ನೇಪಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂರು ಸಂಗತಿಗಳು ನನ್ನ ಗಮನಕ್ಕೆ ಬಂದವು. ಮೊದಲನೆಯದು, ಮೆರವಣಿಗೆಗಳು. ಕಠ್ಮಂಡುವಿನಲ್ಲಿ ಎರಡೂವರೆ ದಿನಗಳ ಕಾಲ ತಂಗಿದ್ದ ನಾನು ಬೇರೆ ಬೇರೆ ಉದ್ದೇಶಕ್ಕಾಗಿ ನಡೆದ ಹಲವು ಮೆರವಣಿಗೆ, ಪ್ರತಿಭಟನೆಗಳನ್ನು ನೋಡಿದೆ. ಎರಡನೆಯದು ಭದ್ರತೆಯ ಕೊರತೆ. ನನ್ನ ಗಮನ ಸೆಳೆದ ಮೂರನೇ ಸಂಗತಿಯೆಂದರೆ ನೇಪಾಳಿ ನಾಗರಿಕರಲ್ಲಿ ಚೀನಾದ ಕುರಿತು ಹೆಚ್ಚುತ್ತಿರುವ ಒಲವು.
ಮೊದಲ ಸಂಗತಿ ಅಷ್ಟೇನೂ ಪ್ರಮುಖವಲ್ಲ; ಏಕೆಂದರೆ ನೇಪಾಳ ಇತ್ತೀಚೆಗಷ್ಟೇ ಉದಯವಾದ ಗಣ ತಂತ್ರ; ಹೀಗೆ ಹೊಸದಾಗಿ ಉದಯವಾದ ರಾಷ್ಟ್ರಗಳಲ್ಲೆಲ್ಲಾ ಮೊದಮೊದಲಿಗೆ ಮೆರವಣಿಗೆಗಳು, ಪ್ರತಿಭಟನೆಗಳು ಇದ್ದರೂ ಕ್ರಮೇಣ ಕಡಿಮೆಯಾಗುತ್ತವೆ. ಇನ್ನು ನನ್ನ ಗಮನಕ್ಕೆ ಬಂದ ಅಭದ್ರತೆಗೂ ಅಷ್ಟೊಂದು ಪ್ರಾಧಾನ್ಯತೆ ನೀಡಬೇಕಿಲ್ಲ; ಏಕೆಂದರೆ ಇಂದು ಕಠ್ಮಂಡು ಮಾತ್ರವಲ್ಲ ನವದೆಹಲಿ, ನ್ಯೂಯಾರ್ಕ್ ಅಥವಾ ಪ್ಯಾರಿಸ್ ಕೂಡಾ ಸುರಕ್ಷಿತವಲ್ಲ. ಆದರೆ ಒಬ್ಬ ಭಾರತೀಯನಾಗಿ ನನ್ನನ್ನು ಬಹುವಾಗಿ ಕಾಡಿದ ಸಂಗತಿಯೆಂದರೆ ನೇಪಾಳೀಯರ ಮೇಲೆ ಹೆಚ್ಚುತ್ತಿರುವ ಚೀನಾದ ಪ್ರಭಾವ.
ಎರಡು ದಿನಗಳ ಅವಧಿಯಲ್ಲಿ ನಾನು ಗಮನಿಸಿದ ಪ್ರಕಾರ ನೇಪಾಳದ ದಿನಪತ್ರಿಕೆಗಳು ಚೀನಾದ ಕುರಿತ ಸುದ್ದಿಗಳ ಕುರಿತು ಪ್ರಗತಿಶೀಲ ನಿಲವು ತಳೆದರೆ ಭಾರತದ ಕುರಿತ ಯಾವುದೇ ವಿಷಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿಲ್ಲ. ಚೀನಾದ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದು ನನಗೆ ಸಂಪೂರ್ಣವಾಗಿ ಅರಿವಾಗಿದ್ದು ಅಲ್ಲಿನ ಎಂಬಿಎ ವಿದ್ಯಾರ್ಥಿಗಳು ನಮ್ಮ ಲಾಡ್ಜಿನಲ್ಲಿ ಒಂದು ಚರ್ಚಾ ಕೂಟವನ್ನು ಏರ್ಪಡಿಸಿದ್ದರು..ನಾನು ದೂರದಿಂದ ಗಮನಿಸುತ್ತಿದ್ದೆ.