ಲಿ ಆ ಚೈನೀಸ್ ಹುಡುಗಿ ಸುಸ್ತಾಗಿ ಕೂರುತ್ತಿದ್ದಳೊ ನಾನು ಅಲ್ಲೆ ಕೂರುತ್ತಿದ್ದೆ. ನಾಲ್ಕೈದು ಕಡೆ ಅವಳು ವಾಂತಿ ಮಾಡುತ್ತಿದ್ದಾಗ ನಾನು ದೂರದಲ್ಲೆ ಕುಳಿತು ಅವಳು ಹೊರಟ ತಕ್ಷಣ ವೇಗವಾಗಿ ಹೋಗಿ ಅವರನ್ನು ಕೂಡಿಕೊಳ್ಳುತ್ತಿದ್ದೆ. ಆಮ್ಲಜನಕ ಬಹಳ ಕಡಿಮೆ ಇದ್ದಕಾರಣ ಉಸಿರಾಟದ ತೊಂದರೆ ಬಹಳವಾಗಿತ್ತು. ಏನೂ ಕೆಲಸ ಮಾಡದೆ ಸುಸ್ತಾಗುವ ಅಂತಹ ಜಾಗದಲ್ಲಿ ಪರ್ವತ ಹತ್ತುವಂತಹ ಕಠಿಣ ಕಾರ್ಯ ಬಹಳ ಆಯಾಸದಾಯಕ. ನನ್ನ ಹಿಂದೆ ನಮ್ಮ ಗುಂಪಿನ ಇನ್ನೊಬ್ಬ ಹುಡುಗ ಬಂದ. ನಾನು ಅವನನ್ನು ನೋಡಿ ಸ್ವಲ್ಪ ನಿಧಾನವಾಗಿ ಚಲಿಸತೊಡಗಿದೆ. ಸ್ವಲ್ಪೆ ದೂರದಲ್ಲಿ ಹತ್ತಿಯ ಹಾಸಿಗೆಯಂತೆ ಕಾಣಿಸತೊಡಗಿತು. ಅದು ಮಂಜುಗಡ್ಡೆಯಿರಬೇಕು ಎಂದು ಅನ್ನಿಸಿದರೂ ಅಂತಹ ಖುಷಿ ಅನ್ನಿಸಲಿಲ್ಲ. ಈ ಪರ್ವತ ಹತ್ತುವ ಮೊದಲು, ಕೆಳಗಿನಿಂದ ಮಂಜುಗಡ್ಡೆಯನ್ನು ನೋಡುತ್ತಿದ್ದ ನಾನು, ಮೊದಲ ಬಾರಿ ಮಂಜುಗಡ್ಡೆಯ ಮೇಲೆ ಹೋದಮೇಲೆ ಹತ್ತಿ ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಬೇರೆಯವರಿಗೆ ಹೊಡೆಯುತ್ತೇನೆ ಎಂದು ಊಹಿಸಿಕೊಂಡಿದ್ದೆ. ಆದರೆ ಈಗ ನನ್ನ ಕಾಲಿನ ಪಕ್ಕದಲ್ಲೆ ಮಂಜಿನ ಹಾಸಿಗೆ ಬಿದ್ದಿದ್ದೆ, ಅದನ್ನು ಮುಟ್ಟುವ ಆಸೆ ಕೂಡಾ ನನ್ನಲ್ಲಿ ಉಳಿದಿರಲಿಲ್ಲ. ಹಿಂದೆ ಬರುತ್ತಿದ್ದ ನನ್ನ ಸ್ನೇಹಿತನಿಗೆ ಹೇಳಿದೆ. ಅದಕ್ಕೆ ಅವನು ಅದನ್ನು ನೋಡುವ ಆಸಕ್ತಿ ನನ್ನಲ್ಲಿ ಉಳಿದಿಲ್ಲ, ಬೇಕಿದ್ದರೆ ನೀನೆ ಮುಟ್ಟಿ ನೋಡು ಎಂದು ಹೇಳಿ ನನ್ನ ಹತ್ತಿರ ಬಂದು ನಿಂತುಕೊಂಡ. ನಮಗೆ ಎಷ್ಟು ಸುಸ್ತಾಗಿತ್ತೆಂದರೆ, ಮಂಜನ್ನು ಮುಟ್ಟಲು ಎರಡು ಹೆಜ್ಜೆ ಮುಂದೆ ಹೋಗಬೇಕಿತ್ತು, ಹೋದರೆ ಮತ್ತೆ ಎರಡು ಹೆಜ್ಜೆ ಹಿಂದೆ ಬರಬೇಕು ಎಲ್ಲಾ ಸೇರಿ ನಾಲ್ಕು ಹೆಜ್ಜೆ. ಮಂಜನ್ನು ಮುಟ್ಟುವ ಖುಷಿಗಿಂತ ನಾಲ್ಕು ಹೆಜ್ಜೆ ಉಳಿಸಿದ ಖುಷಿ ಜಾಸ್ತಿ ಎನಿಸಿ ಸುಮ್ಮನೆ ಮುಂದುವರೆದೆವು. ಅಂತು ನಮ್ಮ ಜಿಗ್-ಜಾಗ್ ಮಾದರಿಯ ಪ್ರಯಾಣ ಮುಗಿಯಿತು ಮತ್ತು ಮುಂದೆ ಕಲ್ಲು ಬಂಡೆಗಳು ಶುರುವಾದವು.