ಸುಮಾರು ಎರಡು ಘಂಟೆಗಳ ಕಾಲ ಆ ಸಭೆ ನಡೆದಿತ್ತು.. . ವಿದ್ಯಾರ್ಥಿಗಳ ಮತ್ತು ಸಂಪನ್ಮೂಲ ವ್ಯಕ್ತಿಗಳ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಒಂದು ವಿಷಯ ಮನದಟ್ಟಾಯಿತು. ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಎಲ್ಲಾ ಮಾನದಂಡಗಳಲ್ಲೂ ಅಮೆರಿಕಕ್ಕಿಂತ ಚೀನಾ ತುಂಬಾ ಮುಂದಿದೆ ಎಂಬ ನಿಲುವು ತಳೆದಿದ್ದರು. ನನಗೆ ಇದು ಕೊಂಚ ವಿಚಿತ್ರವೆನಿಸಿತು. ಏಕೆಂದರೆ ಚೀನಾದ ಬಗ್ಗೆ ಈ ರೀತಿ ಚಿಂತಿಸುವ ವಿದ್ಯಾರ್ಥಿಗಳು ಭಾರತದಲ್ಲೂ ಇದ್ದಾರೆ. ಆದರೆ ಭಾರತದಲ್ಲಿ 'ಅಮೆರಿಕ ಜಗತ್ತಿನ ಸೂಪರ್ ಪವರ್ ರಾಷ್ಟ್ರ; ಸದ್ಯಕ್ಕೆ ಅದರ ಸ್ಥಾನ ಬದಲಾಗದು' ಎಂಬ ನಿಲುವಿನ ವಿದ್ಯಾರ್ಥಿಗಳ ಸಂಖ್ಯೆ ಚೀನಾಪರ ವಿದ್ಯಾರ್ಥಿಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿನದಾಗಿರುತ್ತದೆ. ಇನ್ನು ಬಹಳಷ್ಟು ಭಾರತೀಯರ ಪ್ರಕಾರ ಮುಂಬರುವ ಹಲವು ದಶಕಗಳಲ್ಲೂ ಅಮೆರಿಕ ನಂಬರ್ ಒನ್ ಸ್ಥಾನದಲ್ಲೇ ಇರುತ್ತದೆ. ಏಕೆಂದರೆ ಚೀನಾದ ಅಭಿವೃದ್ಧಿಗೆ ಅಮೆರಿಕದ ಮಾರುಕಟ್ಟೆ ಅತ್ಯಗತ್ಯ.
ನಿಜ. ಭಾರತ ಮತ್ತು ನೇಪಾಳ ನಡುವಿನ ಸಾಂಸ್ಕೃತಿಕ ಬಾಂಧವ್ಯ, ಸೀಮಾಂತರ ವ್ಯಾಪಾರ, ಪ್ರಾದೇಶಿಕ ಒಟ್ಟು ಅಭಿವೃದ್ಧಿ... ಈ ಎಲ್ಲಾ ಕಾರಣಗಳಿಂದ ಭಾರತೀಯರಿಗೆ ನೇಪಾಳದಲ್ಲಿ ಆದರದ ಸ್ವಾಗತ ದೊರೆಯುತ್ತದೆ.ನೇಪಾಳದಲ್ಲಿ ಭಾರತದ ಹೆಜ್ಜೆ ಗುರುತು ಎಷ್ಟರ ಮಟ್ಟಿಗಿದೆ ಎಂದರೆ ಅಲ್ಲಿ ಹೆಚ್ಚಾಗಿ ಬಳಕೆಯಾಗುವ ಭಾಷೆ ಹಿಂದಿ ಮತ್ತು ಅದಕ್ಕೆ ಹತ್ತಿರವಿರುವ ನೇಪಾಳೀ.. ಭಾರತೀಯ ಕರೆನ್ಸಿಯನ್ನು ಇಲ್ಲಿ ಮುಕ್ತವಾಗಿ ಸ್ವೀಕರಿಸಲಾಗುತ್ತದೆ (ನಕಲಿ ನೋಟಿನ ಭೀತಿಯಿಂದ 500ಹಾಗೂ 1000 ರೂಪಾಯಿಗಳನ್ನು ಸ್ವೀಕರಿಸಲು ಹಿಂದೇಟು ಹಾಕಲಾಗುತ್ತದೆ). ಜೊತೆಗೆ ಅಲ್ಲಿ ಉತ್ತಮವಾಗಿ ನಡೆಯುತ್ತಿರುವ ಎಲ್ಲಾ ಉದ್ಯಮಗಳೂ ಭಾರತೀಯರದ್ದೇ.