ನಮ್ಮ ಕೈಲಿದ್ದ ಕೋಲುಗಳನ್ನು ಮಡಿಚಿ ಬಂಡೆಗಳನ್ನು ಹಿಡಿದು ಹತ್ತಲು ಶುರುಮಾಡಿದೆವು. ಹಿಂತಿರುಗಿ ನೋಡಿದರೆ ನಮ್ಮ ಸಹ ಚಾರಣಿಗರು ಬಹಳ ದೂರದಲ್ಲಿ ಬರುತ್ತಿದ್ದರು. ಕೂತರೆ ಅಲ್ಲಿಯ ಚಳಿಗೆ ಮತ್ತು ಕಡಿಮೆ ಆಮ್ಲಜನಕಕ್ಕೆ ಇನ್ನೂ ಸುಸ್ತಾಗುತ್ತಿದ್ದೆವು, ಹಾಗಾಗಿ ಪ್ರಯಾಣವನ್ನು ಮುಂದುವರೆಸಿದೆವು. ಕೆಲವು ಬಂಡೆಗಳನ್ನು ಹತ್ತುವಾಗ ತೆವಳಿ ಹತ್ತುತ್ತಿದ್ದರೆ ಮತ್ತೆ ಕೆಲವು ಕಡೆ ಪೂರ್ತಿಯಾಗಿ ಮಲಗಿ ಹತ್ತಬೇಕಾಗಿತ್ತು. ಎಲ್ಲಿಗೆ ಹೋಗುತ್ತಿದ್ದೇವೆ, ನಮ್ಮ ದಾರಿ ಸರಿ ಇದೆಯಾ ಎನ್ನುವುದೆ ನಮಗೆ ತಿಳಿಯದಂತಾಗಿತ್ತು. ನನ್ನ ಸ್ನೇಹಿತ ಸ್ವಲ್ಪ ಹಿಂದೆ ಉಳಿದುಕೊಂಡ ಅವನಿಗಾಗಿ ಕಾದ ನನಗೆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ಕೂಡ ಕಾಣಿಸದಾದರು, ಆದರೂ ಅಲ್ಲಿ ದಾರಿಯಂತೆ ಕಾಣಿಸುತ್ತಿದ್ದ ಮಾರ್ಗದಲ್ಲಿ ನಡೆಯುತ್ತಾ ಹೋದೆ. ಎಲ್ಲೊ ಒಂದುಕಡೆ ಅವರುಗಳು ಹೋಗುತ್ತಿದ್ದುದು ಕಾಣಿಸಿತು. ವೇಗವಾಗಿ ಹೋದರೆ ಮತ್ತೆ ಅವರು ಕಾಣಿಸುತ್ತಿರಲಿಲ್ಲ. ಸ್ವಲ್ಪ ಸುಧಾರಿಸಿಕೊಳ್ಳಲು ಒಂದು ಬಂಡೆಗೆ ಬೆನ್ನು ತಾಗಿಸಿ ಕುಳಿತರೆ ಕೈ ಮತ್ತು ಕಾಲುಗಳು ಉರಿಯತೊಡಗಿದವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಪಾದಗಳು ಬೆಂಕಿಯಲ್ಲಿಟ್ಟಂತೆ ಉರಿಯುತ್ತಿವೆ. ಕೂತರೆ ಕೆಲಸ ಕೆಡುತ್ತದೆ ಎಂದು ಮತ್ತೆ ನಡೆಯಲು ಶುರುಮಾಡಿದೆ. ಒಂದು ಕವಲುದಾರಿಯಲ್ಲಿ ತಪ್ಪು ದಾರಿ ಹಿಡಿದು ಹೊರಟೆ. ಹೋಗುತ್ತಾ ಹೋಗುತ್ತ ಕಣಿವೆಯ ತುದಿ ಮುಟ್ಟಿದೆ. ಅಲ್ಲಿ ಮುಂದೆ ನನಗೆ ಮಾರ್ಗವೆ ಇಲ್ಲ ಇನ್ನು ಮುಂದೆ ಹೋದರೆ ಕಣಿವೆಗೆ ಬೀಳುತ್ತೇನೆ, ಮೇಲೆ ಹತ್ತಲು ದಾರಿ ಎನ್ನುವುದೆ ಇಲ್ಲ. ಹಿಂದೆ ಹೋಗಲು ಮತ್ತೆ ದಾರಿ ಸರಿಯಾಗಿ ನೆನಪಾಗುತ್ತಿಲ್ಲ. ಹೆದರಿ ಸುತ್ತಲೂ ನೋಡಿತ್ತಿದ್ದೆ, ಅಲ್ಲೆ ಒಂದು ಬಂಡೆಯ ಮೇಲೆ ಇಬ್ಬರು ನಿಂತಿದ್ದರು. ಒಬ್ಬ ಶೇರ್ಪಾ ತಲೆಯ ಮೇಲಿದ್ದ ಟಾರ್ಚ್ ಆ ಹಗಲಿನಲ್ಲಿ ಮಂಜಿನ ನಡುವೆ ಅಪಾಯದ ಸೂಚನೆಯಂತೆ ಮಿಣುಕಿಸಿದ. ಅಲ್ಲಿಂದ ಜೋರಾಗಿ ಕೂಗಿ ಕೇಳಿದೆ, ಅಲ್ಲಿಗೆ ಬರಲು ದಾರಿಯಾವುದು? ಅದಕ್ಕೆ ಉತ್ತರಿಸುತ್ತ ಅವನು ಹೇಳಿದ, ಹಾಗೆ ಬಂಡೆಯನ್ನು ಹಿಡಿದು ಮೇಲಕ್ಕೆ ಬಾ, ಯಾವುದೆ ಕಾರಣಕ್ಕು ಬಲಗಡೆಗೆ ಹೋಗಬೇಡ. ಅವನು ಹೇಳಿದ್ದು ಏಕೆ ಎಂದು ನಾನು ಮೇಲೆ ಹೋದ ಮೇಲೆ ಬೆಳಕಿನಲ್ಲಿ ನೋಡಿ ತಿಳಿಯಿತು. ಅದೊಂದು ದೊಡ್ಡ ಪ್ರಪಾತ, ಅದರ ತುಂಬ ಮಂಜುಗಡ್ಡೆ ತುಂಬಿದೆ. ಅದರ ಆಳ ಗೊತ್ತಿಲ್ಲ, ಹತ್ತಲು ಕಲ್ಲು ಬಂಡೆಯಿಲ್ಲ. ಸತ್ತು ಬದುಕಿದೆ ಎಂದು ಮನಸ್ಸಿನಲ್ಲೆ ಅಂದುಕೊಂಡೆ. ನನಗೆ ಸೂಚನೆ ಕೊಟ್ಟು ಕರೆಸಿಕೊಂಡ ಆ ಜಾಗದ ಹೆಸರು ದೇರಪುಕ್ . ಅದನ್ನು ಕೂಡ ಈ ಪರ್ವತದ ಒಂದು ಉನ್ನತ ತುದಿ ಎಂದು ಹೇಳುತ್ತಾರೆ. ಅಲ್ಲಿಂದ ಕೇವಲ ಮೂರು ನೂರು ಮೀಟರ್ ನಂತರ ಸಿಗುವುದೆ ಉಹುರು ತುದಿ, ಕೈಲಾಸದ ಅತೀ ಎತ್ತರವಾದ ಜಾಗ.