ಆದರೆ ನೇಪಾಳದಲ್ಲಿ ಅದರಲ್ಲೂ ಮಾವೋವಾದಿಗಳಲ್ಲಿ, ಭಾರತ-ನೇಪಾಳ ಸಂಬಂಧದಿಂದ ನೇಪಾಳಕ್ಕೆ ನಷ್ಟ ಹಾಗೂ ಭಾರತಕ್ಕೆ ಹೆಚ್ಚಿನ ಲಾಭ ಎಂಬ ಬಲವಾದ ನಂಬಿಕೆಯಿದೆ. ಇದನ್ನು ಆಡಳಿತಾರೂಢ ಸರ್ಕಾರ ಸಾರ್ವಜನಿಕವಾಗೇ ಪ್ರತಿಪಾದಿಸುತ್ತಿದೆ. ಭಾರತದ ಕುರಿತ ನೇಪಾಳೀಯರ ಈ ನಿಲುವು ಮತ್ತಷ್ಟು ಬಲಿಯಲು ಚೀನಾ ಪ್ರತಿ ಅವಕಾಶವನ್ನೂ ಸೊಗಸಾಗಿಯೇ ಬಳಸಿಕೊಳ್ಳುತ್ತಿದೆ. ಏಕೆಂದರೆ ನೇಪಾಳ ಆಯಕಟ್ಟಿನ ಸ್ಥಳದಲ್ಲಿರುವುದು ಚೀನಾಕ್ಕೂ ಗೊತ್ತು. ಹೀಗಾಗಿ ನೇಪಾಳೀಯರಿಗೆ ಚೀನೀ ಭಾಷೆಯನ್ನು ಕಲಿಸುವುದರ ಜೊತೆಗೆ ನೇಪಾಳಕ್ಕೆ ಅತ್ಯಗತ್ಯವಾಗಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸಲೂ ಚೀನಾ ಮುಂದಾಗಿದೆ. ಈಗಾಗಲೇ ಕಠ್ಮಂಡುವಿನಲ್ಲಿ ಮೂರು ಮೇಲ್ಸೇತುವೆಗಳನ್ನು ಚೀನಾ ನಿರ್ಮಿಸುತ್ತಿದೆ (ಪ್ರಸ್ತುತ ಕಠ್ಮಂಡುವಿನಲ್ಲಿ ಒಂದೇ ಒಂದು ಮೇಲ್ಸೇತುವೆ ಕೂಡಾ ಇಲ್ಲ). ಅತ್ತ ಭಾರತ- ನೇಪಾಳ ಬಾಂಧವ್ಯ ತಣ್ಣಗೇ ಇದ್ದು ಅವು ತೆರೆಮರೆಯಲ್ಲೇ ಉಳಿದಿದೆ.
ಕಣ್ಣಿಗೆ ಕಾಣುವ ಬೃಹದಾಕಾರದ ಅಥವಾ ಮೇಲ್ಸೇತುವೆಯಂಥ ನಿರ್ಮಾಣಗಳು ಬಹು ಬೇಗನೆ ಜನರ ಮೆಚ್ಚುಗೆ ಗಳಿಸುತ್ತವೆ ಎಂಬುದರಲ್ಲಿ ಅನುಮಾನಗಳಿಲ್ಲ. ಹಾಗಾಗಿ ನೇಪಾಳಕ್ಕೆ ಚೀನಾ ನೀಡುತ್ತಿರುವ ನೆರವುಗಳೆಲ್ಲವೂ ಕಣ್ಣಿಗೆ ಕಾಣುವಂಥದ್ದೇ. ಇದು ಆರಂಭಿಕ ಹಂತದಲ್ಲಿದೆ ಎಂಬುದನ್ನು ಗಮನಿಸಬೇಕು. ಕುತೂಹಲಕಾರಿ ವಿಷಯವೆಂದರೆ ಕಳೆದ ಆರು ದಶಕಗಳಲ್ಲಿ ಭಾರತ ನೇಪಾಳದಲ್ಲಿ ರೂಪಿಸಿದ್ದೆಲ್ಲವನ್ನು ಚೀನಾ ತನ್ನ ಒಂದೆರಡು ಯೋಜನೆಗಳಿಂದ ಧ್ವಂಸ ಮಾಡುತ್ತಿವೆ. ನೇಪಾಳದ ಆಯಕಟ್ಟಿನ ಸ್ಥಾನ ಗಮನಿಸಿದರೆ ಒಂದೆರಡು ಮೇಲ್ಸೇತುವೆಗೆ ಖರ್ಚಾಗುವ ಹಣದ ಪ್ರಮಾಣ ಕ್ಷುಲ್ಲಕ ಎಂಬುದು ಬಹುಶಃ ಚೀನಾಕ್ಕೆ ಮಾತ್ರ ಅರ್ಥವಾದಂತಿದೆ.