ನಾನು ದೇರಾಪುಕ್ ತಲುಪಿದ ತಕ್ಷಣ ಅಲ್ಲಿದ್ದ ಆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ತಮ್ಮ ಪ್ರಯಾಣ ಮುಂದುವರೆಸಿದರು. ನನ್ನ ಪೈಕಿಯವರು ಯಾರಾದರೂ ಬರಲಿ ಎಂದು ನಾನು ಅಲ್ಲೆ ಕುಳಿತೆ. ಕುಳಿತ ಎರಡೆ ನಿಮಿಷದಲ್ಲಿ ಮತ್ತೆ ಕೈ ಕಾಲುಗಳು ಉರಿಯಲಾರಂಬಿಸಿದವು. ಏನೂ ಮಾಡಲಾಗದ ಸ್ಥಿತಿ ನನ್ನದಾಗಿತ್ತು. ಅಲ್ಲಿ ಕಾಯುತ್ತಿದ್ದ ನನಗೆ ಇನ್ನೊಬ್ಬ ವ್ಯಕ್ತಿಯನ್ನು ನೋಡುವ ತನಕ ಬದುಕುತ್ತೇನೆ ಎನ್ನುವ ಭರವಸೆ ಇಲ್ಲದಾಗಿತ್ತು. ಅವನನ್ನು ನೋಡಿ ನನ್ನ ಕಷ್ಟ ಹೇಳಿಕೊಂಡರೆ ಅವನು ನನಗಿಂತ ಕಷ್ಟದ ಸ್ಥಿತಿಯಲ್ಲಿದ್ದ! ಹೀಗೆ ಕೂತರೆ ನಾವು ಮಂಜುಗಡ್ಡೆಯಂತೆ ಕಲ್ಲಾಗುತ್ತೇವೆ, ನಮ್ಮ ಪ್ರಯಾಣ ಮುಂದುವರೆಸೋಣ ಎಂದು ತೀರ್ಮಾನಿಸಿ ನಾನು ಮತ್ತೆ ನನ್ನ ಶೇರ್ಪಾ ಹೊರಟೆವು. ಇಲ್ಲಿಂದ ಮುಂದಿನ ಮಾರ್ಗ ಅಷ್ಟೊಂದು ಸುಲಭವಾಗಿರಲಿಲ್ಲ. ಒಂದು ಕಡೆ ಕಂದರ ಮತ್ತೊಂದು ಕಡೆ ಬಂಡೆ. ಕಾಲ ಕೆಳಗೆ ಮಂಜು ಗಡ್ಡೆ. ಸ್ವಲ್ಪ ಏಮಾರಿದರೂ ಜಾರಿ ಮಂಜಿನ ಕಂದರಕ್ಕೆ ಹೋಗುವ ಅವಕಾಶ ಜಾಸ್ತಿ. ಹಾಗೆ ನಡೆಯುತ್ತಾ ಸುಮಾರು ದೂರ ಹೋಗಿದ್ದೆವು, ಯಾರೋ ಕೂಗಿದ ಹಾಗಾಯಿತು. ತಿರುಗಿ ನೋಡಿದರೆ ನಮ್ಮ ಗುಂಪಿನವರಲ್ಲಿ ಒಬ್ಬರು . ನಮ್ಮನ್ನು ಇಲ್ಲೆ ಇರುವಂತೆ ತಿಳಿಸಿದ್ದಾರೆ, ಮುಂದೆ ಹೋಗಬಾರದಂತೆ ಎಂದು ವಾಪಸ್ ಕರೆದ. ನಾವು ದೇರಾಪುಕ್ ಗೆ ವಾಪಸ್ ಬಂದೆವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಕಾಲಿನ ಪಾದ ಉರಿಯುತ್ತಿತ್ತು. ನನ್ನ ಕಷ್ಟ ಹೇಳಿಕೊಂಡರೂ ಅದರ ಬಗ್ಗೆ ಕನಿಕರಿಸುವವರು ಯಾರೂ ಇರಲಿಲ್ಲ. ಏಕೆಂದರೆ ಉಳಿದವರ ಪಾಡು ನನಗಿಂತ ಬೇರೆ ಏನಿರಲಿಲ್ಲ. ನನ್ನ ಕೈ ಉರಿಯುತ್ತಿದ್ದ ಕಾರಣ ಎರಡು