ಇಂತಹ ಚರ್ಚೆಯನ್ನು ಗಮನಿಸಿ ನನಗೆ ಕುದಿಯತೊಡಗಿತು..ಒಂದು ಕಾಲದಲ್ಲಿ ಭಾರತವೇ ಆಗಿದ್ದ ಈ ಸ್ಥಳ ಇಂದು ನಮ್ಮ ವೈರಿಯಾದ ಚೈನಾದ ಜೊತೆ ನೇಪಾಳ ಕೈ ಜೋಡಿಸಿದರೆ ಭಾರತದ ಆಕ್ರಮಣಕ್ಕೆ ಇನ್ನೂ ಒಂದು ಮಾರ್ಗವೇನೋ ಎಂಬ ಸಂಶಯ ನನಗೆ..ಈಗಾಗಲೇ ಅರುಣಾಚಲಂ ನ ಸ್ವಲ್ಪ ಭಾಗ ಚೈನಾಕ್ಕೆ ದಾನ ಮಾಡಿಯಾಯಿತು.. ಇನ್ನು ಮುಂದಕ್ಕೆ ನಮ್ಮ ದೇಶವನ್ನು ಉಳಿಸಿಕೊಳ್ಳಬೇಕಾದರೆ ಈ ಕ್ಷಣದಿಂದಲೇ ಯುವ ಶಕ್ತಿ ಜಾಗೃತವಾಗಬೇಕು. ಇದು ಅನಿವಾರ್ಯ ಪರಿಸ್ಥಿತಿ...
"ಈ ಬ್ಲಾಗ್ ಓದಿದ ಪ್ರತಿಯೊಬ್ಬ ಓದುಗನೂ ಈ ವಿಷಯದ ಬಗ್ಗೆ ಎಚ್ಚೆತ್ತು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಯುವ ಶಕ್ತಿಯನ್ನು ಎಚ್ಚರಿಸಲಿ" ಎಂಬುದು ನನ್ನ ಹಾರೈಕೆ..
ಜೈ ಭಾರತ್ ಮಾತಾ
ನೀವು ಹೇಳಿದ್ದು ನಿಜ. ಚೈನಾ ಬಹಳ ಹಿಂದಿನಿಂದ ಅನುಸರಿಸಿಕೊಂಡು ಬಂದಂತಹ ಪದ್ಧತಿಗಳಲ್ಲಿ ಇನ್ನೊಂದು ದೇಶದ ಮಾನಸಿಕತೆಯನ್ನ ಕುಗ್ಗಿಸಿ ಆ ದೇಶವನ್ನು ಬಗ್ಗು ಬಡಿಯುವುದೂ ಒಂದು. ನೇಪಾಳ ಚೀನಾ ಕ್ಕೆ ಹತ್ತಿರವಾದಷ್ಟು ನಮಗೆ ಕಷ್ಟ..
ReplyDeleteಆಶ್ಚರ್ಯಕರ. ಗೊತ್ತೇ ಇರಲಿಲ್ಲ!
ReplyDeleteಕಿಂಚಿತ್ ಉತ್ಪ್ರೇಕ್ಷಾಲಂಕಾರ ಭೂಯಿಷ್ಟವಾದ ಶೈಲಿಯ ಬರಹ ಚೆನ್ನಾಗಿತ್ತು. ಅನುಭವ ಸಾಮ್ಯತೆಯು ಪುನಃ ನನ್ನನ್ನು ಕೈಲಾಸ-ಮಾನಸಕ್ಕೆ ಆತ್ಮೀಯವಾಗಿ ಕೊಂಡೊಯ್ಯಿತು.
ReplyDeleteಗಣೇಶ್.. ಅವರೆಲ್ಲಾ ಚೀನಾದ ಬಗ್ಗೆ ಒಲವು ತೋರಲು ಇನ್ನು ಬಹಳಷ್ಟು ಕಾರಣಗಳು ಇವೆ.. ಚೀನಾ ಬಹಳ ರಸ್ತೆಗಳನ್ನು ಕಟ್ಟಿಸಿದೆ ಆ ದೇಶಕ್ಕಾಗಿ... ಚೀನಾ ಬಹಳ ಆರ್ಥಿಕ ಸಹಾಯವೂ ಮಾಡುತ್ತಿದೆ.. ನಮ್ಮ ಭಾರತದ ಭೂಮಿಯನ್ನು ಸ್ವಲ್ಪ ಸ್ವಲ್ಪವಾಗಿ ಕಬಳಿಸಲು ಈ ಕುತಂತ್ರ ಅಂತ ಬಹಳ ಜನರ ಅನಿಸಿಕೆ.. ಇದು ಒಳ್ಳೆ ಪ್ರಗತಿ ಅಂತು ಅಲ್ಲ.. ಅಷ್ಟು ಹೇಳಬಲ್ಲೆ..
ReplyDeleteನಿಮ್ಮ ಪ್ರವಾಸ ಕಥನ ಅದ್ಭುತ! ಮೈ ನವಿರೇಳುವ ಅನುಭವ! ಧನ್ಯವಾದ
ReplyDelete