ಕೈಯನ್ನು ಉಜ್ಜಿಕೊಳ್ಳೊಣ ಎಂದು ಹಾಕಿದ್ದ ಗ್ಲೌಸ್ ತೆಗೆಯುತ್ತಿದ್ದೆ, ಅಲ್ಲೆ ದೂರದಲ್ಲಿ ನಿಂತಿದ್ದ ಇನ್ನೊಬ್ಬ ಕಿರುಚಿದ, ಯಾವುದೇ ಕಾರಣಕ್ಕು ಗ್ಲೌಸ್ ತೆಗೆಯಬೇಡ, ರಕ್ತ ಹೆಪ್ಪು ಗಟ್ಟಿ ಅಥವ ಚರ್ಮ ಕಿತ್ತು ಬಂದರೆ ಏನು ಮಾಡುತ್ತೀಯ ಎಂದು ಹೆದರಿಸಿದ. ಸತ್ಯ ಅಸತ್ಯದ ವಿಚಾರಕ್ಕೆ ಹೋಗದೆ ಸುಮ್ಮನೆ ನನ್ನ ಕಷ್ಟವನ್ನು ಸಹಿಸಿಕೊಂಡೆ. ಯಾಕಾದರೂ ಈ ಪರ್ವತ ಹತ್ತಲು ಬಂದೆನೊ ಎಂದು ಮನಸ್ಸಿನಲ್ಲಿಯೆ ಗೊಣಗುತ್ತಿದ್ದೆ. ನಮ್ಮ ಊರಿನವರು ಸುಮಾರು ೧೦ ಜನ ಒಂದು ಕಡೆ ಸೇರಿದೆವು.ಸುಮಾರು ಜನ ಬಂದು ನಮ್ಮನ್ನು ಸೇರಿದರು. ಕೆಲವರು ಚಳಿಯಿಂದಾಗುವ ತೊಂದರೆಗೆ ಅಳುತ್ತಿದ್ದರೆ ಕೆಲವರು ನಡೆಯಲಾಗದು ಎಂದು ಕುಳಿತಲ್ಲಿಂದ ಮೇಲೇಳಲೆ ಇಲ್ಲ. ಅಂತು ನಮ್ಮ ಮುಖ್ಯ ಗೈಡ್ ಪಾಂಡೆಯವರು ನಮ್ಮನ್ನೆಲ್ಲ ಮುಂದುವರೆಯುವಂತೆ ಸೂಚಿಸಿದರು . ಅಲ್ಲಿಂದ ಸುಮಾರು ಎರಡು ನೂರು ಮೀಟರ್ ದೂರದ ದಾರಿಯನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾಗುತ್ತದೆ ಎಂದು ತಿಳಿಸಿದರು. ಮಂಜುಗಡ್ಡೆಯ ಕಿರಿದಾದ ದಾರಿಯಲ್ಲಿ ನಮ್ಮ ಪ್ರಯಾಣ ಶುರುವಾಯಿತು. ನಡೆಯುತ್ತಾ ನಡೆಯುತ್ತ ಬೆಳಕು ಕಡಿಮೆಯಾಯಿತು.ಆಗ ನಮ್ಮ ಭಾರತೀಯ ಕಾಲಮಾನ ಪ್ರಕಾರ ನನ್ನ ಕೈ ಗಡಿಯಾರ ಸಂಜೆ ೪.೦೦ ಘಂಟೆ ತೋರಿಸುತ್ತಿತ್ತು ., ಸುತ್ತಲೂ ಏನಿದೆ ಎಂದು ಕಾಣಿಸುತ್ತಿತ್ತು. ಸ್ವರ್ಗ ಎಂದರೆ ಹೀಗೆ ಇರುತ್ತದೆ ಎಂದು ಆಗ ತಿಳಿಯಿತು. ಸುತ್ತಲೂ ಅಸ್ಪಷ್ಟವಾದ ಬೆಳಕು, ಬಣ್ಣ ಎನ್ನುವುದಿದ್ದರೆ ಅದು ಬಿಳಿ ಮಾತ್ರ. ಆಗಸಕ್ಕು, ಭೂಮಿಗೂ, ಮಂಜುಗೆಡ್ಡೆಗೂ ಏನೂ ವ್ಯತ್ಯಾಸವೆ ಇಲ್ಲ ಯಾವುದು ಆಗಸ, ಯಾವುದು ಭೂಮಿ ಎಂದು ತಿಳಿಯಲಾಗದ ಅನುಭವ. ಸುತ್ತಲೂ ಮಂಜುಗಡ್ಡೆ, ದೂರ ದೂರದವರೆಗೂ ತನ್ನದೇ ಆದ ಸೌಂದರ್ಯವನ್ನು ಮಂಜುಗಡ್ಡೆ ತೋರಿಸುತ್ತಿತ್ತು. ನಮ್ಮಲ್ಲಿದ್ದ ಎಲ್ಲಾ ಶ್ರಮ ಕಾಣೆಯಾಯಿತು. ನಾನು ಮತ್ತು ಇನ್ನೊಬ್ಬ ಸ್ನೇಹಿತ ನಡೆಯುತ್ತ ಮುಂದುವರಿದೆವು, ಹಿಂದೆ ಯಾರು ಬರುತ್ತಿದ್ದಾರೆ ಎಂದು ಯೋಚಿಸುವುದಕ್ಕೂ ಆಗದಷ್ಟು ಸಂತೋಷ ನಮ್ಮಲ್ಲಿತ್ತು ಬಹಳ ದೂರ ಬಂದ ಮೇಲೆ ನೋಡಿದರೆ ಅಲ್ಲಿದ್ದವರು ನಾವಿಬ್ಬರೆ. ಆಮೇಲೆ ತಿಳಿಯಿತು ಬಹಳಷ್ಟು ಜನ ಸುಸ್ತಾಗಿ ವಾಪಸ್ ಹೋದರು ಮತ್ತೆ ಕೆಲವರು ನಡೆಯಲಾಗದೆ ಅಲ್ಲೆ ಬಿದ್ದು, ಅವರನ್ನು ಉಳಿದವರು ಎತ್ತಿಕೊಂಡು ಹೋದರು ಎಂದು. ನಾವು ಇಬ್ಬರು ಮಾತ್ರ ನಿಧಾನವಾಗಿ ನಡೆಯುತ್ತಾ ಅಲ್ಲಲ್ಲಿ ಮಂಜಿನ ಗೆಡ್ಡೆಯನ್ನು ಕಡಿದು ತಿನ್ನುತ್ತಾ ಹೋಗುತ್ತಿದ್ದಾಗ ದೂರದಲ್ಲಿ ಬಣ್ಣ ಬಣ್ಣದ ಬಟ್ಟೆ ಕಟ್ಟಿದ್ದ ಕೆಲವು ಕಟ್ಟಿಗೆಗಳು ಕಾಣಿಸಿದವು. ಅದೆ ನಾವು ತಲುಪಬೇಕಾದ ಈ ದಿವಸದ ತುದಿ ಎಂದು ತಿಳಿಯಿತು. ಬಹಳ ಸುಸ್ತಾಗಿದ್ದ ನಮಗೆ ಓಡಿ ಹೋಗುವಷ್ಟು ಶಕ್ತಿ ಇರಲಿಲ್ಲ. ನಿಧಾನವಾಗಿಯೆ ಹೋಗಿ ಅದನ್ನು ಮುಟ್ಟಿದೆವು, ಅಪ್ಪಿದೆವು ... ನಾವು ಸ್ವರ್ಗದಲ್ಲೆ ಇದ್ದೆವು. ದೂರ ದೂರದವರೆಗೂ ಕಾಣಿಸುತ್ತಿದ್ದ ಮಂಜಿನ ಬೆಟ್ಟಗಳು, ಅಲ್ಲಲ್ಲಿ ಮಂಜಿನ ಕಲಾಕೃತಿಗಳು, ಮಂಜಿನಿಂದ ನಿರ್ಮಿತವಾಗಿರುವ ಬಹಳಷ್ಟು ವಿಸ್ಮಯಗಳನ್ನು ನೋಡಿ ಆನಂದಿಸಿದೆವು...
ಜೀವನದ ಅತೀ ತ್ರಾಸದಾಯಕ ಪ್ರಯಾಣ ಮತ್ತು ಅತೀ ಆನಂದದಾಯಕ ಕ್ಷಣ ಎನ್ನಬಹುದಾದ ಒಂದು ವಿಚಿತ್ರ ಅನುಭವ ಈ ಕೈಲಾಸ ಪರ್ವತ ಪ್ರದಕ್ಷಿಣೆ . ಪರ್ವತಾರೋಹಣ ಎನ್ನುವ ಹುಚ್ಚು ಇರುವ ಯಾರಿಗಾದರೂ ಇದು ಸ್ವರ್ಗ. ಜೀವನದಲ್ಲಿ ಒಮ್ಮೆ ಬದುಕಿದ್ದಾಗಲೆ ಸಿಗುವ ಸ್ವರ್ಗ ಸುಖ.
.

No comments:

Post a Comment